ಹರಿಮೇಧಾ
ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ
ಸ್ಮರಣ ಸಂಚಿಕೆ
ಬಿಡುಗಡೆಯ ದಿನಾಂಕ  : ೩೧.೧೨.೨೦೦೫

ಇತಿಹಾಸ-ಪುರಾಣ ಪ್ರಪಂಚಕ್ಕೆ ಶ್ರೀಮಧ್ವರ ಕೊಡುಗೆ

-ಆನಂದತೀರ್ಥ. ವಿ. ನಾಗಸಂಪಿಗೆ
ನಿರ್ದೇಶಕರು, ಪೂರ್ಣಪ್ರಜ್ಞ ಸಂಶೋಧಾನಾ ಸಂಸ್ಥಾನ, ಬೆಂಗಳೂರು- ೨೮
ಇತಿಹಾಸ ಪುರಾಣಗಳು, ವೇದಗಳ - ತಿರುಳು. ಇತಿಹಾಸ ಪುರಾಣಗಳ ಬಿಳಕಿನಲ್ಲೇ ವೇದಗಳನ್ನು  ಅರ್ಥೈಸಿ ಕೊಳ್ಳಬೇಕು. ಪುರಾಣೇತಿಹಾಸಗಳ ಆಳ ಮತ್ತು ವ್ಯಾಪಕಾಧ್ಯಯನವಿಲ್ಲದ ವೇದ ಪ್ರವಚನಕಾರರನ್ನು ಕಂಡು ವೇದವೇ ಹೆದರಿ ಹಿಮ್ಮೆಟ್ಟುತ್ತದೆ ಎನ್ನುತ್ತಾರೆ ಪ್ರಾಚೀನರು -
''ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ |
ಬಿಭೇತ್ಯಲ್ಪಶ್ರುತಾದ್ ವೇದೋ ಮಾನಯಂ ಪ್ರಚಲೇದಿತಿ ||
        ಈ ಹಿನ್ನೆಲೆಯಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಸಾಹಿತ್ಯದ ಅಧ್ಯಯನ, ಆಧ್ಯಾತ್ಮದ ಪ್ರಗತಿಗೆ ಅನಿವಾರ್ಯ. ಆಚಾರ್ಯ ಪುರುಷರೆಂದು ಪ್ರಖ್ಯಾತರಾದ ಅನೇಕರು ಇತಿಹಾಸ ಪುರಾಣಗಳಲ್ಲಿ ಅಪಾತತಃ (ಮೇಲು ನೊಟದಲ್ಲಿ)
ಕಾಣುವ ವಿರೋಧಗಳನ್ನು ಬಗೆಹರಿಸಲಾಗದೇ ಅವುಗಳ ಹೃದಯವನ್ನರಿಯದೇ ವೇದ-ಸೂತ್ರಗಳಿಗೆ ಅಪ್ರಬುದ್ಧ ವ್ಯಾಖ್ಯೆ ನೀಡಿ 'ಜ್ಞಾನದ ಕದವನ್ನೇ' ಶಾಶ್ವತವಾಗಿ ಮುಚ್ಚಿದರು. ಇಂತಹ ದುರ್ಭರ ಪ್ರಸಂಗದಲ್ಲಿ ಇತಿಹಾಸ ಪುರಾಣಗಳ ಮಹತ್ವವನ್ನು ಬಣ್ಣಿಸುವ ಆಚಾರ್ಯರ ಅಗತ್ಯವಿದ್ದಿತು. ಆ ಕೊರತೆಯನ್ನು ನೀಗಿದ ಏಕಮೇವ ಅದ್ವಿತೀಯಾಚಾರ್ಯ ಪುರುಷರೇ - ಶ್ರೀಮಧ್ವರು.
        ಪುರಾಣಗಳೆಂಬ ಕ್ಷೀರಸಾಗರವನ್ನು ನಿರ್ಮಥಿಸಿ ಮಹಾಭಾರತ ತಾತ್ಪರ್ಯ - ಯಮಕಭಾರತ - ಭಾಗವತ ತಾತ್ಪರ್ಯಗಳೆಂಬ ನವನೀತ ಕೃತಿಗಳನ್ನು ಕರುಣಿಸಿದರು. ಈ ಮೂರು ಗ್ರಂಥಗಳು ನೃಸಿಂಹ ದೇವರ ಮೂರು ಕಣ್ಣುಗಳಂತೆ, ಬಗೆಯಲ್ಲಿ ಬೇರೂರಿದ ಅಜ್ಞಾನವನ್ನು ವಿದೂರಗೊಳಿಸಿ, ಶುದ್ಧವಾದ ಬೆಳಕನ್ನು ನೀಡುವುದರ ಜೊತೆ ಎಲ್ಲ ಪೌರಾಣಿಕ ಸಾಹಿತ್ಯದ ಅಧ್ಯಯನಕ್ಕೆ ಸಾರ್ವಕಾಲಿಕ ಮಾರ್ಗದರ್ಶಿಗಳಾಗಿವೆ.
'ಸಮಸ್ತಶಾಸ್ತ್ರಾರ್ಥವಿನಿರ್ಣಯೋಯಂ ' (ಮ.ತಾ.೩೨\೧೭೨)
ಪುರಾಣಸ್ಥಾನಪಾಂಥಾನಾಂ ಅಭಾಷಾತ್ರಯವೇದಿನಾಮ್ |
ಭವತಾ ಸುಸಖಾ ಚಕ್ರೇ ಶ್ರೀಭಾಗವತನಿರ್ಣಯಃ || (ಸು.ವಿ. ೧೫)

ಭಗವತ್ಪಾದರ ಸಂಶೋಧನಪ್ರಜ್ಞೆ
        ಇಂದು' ಸಂಶೋಧನೆ' ಯ ಹೆಸರಿನಲ್ಲಿ ಅಸತ್ಯ ಹಾಗೂ ಅಪ್ರಬುದ್ಧ ವಿಚಾರ ಸಾಹಿತ್ಯವನ್ನು ಮಂಡಿಸುವ ಪ್ರವೃತ್ತಿ ಎಲ್ಲೆಡೆ ಕಾಣಬರುತ್ತದೆ. ಆದರೆ ವಸ್ತುನಿಷ್ಠವಾದ ಪ್ರಾಮಾಣಿಕ ಅಭಿವ್ಯಕ್ತಿ ಅತ್ಯಲ್ಪ. ಏಳು ಶತಮಾನಗಳ ಹಿಂದೆ, ವಿಶ್ವದೆಲ್ಲೆಡೆ ಸಂಚರಿಸಿ, ದೊರಕಿದ ಮಹಾಭಾರತ- ಭಾಗವತಾದಿಗ್ರಂಥಗಳ ಅನೇಕ ತಾಲಪತ್ರಗಳನ್ನು (Manuscripta) ಪರಿಶೀಲಿಸಿ ಶುದ್ಧಪಾಠ - ವಾಸ್ತವ ಕಥಾ ಪ್ರಮೇಯಗಳನ್ನು ಜಗತ್ತಿಗೆ ನೀಡಿದ ಭಗವತ್ಪಾದರ ಸಂಶೋಧನ ಪ್ರಜ್ಞೆ-ಪ್ರತಿಭೆ-ಕೌಶಲಗಳು ದೇವೋತ್ತಮರಿಗೆ ಮಾತ್ರ ಗಮ್ಯ.
        ಯಾವುದನ್ನು ಅಂದು ಕೆಲವು ತಾಲಪತ್ರಗಳಲ್ಲಿ ಕಂಡು ಇದೇ ಮಹಾಭಾರತದ ಮೊದಲ ಶ್ಲೋಕವೆಂದು (ನಾರಾಯಣಂ ಸುರಗುರುಂ ....ವಂದ್ಯಮ್) ನಿರ್ಧರಿಸಿಕೊಟ್ಟರೋ ಆ ಪಾಥ, ಇಂದಿಗೂ ಭಂಡಾರ್ಕರ್ ಪ್ರಾಚ್ಯವಿದ್ಯಾ - ಸಂಶೋಧನಾಲಯದವರು ಸಂಶೋಧಿಸಿ ಮುದ್ರಿಸಿದ ಮಹಾಭಾರತ ಗ್ರಂಥದ ಪಾಠಾಂತರಗಳಲ್ಲಿ ದಾಳಲಾಗಿದೆ. ಆದರೆ, ಹೆಚ್ಚಿನ ಪುಸ್ತಕಗಳಲ್ಲಿ ಪ್ರಾಂರಂಭದಲ್ಲಿ ' ನಾರಾಯಣಂ ನಮಸ್ಕೃತ್ಯ' ಎಂಬ ಶ್ಲೋಕವಿದೆಯೆಂಬ ಒಂದೇ ಕಾರಣದಿಂದ ಅಜ್ಞ ಲೇಖಕ ಸಂವಾದಕ್ಕೆ ಮನ್ನಣೆ ನೀಡಿ ವ್ಯಾಸರು ಹಾಡಿದ ಮಂಗಲಗಾಥೆಯನ್ನೇ ತಿರಸ್ಕರಿಸಿ ಮಹಾಭಾರತದ ಮೂಲತತ್ವಕ್ಕೇ ಅಪಚಾರವೆಸಗುತ್ತಿರುವುದು ಸಂಶೋಧನ ಪ್ರಜ್ಞೆಯ ದುರಂತ.

ಶ್ರೀವೇದವ್ಯಾಸರ ಸ್ವರೂಪಪರಿಚಯ
        ಆಚಾರ್ಯರ ಇತಿಹಾಸ-ಪುರಾಣಗಳ ವ್ಯಾಖ್ಯೆಯ ಅಪೂರ್ವತೆಯನ್ನು ಗಮನಿಸುವ ಮೊದಲು, ಪುರಾಣ ಕರ್ತೃಗಳಾದ ಶ್ರೀವ್ಯಾಸರ ಬಗ್ಗೆ ನೀಡಿದ ಅಪೂರ್ವ ಮಾಹಿತಿಯ ಒಂದಂಶವನ್ನು ಮಾತ್ರ ಸ್ಪರ್ಶಿಸುತ್ತಿದ್ದೇನೆ. ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಶ್ರೀವ್ಯಾಸರ ಅವತಾರ ಕಥೆಯನ್ನು ಭಗವತ್ಪಾದರು ರೋಚಕವಾಗಿ ಬಣ್ಣಿಸಿ ಸಾಕ್ಷಾತ್ ನಾರಾಯಣನೇ ವ್ಯಾಸರಾಗಿ ಅವತರಿಸಿದರೆಂದೂ ಸ್ಫುಟಪಡಿಸಿದ್ದಾರೆ.
        ಆದರೆ ಕೆಲವು ಪುರಾಣಗಳಲ್ಲಿ ವ್ಯಾಸರು ನಾರಾಯಣನ ಅವತಾರ ಅಲ್ಲ ಎಂದಿದೆ. ಇವೆರಡೂ ಸಮಂಜಸವಾಗಲಾರದಷ್ಟೇ? ಈ ಸಮಸ್ಯೆ ಬಗೆಹರಿಸುವುದು ಹೇಗೆ? ಈ ಬಗ್ಗೆ ಬಹಳ ಮಂದಿ ದಾರ್ಶನಿಕರಿಗೆ ಅಸ್ಪಷ್ಟತೆ ಇದೆ. ಆಚಾರ್ಯಶಂಕರ ಗೊಂದಲ ಗಮನಿಸಿ -
        'ವೇಧಾಃ ಸ್ವಾಗೋಜಿತಃ ಕೃಷ್ಣಃ ' ಎಂಬ ವಿಷ್ಣು ಸಹಸ್ರನಾಮ ವ್ಯಾಖ್ಯೆಯಲ್ಲಿ ' ಕೃಷ್ಣದ್ವೈಪಾಯನಂ ವ್ಯಾಸಂ ವಿದ್ಧಿ ನಾರಾಯಣಂ ಪ್ರಭುಮ್.....ಭವೇತ್ ' ಎಂಬುದಾಗಿ ಮಹಾಭಾರತವನ್ನು ಶ್ರೀಮನ್ನಾರಾಯಣನಲ್ಲದೇ ಯಾರು ಮಾಡಿಯಾರು? ಆ ನಾರಾಯಣನೇ ವ್ಯಾಸರೆಂದು ತಿಳಿ ಎಂಬ ಪುರಾಣವಚನವನ್ನಾದರಿಸಿ, ಸರ್ವಜ್ಞನಾದ ವಿಷ್ಣುವೇ ವ್ಯಾಸರಾಗಿ ಅವತರಿಸಿರುವರೆಂದು ಪ್ರತಿಪಾದಿಸಿದ್ದಾರೆ. ಅವರ ಗೀತಾಭಾಷ್ಯದ ಉಪೋದ್ಘಾತವೂ ಇದೇ ಅಭ್ಪ್ರಾಯವನ್ನು ಪೋಷಿಸಿದೆ.
        ಆದರೆ ಇದೇ ಶಂಕರಾಚಾರ್ಯರು ' ಯಾವದಧಿಕಾರಮವಸ್ಥಿತಿರಾಧಿಕಾರಿಕಾಣಾಮ್ ' ಎಂಬ ಬ್ರಹ್ಮಸೂತ್ರ (೩.೨.೩೨) ವ್ಯಾಖ್ಯಾನ ಪ್ರಸಂಗದಲ್ಲಿ ' ಅಪಾಂತರತಮ ' ಎಂಬ ವೇದಾಚಾರ್ಯನು ಮತ್ತು ಪುರಾಣನಿರ್ಮಾತೃವು ಕಲಿದ್ವಾಪರಯುಗಗಳ ಸಂಧಿಯಲ್ಲಿ ವಿಷ್ಣುವಿನ ಅಪ್ಪಣೆಯ ಮೇರೆಗೆ ಕೃಷ್ಣದ್ವೈಪಾಯನನಾಗಿ ಅವತರಿಸಿದನು. 'ಅಪಾಂತರತಮೋ ನಾಮವೇದಾಚಾರ್ಯಃ ಪುರಾಣರ್ಷಿ ಕಲಿದ್ವಾಪರಯೋಃ ಸಂಧೌ ವಿಷ್ಣುನಿಯೋಗಾತ್ ಕೃಷ್ಣದ್ವೈಪಾಯನ ಸಂಬಭೂವ' ಎಂದಿದ್ದಾರೆ. ಹೀಗೆ ಎಡವಿದವರು ಹಲವು ಮಂದಿ.
        ಶ್ರೀಮದಾಚಾರ್ಯರು ಈ ಸಮಸ್ಯೆಯನ್ನು ಭಾಗವತ ತಾತ್ಪರ್ಯದಲ್ಲಿ ಹೃದಯಂಗಮವಾಗಿ ಪರಿಹರಿಸಿದ್ದಾರೆ.
        ಪ್ರತಿದ್ವಾಪರದಲ್ಲೂ ವ್ಯಾಸಾವತಾರವಿದೆ. ವೇದವಿಭಾಗಾಧಿಕಾರ್ಯಗಳೂ ನಡೆಯುತ್ತವೆ. ಕೆಲವೊಮ್ಮೆ ಸಾಕ್ಷಾತ್ ನಾರಾಯಣನೇ ವ್ಯಾಸನಾಗಿ ಅವತರಿಸಿ ವೇದವಿಭಾಗ ಮತ್ತು ಸೂತ್ರರಚನೆಯನ್ನೂ ಮಾಡುವುದಿದೆ. ಕೆಲವೊಮ್ಮೆ ವೇದವಿಭಾಗಮಾಡುವವರಲ್ಲಿ ( ಉದಾ: ಮುಂದಿನ ದ್ವಾಪರದಲ್ಲಿ ಅಶ್ವತ್ಥಾಮಾಚಾರ್ಯರಲ್ಲಿ) ಸನ್ನಿಹಿತನಾಗಿ ಆ ಕಾರ್ಯ ನಡೆಸಿ ಭಕ್ತರಿಗೆ ಆ ಕೀರ್ತಿಯನ್ನು ನೀಡುವುದೂ ಇದೆ. ಈ ಹಿನ್ನೆಲೆಯಲ್ಲಿ ೩,೭,೧೬,೨೫,೨೮ ನೇ ದ್ವಾಪರಯುಗಗಳಲ್ಲಿ ಸಾಕ್ಷಾತ್ ವಿಶಾಹ್ಣುವೇ ವ್ಯಾಸನಾಗಿ ಅವತರಿಸುವನು. ಗತಿಸಿದ ೨೮ ನೆಯ ದ್ವಾಪರದಲ್ಲಿ ವಿಷ್ಣುವೇ ವ್ಯಾಸನಾಗಿ ವೇದವಿಭಾಗಾದಿಕಾರ್ಯ ಮಾಡಿರುವನು. ೧,೨,೪,೮,೯ ಇತ್ಯಾದಿ ದ್ವಾಪರಯುಗಗಳಲ್ಲಿ ವೇದವಿಭಜನೆ ಮಾಡುವ ಮಹಾತ್ಮರಿಗೆ ಆಚಾರ್ಯನಾಗಿ ಮಾರ್ಗದರ್ಶಿಯಗಿ ಆ ಕಾರ್ಯ ನಡೆಸಿಕೊಡುವನು. ಹೀಗೆ ೨೮ ನೇ ದ್ವಾಪರಯುಗದಲ್ಲಿ ನಾರಾಯಣನೇ ವ್ಯಾಸನಾಗಿ ಅವತರಿಸುವನೆಂಬ ಹಿನ್ನೆಲೆಯಲ್ಲಿ ಸ್ಕಾಂದ - ಬ್ರಹ್ಮಾಂಡಾದಿ ಪುರಾಣಗಳು ಹೊರಟಿವೆ.
'ಸತ್ಯವತ್ಯಾಂ ಪರಾಶರಾತ್ | ಉತ್ಸನ್ನಾನ್ ಭಗವಾನ್ ವೇದಾನ್
ಉಜ್ಜಹಾರ ಹರಿಃ ಸ್ವಯಮ್ || ತೃತೀಯ ಸಪ್ತಮೇ ಚೈವ
ಷೋಡಶೇ ಪಂಚವಿಂಶಕೇ | ಅಷ್ಟಾವಿಂಶತಿಮೇ ವ್ಯಾಸಃ
ಸತ್ಯವತ್ಯಾಮಜಾಯತ || ವ್ಯಾಸಾಚಾರ್ಯಸ್ತು ಪೂರ್ವೇಷು
ಚರಮೇ ಸ್ವಯಮೇವ ತು | ವಿವ್ಯಾಸ ವೇದಾನ್......'
(ಭಾಗ.ತಾ. ೨.೭.೩೬)
        ಕೆಲವು ದ್ವಾಪರಗಳಲ್ಲಿ (೧,೨,೪ ಇತ್ಯಾದಿಗಳಲ್ಲಿ) ನಾರಾಯಣನು 'ವ್ಯಾಸ' ನೆಂಬ ಸ್ಥಾನದಲ್ಲಿರುವ ವ್ಯಕ್ತಿಯಲ್ಲ. ವ್ಯಾಸರೂಪದಿಂದ ಸನ್ನಿಹಿತನಾಗಿ ಕಾರ್ಯ ಮಾಡುವನಾದ್ದರಿಂದ ವ್ಯಾಸರೆಲ್ಲರೂ ನಾರಾಯಣಾವತಾರರಲ್ಲವೆಂಬ ಹಿನ್ನೆಲೆಯಲ್ಲಿ ವಿಷ್ಣು-ಪಾದ್ಮ-ಶೈವಪುರಾಣಗಳು ಹೊರಟಿವೆ. ಇಂತಹ ಮರ್ಗದರ್ಶನವಿಲ್ಲದಲ್ಲಿ ಸಮಸ್ಯೆ ಚಿರಸ್ಥಾಯಿ ಯಾಗಿರುತ್ತದೆ ಯೆಂಬುದು ಗಮನಾರ್ಹ.
        ಇದು ಸಮಸ್ಯೆಯ ಒಂದು ಮುಖವಾದರೆ, ವ್ಯಾಸರ ವ್ಯಕ್ತಿತ್ವಕ್ಕೆ ನಡೆದ ಅಪಚಾರವೇನೂ ಕಮ್ಮಿಯಲ್ಲ. ಸಿದ್ಧಾಂತಬಿಂದುವಿನ ಕೊನೆಯಲ್ಲಿ ಮಧುಸೂದನ ಸರಸ್ವತಿಗಳು ' ಸೂತ್ರಸಾಹಿತ್ಯದ ಮೂಲಕ ವೇದದ ಹೃದಯವನ್ನು ತೆರೆಯಲಸಮರ್ಥ ವೇದವ್ಯಾಸರನ್ನು ನಾನು ಸ್ತುತುಸುವಿದಿಲ್ಲ. ಸೂತ್ರದ ಅಗತ್ಯವಿಲ್ಲದೆಯೇ ವೇದದ ಅಭಿಪ್ರಾಯವನ್ನು ಸ್ಫುಟಪಡಿಸಿದ ಶ್ರೀಶಂಕರಾಚಾರ್ಯರು ಮತ್ತು ಸುರೇಶ್ವರಾಚಾರ್ಯರನ್ನು ನಮಸ್ಕರಿಸುತ್ತೇವೆ' ಎಂದಿದ್ದಾರೆ.
ನಸ್ತೌಮ್ಯಹಂ ವ್ಯಾಸಮಶೇಷಮರ್ಥಂ ಸಮ್ಯಙ್ ನ ಸೂತ್ರೈರಪಿ ಯೋ ಬಬಂಧ |
ವಿನಾಪಿ ತೈಃ ಸಂಗ್ರಥಿತಾಖಿಲಾರ್ಥಂ ಶ್ರೀಶಂಕರಂ ನೌಮಿ ಸುರೇಶ್ವರಾರ್ಯಮ್ ||
        ಈ ವಾಕ್ಯವು ಶ್ರೀಶಂಕರಾಚಾರ್ಯರ ಪ್ರತಿಭೆಯನ್ನು ಗೌರವಿಸುವ ಹಿನ್ನೆಲೆಯಲ್ಲಿ ಬಂದಿದೆಯಾದರೂ 'ವ್ಯಾಸರು ವೇದದ ಹೃದಯವನ್ನು ಸರಿಯಾಗಿ ತಿಳಿಸಿಲ್ಲ ' ಎಂಬ ಆಶಯವು ಸ್ಫುಟವಾಗಿಯೇ ಕಾಣುತ್ತದೆ. ಇದರಂತೆ ಭಾಮತಿಯಲ್ಲಿ - 'ಆನಂದಮಯನು ಬ್ರಹ್ಮನಲ್ಲ ಅವನ ಪುಚ್ಛನೇ ನಿಜವಾದ ಬ್ರಹ್ಮನು. ಅಲ್ಲಿ ಬ್ರಹ್ಮಶಬ್ದದ ಅಭ್ಯಾಸವಿದೆ. ಆನಂದಮಯನೇ ಬ್ರಹ್ಮನೆಂಬ ಸೂತ್ರಕಾರರ ಅಭಿಪ್ರಾಯಕ್ಕೂ ಅವನ ಪುಚ್ಛನೇ ಬ್ರಹ್ಮನೆಂಬ ಶ್ರೌತವಾದಕ್ಕೂ ವಿರೋಧ ಬಂದಾಗ, ಸೂತ್ರಕಾರರೇ ವೇದದ ಅಭಿಪ್ರಾಯವನ್ನು ಅರಿಯದ ಕಾರಣ ಉಪೇಕ್ಷಾರ್ಹರಾಗುತ್ತಾರೆ' ಎಂದಿದ್ದಾರೆ. 'ಶ್ರುತಿ ಸೂತ್ರಯೋರ್ವಿರೋಧೇ ತು ಗುಣೇತ್ವನ್ಯಾಯಕಲ್ಪನಾ'
        ಇಂತಹ ಅನೇಕ ವ್ಯಾಸರನಿಂದಾವಚನಗಳನ್ನು ಪರಕೀಯರ ಗ್ರಂಥಗಳಲ್ಲಿ ತೆಗೆದು ತೋರಬಹುದಾಗಿದೆ. ಇದು ನಾರಾಯಣಾವತಾರಿಗಳಾದ ಸರ್ವಜ್ಞರಾದ ಬಾದರಾಯಣರಿಗೆ ಮಾಡುವ ಅಪಚಾರವಲ್ಲವೇ?
        ಶ್ರೀಮಧ್ವರು ವ್ಯಾಸರ ವ್ಯಕ್ತಿತ್ವವನ್ನು ಸ್ಫುಟವಾಗಿ ತಿಳಿಸಿದ್ದಾರೆ - ಇತರ ಅವತಾರಗಳಂತೆ ಗುರುಕುಲವಾಸದ ಆದರ್ಶವನ್ನೂ ಚೋಕಜೇ ಅವತಾರವಾದ ತತ್ ಕ್ಷಣದಲ್ಲಿಯೇ ಶ್ರೀವ್ಯಾಸರು ಏಳುವರ್ಷದ ಬಾಲಕನಂತೆ ಬೆಳೆದು, ಉಪನೀತರಾಗಿ ವೇದವಿಭಾಗ ಮಾಡಿದರು. ನಂತರ ಸೂತ್ರಗಳರಚನೆ, ಇತಿಹಾಸ ಪುರಾಣಗಳ ನಿರ್ಮಾಣ, ಶ್ರೀವ್ಯಾಸರು ಮಹಾಭಾರತ ರಚನೆಮಾಡಿದ್ದು ಅವರ ಅವತಾರನಂತರದ ಮುರನೆಯ ವರ್ಷದಲ್ಲಿ. ವ್ಯಾಸರ ಸಮಗ್ರ ಭಾರತದ ರಚನೆಯ ನಂತರ ೫೯೭ ವರ್ಷಗಳುರುಳಿದಾಗ ದೃತರಾಷ್ಟ್ರನೇ ಮೊದಲಾದ ಭಾರತದ ಪ್ರಮುಖ ಪಾತ್ರಧಾರಿಗಳು ಜನಿಸಿದ್ದಾರೆ. ಇದು ಶ್ರೀರಾಮನ ಸೀತಾಪರಿತ್ಯಾಗದ ನಂತರ ನಿರ್ಮಿತವಾದ ವಾಲ್ಮೀಕಿ  ರಾಮಾಯಣ ದಂತಹ ಕೃತಿಯಲ್ಲ. ಪಾಂಡವರು ಶ್ರೀಕೃಷ್ಣ ಮುತಾದವರ ಹುಟ್ಟಿಗಿಂತ ಮುಂಚೆಯೇ ಭಾರತ-ಭಾಗವತಗಳು ನಿರ್ಮಿತವಾಗಿವೆ. - 'ವ್ಯಾಸಃ ಷಟ್ ಶತವರ್ಷೀಯಃ ಧೃತರಾಷ್ಟ್ರಮಜೀಜನತ್' (ಭಾಗ ತಾ ೨.೧.೮)
        ಇದು ಅವರ ಸಾರ್ವಜ್ಞ್ಯವನ್ನು ಅರ್ಥವಿಸಿಕೊಳ್ಳಲು ಒಂದು ನಿದರ್ಶನ. ಈ ದೃಷ್ಟಿಯಿಂದ 'ಕೋಹ್ಯನ್ಯಃ ಪುಡರೀಕಾಕ್ಷಾತ್ ಮಹಾಭಾರತಕೃದ್ಭವೇತ್ ' ಇತ್ಯಾದಿ ಮಾತುಗಳು ಬಂದಿವೆ. ಇಂತಹ ಅನಂತ ಪ್ರಮೇಯ ರತ್ನಗಳ ಆಕರ ಭಗವತ್ಪಾದರ ಇತಿಹಾಸ - ಪುರಾಣನಿರ್ಣಯ ಗ್ರಂಥಗಳು.
ಆಚಾರ್ಯಾಃ ಶ್ರೀಮದಾಚಾರ್ಯಾಃ ಸಂತು ಮೇ ಜನ್ಮ ಜನ್ಮನಿ |  
ಇಂತಿ ಸುಜನ ವಿಧೇಯ
ಆನಂದತೀರ್ಥ. ವಿ. ನಾಗಸಂಪಿಗೆ