ಭಂಡಾರಕೇರಿ ಮಠ,ಉಡುಪಿ



ಗುರು ಸಂದೇಶ
ಶ್ರೀವಿದ್ಯಾಮಾನ್ಯತೀರ್ಥರ ದಿವ್ಯ ಸಂದೇಶ

ಶ್ರೀವಿದ್ಯೇಶತೀರ್ಥರ ಸಂದೇಶ

ಶ್ರೀವಿದ್ಯೇಶತೀರ್ಥರ ಸುಭಾಷಿತ




ವೈಶಾಖ ಶುದ್ಧ ಏಕಾದಶಿಯಂದು ಹರಿಪದವನ್ನು ಸೇರಿದ
ಶ್ರೀವಿದ್ಯಾಮಾನ್ಯತೀರ್ಥರ ದಿವ್ಯ ಸಂದೇಶ
ಅನವದ್ಯಾತ್ಮ ಚಾರಿತ್ರ್ಯಂವಾದಿಖದ್ಯೋತ ಭಾಸ್ಕರಮ್ \
ವಿದ್ಯಾಮಾನ್ಯಗುರುಂ ವಂದೇ ವಿದ್ಯಾವಿದ್ಯೋತ  ಭಾಸ್ವರಮ್ \\
ಶ್ರೀ ನಾರಾಯಣ ಅವತಾರನಾದ ಶ್ರೀಕೃಷ್ಣನು ಪರದೇವತೆಯು ಇದು ಸತ್ಯ. ಇದು ಸತ್ಯ. ಇದು ಸತ್ಯ. ಈ ತತ್ವಜ್ಞಾನವನ್ನು ದೃಢಪಡಿಸಿಕೊಳ್ಳು. ಶ್ರೀ ನಾರಾಯಣ ಸ್ವರೂಪ ಶ್ರೀ ಕೃಷ್ಣನನ್ನು ಸ್ಮರಿಸು. ಭಜಿಸು, ನಮಿಸು, ಶರಣೆನ್ನು. ಶ್ರೀ ಕೃಷ್ಣ ವಿಗ್ರಹವನ್ನು ನೋಡು. ಅವನ ಕಥೆಗಳನ್ನು ಕೇಳು.  ಶ್ರೀ ಕೃಷ್ಣನ ಪಾದ ತುಳಸಿಯನ್ನು ಆಘ್ರಾಣಿಸು. ಅವನ ಪಾದಸ್ಪರ್ಶವನ್ನು ಮಾಡು. ಅವನಿಗೆ ಸಮರ್ಪಿತವಾದ ಹವಿಷ್ಯಾನ್ನವನ್ನು ಭುಂಜಿಸು. ಶ್ರೀ ಕೃಷ್ಣ ಮಂದಿರಕ್ಕೆ ಹೋಗು. ಪರೋಪಕಾರವನ್ನು ಮಾಡು. ಮೊರೆ ಹೊಂದುವಜನರನ್ನು ರಕ್ಷಿಸು. ಸತ್ಯ ಪ್ರಿಯ ಮತ್ಥು ಹಿತನುಡಿಗಳನ್ನು ಆಡು. ಅರ್ಥಿಗಳು ಅಪೇಕ್ಷಿಸುವ ವಸ್ತುಗಳನ್ನು ಕೊಡು. ಸಜ್ಜನರ ಸಂಸರ್ಗವನ್ನು ಮಾಡು. ಭೂತದಯೆ ಉಳ್ಳವನಾಗು. ಮಾತಾಪಿತೃ ಭಕ್ತಿಮಾನ್ ಆಗು. ದೊಡ್ಡವರಲ್ಲಿ ಗೌರವ ಬುದ್ಧಿಯುಳ್ಳವನಾಗು. ಶ್ರೀ ಕೃಷ್ಣನಲ್ಲಿ ಪರಮಭಕ್ತರಾಗಿ ಜ್ಞಾನಿಗಳೂ ಆಗಿ ಇರುವವರನ್ನೇ ಗುರುಗಳನ್ನಾಗಿ ಸ್ವೀಕರಿಸು. ಹೆಂಡತಿ ಮಕ್ಕಳಿಗೆ ಹಿತೋಪದೇಶವನ್ನು ಮಾಡುತ್ತಾಇರು. ಗೋವುಗಳನ್ನು ರಕ್ಷಿಸು. ಬಹು ಸಜ್ಜನರ ಪಕ್ಷವನ್ನು ಸ್ವೀಕರಿಸು. ದೇಶಸೇವೆಯನ್ನು ದೇವರ ಸೇವೆ ಎಂಬ ಭಾವನೆಯಿಂದ ಮಾಡುತ್ತಿರು. ಸತ್ಸಿಂದ್ದಾಂತ ವಿರುದ್ಧ ವಾದಗಳನ್ನು ಖಂಡಿಸು. ಕಾಮ, ಕ್ರೋಧ, ಲೋಭಗಳನ್ನು ಬಿಡು. ದೇವರಲ್ಲಿ ದೇವರ ಅನುಗ್ರಹ ಮಾತ್ರವನ್ನು ಕೇಳು. ತನ್ನಿಂದ ಇತರರಿಗೆ ನೋವು ಆಗದಂತೆ ಜಾಗರೂಕನಾಗಿರು. ಯಾವ ಪ್ರಾಣಿಯನ್ನೂ ಹಿಂಸಿಸಬೇಡ. ಸುರಾಪಾನ ಮೊದಲಾದ ದುಶ್ಚಟಗಳನ್ನು ಬಿಡು. ಧನಪ್ರಾಪ್ತಿಗಾಗಿ ನೀಚಕೆಲಸವನ್ನು ಮಾಡಬಾರದು. ಅತಿಥಿ ಸತ್ಕಾರವನ್ನು ಮಾಡು. ಜಲ, ಅನ್ನ, ಔಷಧಗಳ ದಾನವನ್ನು, ಪಾತ್ರಾಪಾತ್ರ ವಿಚಾರವನ್ನು ಮಾಡದೆ ಮಾಡು. ಸ್ವರ್ಣ-ಗೋ-ಜ್ಞಾನದಾನಗಳನ್ನು ಸತ್ಪಾತ್ರಕ್ಕೇನೇ ಮಾಡು. ಸಂಸ್ಕೃತ ಭಾಷೆಯನ್ನು ಕಲಿಯುವವನಾಗು. ಗೀತಾ ವಿಷ್ಣುಸಹಸ್ರನಾಮ ಪಾಠವನ್ನು ಬಿಡಬೇಡ. ರಾಮಾಯಣ, ಬಾರತ, ಭಾಗವತಗಳನ್ನು ಕೇಳುತ್ತಾ ಇರು. ದುರ್ಲಬವಾದ ಮನುಷ್ಯ ಜನ್ಮವನ್ನು ವ್ಯರ್ಥ ಮಾಡಿಕೊಳ್ಳಬೇಡ.
ಶ್ರೀ ಶ್ರೀ ವಿದ್ಯಾಮಾನ್ಯ ಶ್ರೀಪಾದರು


ಶ್ರೀವಿದ್ಯೇಶತೀರ್ಥರ ಸಂದೇಶ
"ನಿಗಮ ಕಲ್ಪತರೋರ್ಗಳಿತಂ ಫಲಂ ಶುಕಮುಖಾದಮೃತದ್ರವಸಂಯುತಮ್ |
ಪಿಬತ ಭಾಗವತಂ ರಸಮಾಲಯಂ ಮುಹುರಹೋ ರಸಿಕಾ ಭುವಿ ಭಾವುಕಾಃ ||"
ಅರಿತು ಮನನ ಮಾಡಿ, ಅಳವಡಿಸಿಕೊಂಡು ಮುನ್ನೆಡೆಯಲು ದಾರಿದೀಪ
ಭಾಗವತದೀಪ್ತಿ ಸಂದೇಶ
ಎಲೋ ವಿಶ್ವಮಾನವ ! ಜೀವನದಲ್ಲಿ ಎಂದೂ ಹತಾಶನಾಗಬೇಡ, ಅದಮ್ಯ ಭಗೀರತ ಪ್ರಯತ್ನಮಾಡು, ಗುರು-ದೇವರಲ್ಲಿ ಅಚಲಭಕ್ತಿ ವಿಶ್ವಾಸಗಳನ್ನಿಡು. ಆತ್ಮವಿಶ್ವಾಸವನ್ನು ವೃದ್ಧಿಗೊಳಿಸು. ಇವುಗಳಿಂದ ನಿನ್ನಲ್ಲಿ ಸುಪ್ತವಾದ ಯೋಗ್ಯತಾ-ಸಾಮರ್ಥ್ಯವನ್ನು ಅದ್ಭುತವಾಗಿ ವಿಕಾಸಗೊಳಿಸು. ಆಗನೀನು ಹತಾಶನಾಗಲಾರೆ. ಭೋಗ-ವೈಭವೋಪೇತ ಜೀವನಕ್ಕಾಗಿ ಚಡಪಡಿಸಬೇಡ, ಚಡಪಡಿಸಿ ಕೆಡಬೇಡ, ಭ್ರಷ್ಟನಾಗ ಬೇಡ. ನೀತಿ-ಸಂಸ್ಕೃತಿ-ಮೌಲ್ಯಾಧರಿತ ಜೀವನದಿಂದ ವಿಶಿಷ್ಟನಾಗು. ಜೀವನದಲ್ಲಿ ದಃಖದಂತೆ ಸುಖವೂ ಅನಾಯಾಸವಾಗಿ ಪ್ರಾಪ್ತವಾಗುತ್ತದೆ. ಈ ಸತ್ಯದ ದರ್ಶನ ನಿನಗಾಗಲಿ. ಆದುದರಿಂದ ಸುಖಕ್ಕಾಗಿ ಅನ್ಯಾಯ-ವಂಚನೆ-ಚೌರ್ಯ-ಹತ್ಯೆ ಮುಂತಾದ ಕ್ರೂರ ಮಾರ್ಗಗಳನ್ನು ತುಳಿಯಬೇಡ. ತುಳಿದು ದಾನವನಾಗ ಬೇಡ. ನಿನ್ನ ಮಕ್ಕಳಲ್ಲಿ ಡ್ಯಾಡಿ-ಮಮ್ಮಿ ಸಂಸ್ಕೃತಿ ಬೇರೂರದಂತೆ ಎಚ್ಚರವಹಿಸು. ಮಡದಿ-ಮಕ್ಕಳಿಗೆ ನೀತಿ-ಸಂಸ್ಕೃತಿ-ಜೀವನಮೌಲ್ಯಗಳ ಶಿಕ್ಷಣವನ್ನು ನೀಡು. ಈ ಶಿಕ್ಷಣ ನೀಡುವ ಮುನ್ನ ನೀನು ಅವುಗಳನ್ನು ಜೀವನದಲ್ಲಿ ಅಳವಡಿಸುಕೊಳ್ಳು. ಈ ರೀತಿಯಿಂದ ಅವರಿಗೆ ನೀನುಆದರ್ಶನಾಗು. ಪರರ ಉದ್ವೇಗಕಾರಿಯಾದ ಮಾತಿನಂದ ಕೆರಳಬೇಡ. ನೀನು ಉದ್ವೇಗಕಾರಿಯಾದ ಮಾತಿನಿಂದ ಪರರನ್ನು ಕೆರಳಿಸಬೇಡ. ಬಿಗುಮಾನವನ್ನು ತ್ಯಜಿಸು. ಪ್ರತಿಯೊಬ್ಬರನ್ನು ಶ್ರೀ ರಾಮಚಂದ್ರನಂತೆ ಮಂದಸ್ಮಿತನಾಗಿ ಮೊದಲು ಮಧುರ ಹಿತನುಡಿಯನ್ನಾಡಿ ಸಂತೋಷಪಡಿಸು. ಇದುವೇ ವಾಙ್ಮಯ ತಪಸ್ಸು. ನಿನ್ನ ಕುಟುಂಬ ಸದಸ್ಯರ ಕಲ್ಯಾಣಕ್ಕಿಂತಲೂ ಮಿಗಿಲಾಗಿ ರಾಷ್ಟ್ರಕಲ್ಯಾಣ ನಿನಗೆ ಪ್ರಿಯವಾಗಲಿ, ಹತ್ತಿರವಾಗಲಿ. ಅದಕ್ಕಾಗಿ ಪ್ರಾಮಾಣಿಕವಾದ ಅಳಿಲು ಸೇವೆಯನ್ನಾದರೂ ಸಲ್ಲಿಸು. ದೇವರ ಪೂಜೆ ನಿನ್ನ ಜೀವನದ ಒಂದು ಅಂಗಮಾತ್ರವಾಗದಿರಲಿ. ನಿನ್ನ ಸಮಗ್ರ ಜೀವನವೇ ದೇವಪೂಜೆ-ಯಜ್ಞವಾಗಲಿ.ಆಗ ನೀನು ಮರಣಕ್ಕೆ ಅಂಜಲಾರೆ. ಜೀವನವನ್ನೇ ಭಗವಂತನ ಯಜ್ಞರೂಪದಲ್ಲಿ ರೂಪಿಸಿಕೊಂಡವನಿಗೆ ಮರಣವು ಪವಿತ್ರ ಅವಭೃತಸ್ನಾನವಾಗಬಲ್ಲದು. ಅದು ಜೀವಯಜ್ಞದ ಅಂತಿಮ ಅಂಗವಾಗಿ ಧನ್ಯತಾ ಸಂಪಾದಕವಾಗಬಲ್ಲದು. ಪರದೋಷ-ದೌರ್ಬಲ್ಯಗಳ ವಿಮರ್ಶೆಯಲ್ಲೇ ವ್ಯರ್ಥವಾಗಿ ಕಾಲಹರಣ ಮಾಡಬೇಡ. ಆದರೆ ನಿನ್ನ ದೋಷ-ದೌರ್ಜನ್ಯಗಳನ್ನು ನಿತ್ಯವೂ ತಪ್ಪದೇ ಪರಾಮರ್ಶಿಸು. ಬಳಿಕ ಅದಕ್ಕಾಗಿ ಪಶ್ಚಾತ್ತಾಪಪಡು. ಮರಳಿ ಜೀವನದಲ್ಲಿ ಅವುಗಳನ್ನು ಎಂದೂ ಸುಳಿಯದಷ್ಟು ಗಾಢವಾಗಿ ಪಶ್ಚಾತ್ತಾಪಪಡು. ಈ ಪಶ್ಚಾತ್ತಾಪದ ಹಿನ್ನೆಲೆಯಲ್ಲಿ ನೀನು ಮಾಡುವ ಹರಿನಾಮ ಸ್ಮರಣೆಯೇ ದೋಷಗಳಿಗೆ ಪ್ರಾಯಶ್ಚಿತ್ತ. ನಿನಗೆ ಪರರಿಂದ ತೊಂದರೆಯಾದರೆ ಸಹಿಸಿಕೋ. ಆದರೆ ಸಮಾಜಕ್ಕೆ ಇನ್ನೊಬ್ಬರಿಂದ ಬಾರಿ ತೊಂದರೆಯಾದರೆ ಸಹಿಸಬೇಡ.ಅವರನ್ನು ಕ್ಷಮಿಸಲೂ ಬೇಡ. ದುರ್ಜನರ ಅಸ್ವಾಭಾವಿಕವಾದ ಗುಣಗಳನ್ನು ಹೊಗಳಿ ಕೆಡಬೇಡ. ಏಕೆಂದರೆ ಅದರಿಂದ ಮೋಸಕ್ಕೊಳಗಾಗುವ ಅಪಾಯವಿದೆ. ಸಜ್ಜನರ ಅಸ್ವಾಭಾ ದೋಶಗಳನ್ನು ನೋಡಿ ನಿಂದಿಸಬೇಡ. ನಿಂದಿಸಿ ಪಾಪದಿಂದ ಮಲಿನವಾಗಬೇಡ. ಮಹಾತ್ಮರ ನೆಡೆ-ನುಡಿಗಳನ್ನು ಗಮನಿಸುತ್ತಾಇರು. ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸು. ಜೀವನದಲ್ಲಿ ಎದುರಾಗುವ ಸಮಸ್ಯೆ-ವಿಘ್ನ-ಅಡೆತಡೆಗಳನ್ನು ನೋಡಿ ಧೃತಿಗೆಡಬೇಡ. ಹತಾಶನಾಗಿ ಪಾಪಕರವಾದ ಅತ್ಮಹತ್ಯೆ ನಿರ್ಧಾರಕೈಗೊಳ್ಳಬೇಡ. ಈ ಎಲ್ಲಾ ಅನಿಷ್ಟಗಳಿಗೆ(ಅಡೆತಡೆ- ಸಮಸ್ಯೆ- ವಿಘ್ನಗಳಿಗೆ) ಮೂಲಕಾರಣ ದುರಿತಗಳಾಗಿವೆ. ಈ ಮೂಲ ದುರಿತದ ನಿವೃತ್ತಿಗಾಗಿ ದುರಿತ ನಿವಾರಕ ನರಸಿಂಹನನ್ನು ವಿಶೇಷವಾಗಿ ಭಜಿಸು. ಆತನ ಅನುಗ್ರಹದಿಂದ ಎಲ್ಲಾ ಸಮಸ್ಯೆ-ವಿಘ್ನಗಳನ್ನು ಮೆಟ್ಟಿ ನೀನು ಮುಂದೆ ಸಾಗುವೆ. ತೀವ್ರವಾಗಿ ಆರೋಗ್ಯ ಹದಗೆಟ್ಟಾಗಲೂ ಹತಾಶನಾಗಿ ಅತ್ಮಹತ್ಯೆಗೆ ಕೈಹಾಕಬೇಡ. ಅಚ್ಯುತ-ಅನಂತ-ಗೋವಿಂದ ಎಂಬ ನಾಮತ್ರಯವನ್ನು ಭಕ್ತಿ-ವಿಶ್ವಾಸಪೂರ್ವಕವಾಗಿ ಜಪಿಸು. ಈ ನಾಮತ್ರಯವೂ ಸಕಲರೋಗಗಳಿಗೂ ರಾಮಬಾಣ. ಇದು ಸತ್ಯ. ಇದು ಸತ್ಯ. ಇದುಸತ್ಯ. ಎದು ಭಗವಾನ್ ವೇದವ್ಯಾಸರ ಶಪಥಪೂರ್ವಕವಾದ ಉದ್ಗಾರ. ಪರರ ದುಃಖ ಸಂತಾಪ ಪರಿಹಾರಾರ್ಥ ನೀನು ದುಃಖ-ಸಂತಾಪಕ್ಕೋಳಗಾಗಲು ಸಿದ್ಧನಾಗು. ಇದುವೇ ಪಂಚಾಗ್ನಿ ತಪಸ್ಸು. ನಿತ್ಯವೂ ಮಹಾತ್ಮರ ಮುಖ ಕಮಲದಿಂದ ಭಗವತ್ ಕಥಾ ಶ್ರವಣಮಾಡು. ಅದಕ್ಕೆ ಅವಕಾಶವಿಲ್ಲದಿದ್ದರೆ ಅವರು ಬರೆದ ಗ್ರಂಥವನ್ನಾದರೂ ಓದು. ಹಬ್ಬ ಹರಿದಿನಗಳ ಮಹತ್ವವನ್ನು ಅರಿತು ಆಚರಿಸು. ಕುಕೃತ್ಯದಲ್ಲಿ ಲಜ್ಜಿತನಾಗು. ಭಗವಂತನಿಂದ ಪ್ರಾಪ್ತವಾದುದನ್ನು ಆತನಿಗೆ ಅರ್ಪಿಸು. ಹತ್ತು ಜನರಿಗೆ ಹಂಚು. ಬಳಿಕ ಸ್ವೀಕರಿಸು. ರಾಷ್ಟ್ರೀಯ ಪಿಡುಗಾದ ಭ್ರಷ್ಟಾಚಾರದಿಂದ ರಾಷ್ಟ್ರವನ್ನು ಉಳಿಸು-ಬೆಳಸು. ಈ ಭಯಾನಕ ಪಿಡುಗಿಗೆ ನಿನ್ನ ಕಾಮಾತಿರೇಕವೇ (ಬೇಕಿಲ್ಲದ ಬೇಕುಗಳಸಮೂಹ ಮೂಲ.ನೀನು ಈ ಅನಿಷ್ಟ ಕಾಮಾತೀರೇಕದ ನಿಗ್ರಹದಿಂದ ಈ ಭ್ರಷ್ಟಾಚಾರವನ್ನು ದೂರ ಮಾಡು. ಈ ಕಾಮಾತೀರೇಕದ ನಿಗ್ರಹಕ್ಕಾಗಿ ನೀನು ಸನತ್ ಕುಮಾರನಾದ ಶ್ರೀ ಭಗವಂತನ ರೂಪವನ್ನು ಧ್ಯಾನ ಮಾಡು.ಆತ ನಿನ್ನನ್ನು ನಿನ್ನಂತೆ ಆತನ ಉಪಾಸನೆಗೈಯುವ ಅನ್ಯರನ್ನೂ ಈ ಕಾಮಾತಿರೇಕದಿಂದ (ದುರಾಸೆಯಿಂದ) ರಕ್ಷಿಸುವನು ಇದರಿಂದ ರಾಷ್ಟ್ರವೇ ಭ್ರಷ್ಟಾಚಾರದಿಂದ ಮುಕ್ತವಾಗಿ ಶೋಭಿಸಬಲ್ಲದು.ಓ ವಿಶ್ವಮಾನವ ! ಈ ಕೆಳಗೆ ಕಾಣಿಸಿರುವ ಸ್ನಾನಗಳಿಂದ ಶುದ್ಧನಾಗು
  1. ಇಂದ್ರಿಯನಿಗ್ರಹವೇ ದಮತೀರ್ಥಸ್ನಾನ. 
  2. ಮಾತಪಿತೃ, ಗುರು-ಹಿರಿಯರ ಸೇವೆಯೇ ದಾಸರು ತೋರಿದ ಮಾಘ ಸ್ನಾನ.
  3. ಸತ್ಯ-ಹಿತ-ಪ್ರಿಯ ನುಡಿಯೇ ಸಂತರು ತಿಳಿಸಿದ ಸರಸ್ವತೀ ಸ್ನಾನ
  4. ಲೋಕಕಲ್ಯಾಣಕರ ಚಿಂತನವೇ ಚಿಂತನಶೀಲರು ತೋರಿದ ಮಾನಸ ಸರೋವರ ಸ್ನಾನ.
  5. ಮಹಾತ್ಮರ ಸಂಗವೇ ಭಾಗವತರುತೋರಿದ ಗಂಗಾಸ್ನಾನ.
  6. ಕಾಮ-ಕ್ರೋಧ-ಲೋಭಗಳ ತ್ಯಾಗವೇ ತ್ರಿವೇಣಿ ಸಂಗಮ ಸ್ನಾನ.
  7. ಪರೋಪಕಾರವೇ ಪ್ರಯಾಗ ಸ್ನಾನ.
  8. ಹರಿಪ್ರಿಯ - ದೇಶಹಿತ ಕರ್ತವ್ಯವೇ ಕಾರ್ತಿಕಸ್ನಾನ.
  9. ಪರರತಾಪವನ್ನು ನೀಗಿಸುವುದೇ ವೈಶಾಖಸ್ನಾನ.
  10. ಪುರಂದರ ವಿಠಲನ ಧ್ಯಾನವೇ ವಿಶ್ವಮಾನವ ವಿರಜಾಸ್ನಾನ.
ಓ ವಿಶ್ವಮಾನವ ! ಈ ಹತ್ತು ವಿಧ ಸ್ನಾನಗಳ ಅನುಷ್ಠಾನಕ್ಕಾಗಿ ತ್ವರೆ ಮಾಡು.    
ಶ್ರೀ ವಿದೇಶತೀರ್ಥ ಶ್ರೀಪಾದಗಳವರು
ಶ್ರೀಭಂಡಾರ ಕೇರಿ ಮಠ, ಉಡುಪಿ
ಶ್ರೀಭಾಗವತಾಶ್ರಮ ಗಿರಿನಗರ, ಬೆಂಗಳೂರು