ಎನ್ನುವ
ನುಡಿಯಲ್ಲಿ 'ಆತ್ಮ ಪತನಕ್ಕೆ ವಿಷಯ ವ್ಯಾಮೋಹದಿಂದ ಅಂಧರಾದ ದುಷ್ಟಜನರಿಂದ
ತುಂಬಿದ ಗೃಹವನ್ನು ಪರಿತ್ಯಜಿಸಿ, ವೈರಾಗ್ಯದಿಂದ 'ವನ' ಎನಿಸಿದ ಪವಿತ್ರತೀರ್ಥವನ್ನು
ಹೊಂದಬೇಕು. ಅಲ್ಲಿಯೂ 'ವನ' (ಭಜನೀಯ) ಎನಿಸಿದ ಸಜ್ಜನಸಂಘವನ್ನು ಹೊಂದಿ, ಅದರಿಂದ 'ವನ'
(ಜೀವನಂ ಭುವನಂ ವನಂ - ಜಲ) ಎನಿಸಿದ, ಭವಸಂತಾಪವನ್ನು ನೀಗಿಸುವ ಹರಿಕಥಾಗಂಗಾಜಲವನ್ನು
ಹೊಂದಿ ಹರಿಯನ್ನು ಸ್ವಿಸಬೇಕು.' ಎಂದು ಸಜ್ಜನರಿಗೆ ಹಿತೋಪದೇಶವನ್ನು ಮಾಡಿದ್ದಾನೆ.
ಇದೇ ಸಜ್ಜನರು ಸೇವಿಸಬೇಕಾದ
ಸಾಧುಮಾರ್ಗವೆಣ್ದು ಪ್ರತಿಪಾದಿಸಿದ್ದಾನೆ. ಇಂಥ ಸಾಧುಭಾಗವತಮಾರ್ಗವನ್ನು ಹಿಡಿದ
ಸಜ್ಜನರೂಪದಲ್ಲಿ ವಿದುರನನ್ನು ತೃತೀಯಸ್ಕಂಧವು ನಿದರ್ಶನವಾಗಿ ಚಿತ್ರಿಸಿದೆ.
ದುಷ್ಟದುರ್ಯೋಧನಾದಿಗಳಿಂದ ತುಂಬಿ,
ಅಂಧಕೂಪದಂತಿರುವ ಹಸ್ತಿನಾಪುರದ ಗೃಹವನ್ನು ತ್ಯಜಿಸಿ, ಆತ ವೈರಾಗ್ಯದಿಂದ 'ವನ'
(ತೀರ್ಥ)ವೆನಿಸಿದ ಪ್ರಭಾಸ, ಯಮುನಾ, ಗಂಗಾಮುಂತಾದ ಪವಿತ್ರಕ್ಷೇತ್ರಗಳನ್ನು ಹೊಂದಿದನು.
ಅಲ್ಲಿ 'ವನ' ಎನಿಸಿದ (ಸಜ್ಜನಸಂಘ) ಬ್ರಾಹ್ಮಣರು, ಉದ್ಧವ ಹಾಗೂಮೈತ್ರೇಯರನ್ನು
ಸಂದರ್ಶಿಸಿದನು. ಆ ಮಹಾತ್ಮರಿಂದ ಭಾಗವತಗಂಗಾಜಲವನ್ನು ಸ್ವೀಕರಿಸಿ ಹರಿಯನ್ನು ಸೇವಿಸಿ
ಎಲ್ಲರಿಗೂ ಮಾದರಿಯಾದನು. ಧರ್ಮಾಭಿಮಾನಿಯಾದ ಯಮನ ಅವತಾರಭೂತನಾದ ವಿದುರನು ಲೋಕಶಿಕ್ಷಣದ
ದೃಷ್ಟಿಯಿಂದ ತೋರಿದ ಈ ಭಾಗವತಧರ್ಮವು ಸರ್ವಸುಜನರಿಗೂ ಅನುಕರಣೀಯವಾಗಿದೆ.
ತೃತೀಯಸ್ಕಂಧದಲ್ಲಿ ಭಾಗವತತಾತ್ಪರ್ಯದ ಮಹತ್ತ್ವಪೂರ್ಣಪಾತ್ರ
೧. ವಿರಕ್ತನಾಗಿ ತೀರ್ಥಯಾತ್ರೆಗೆ
ತೆರಳಿದ ವಿದುರನು ಪ್ರಭಾಸಕ್ಷ್ತ್ರದಲ್ಲಿ ಯಾದವರ ವಿನಾಶದ ವಾರ್ತೆಯನ್ನು ಕೇಳಿದನೆಂದು
(೩.೧.೨೧) ಶ್ಲೋಕದಲ್ಲಿ ಉಲ್ಲೇಖವಿದೆ. ಆದರೆ ಇದಕ್ಕೆ ವಿರುದ್ಧವಾಗಿ (೩.೪.೨)
ಶ್ಲೋಕದಲ್ಲಿ ಉದ್ಧವನಿಂದ ಯಮುನಾತೀರದಲ್ಲಿ ಯಾದವರ ವಿನಾಶ (ಶಪ) ವನ್ನು ಕೇಳಿದನೆಂದು
ಉಲ್ಲೇಖವಿದೆ.
ಈ ವಿರೋಧಾಭಾಸವನ್ನು ಆಚಾರ್ಯಮಧ್ವರು -
ವಿದುರಸ್ತು ಪ್ರಭಾಸಸ್ಥಃ ಶಾಪಂ ಸಂಕ್ಷೇಪತೋಶೄಣೋತ್ |
ಯದೂನಾಂ ವಿಸ್ತರಾತ್ ಪಶ್ಚಾದುದ್ಧವಾದ್ ಯಮುನಾಮನು |
ಎಂಬ ಸ್ಕಾಂದವನ್ನು ಉದಾಹರಿಸಿ ಪರಿಹರಿಸಿದ್ದಾರೆ.
ವಿದುರನು ಬ್ರಾಹ್ಮಣರ ಮುಖದಿಂದ ಯಾದವರ
ವಿನಾಶ (ಶಪ) ವನ್ನು ಸಂಕ್ಷಿಪ್ತವಾಗಿ ಕೇಳಿದನು. ಅದನ್ನು ಮತ್ತೆ ವಿಸ್ತಾರವಾಗಿ
ಯಮುನಾತೀರದಲ್ಲಿ ಉದ್ಧವನಿಂದ ಕೇಳಿದನು. ಸಂಕ್ಷೇಪ-ವಿಸ್ತಾರಪ್ರಭೇದವ್ಯವಸ್ಥೆಯನ್ನು
ಸ್ವೀಕರಿಸಿದಾಗ ಯಾವ ವಿರೋಧಕ್ಕೂ ಅವಕಾಶವಿಲ್ಲ. ಇದು ಆಚಾರ್ಯಮಧ್ವರ ಭಾಗವತತಾತ್ಪರ್ಯದ
ನಿರ್ಣಾಯಕಪಾತ್ರ.
೨. ವಿದುರನು ತೀರ್ಥಯಾತ್ರೆಗೈಯ್ಯುವ
ಕಾಲದಲ್ಲಿ ಯಾದವರ ವಿನಾಶವನ್ನು ಕೇಳಿದನೆಂದು ಪೂರ್ವೋಕ್ತಶ್ಲೋಕದಲ್ಲಿ ಉಲ್ಲೇಖವಿದೆ.
ಆದರೆ (೨.೧.೨೦) ಶ್ಲೋಕದಲ್ಲಿ ವಿದುರನು ಪ್ರಭಾಸಕ್ಕೆ ಬಂದಾಗ ಧರ್ಮರಾಜನು ಶ್ರೀಕೃಷ್ಣನ
ಅನುಗ್ರಹದಿಂದ ರಾಜ್ಯಭಾರಮಾಡುತ್ತಿದ್ದಾನೆಂದು ಉಲ್ಲೇಖವಿದೆ. ಏವಂಚ ಶ್ರೀಕೃಷ್ಣನಿರುವಾಗ
ಯಾದವರ ವಿನಾಶ ಎಲ್ಲಿಂದ? ಏಕೆಂದರೆ (೩.೩.೩) ಶ್ಲೋಕದಲ್ಲಿ ಯಾದವರ ವಿನಾಶದ ಬಳಿಕ
ಪರಂಧಾಮಕ್ಕೆ ತೆರಳಲು ಶ್ರೀಕೃಷ್ಣನು ಸನ್ನದ್ಧನಾದನೆಂದು ಉಲ್ಲೇಖವಿದೆ ತಾನೆ>
ಭಾರತವೂ ಇದೇ ಅಭಿಪ್ರಾಯಕ್ಕೆ ಬಂದಿದೆ ತಾನೆ? ಈ ವಿರೋಧವನ್ನು ಆಚಾರ್ಯಮಧ್ವರು
ಸಮರ್ಪಕವಾಗಿಯೇ ಪರಿಹರಿಸಿದ್ದಾರೆ.
'ತತ್ರಾಥ ಶುಶ್ರಾವ ಸುಹೃದ್ವಿನಷ್ಟಿಂ' ಎಂಬ ಮಾತಿಗೆ ಭಾರತ-ಭಾಗವತದ ಪೂರ್ವಾಪರ ವಚನಗಾಳಿಗೆ ವಿರೋಧ ಬಾರದಂತೆ 'ಸುಹೃದ್ವಿನಷ್ಟಿ ಯದುಕುಲವಿನಷ್ಟಿ ಏಷ್ಯಾಂ'
ಎಂದು ವ್ಯಾಖ್ಯಾನಿಸಿದ್ದಾರೆ. ಈ ವ್ಯಾಖ್ಯಾನದಿಂದ ಆಚಾರ್ಯರು ತಾವು ಪ್ರಥಮಸ್ಕಂಧದ
ತಾತ್ಪರ್ಯದಲ್ಲಿ ಉದಾಹರಿಸಿದ ಪಾದ್ಮಪುರಾಣದ ವಚನಕ್ಕನುಸಾರವಾಗಿ ೩೬ ವರ್ಷಗಳ ಬಳಿಕ
ಆಗಲಿರುವ ಯಾದವರ ವ್ನಾಶದ ವಾರ್ತೆಯನ್ನು ಕೇಳಿದನೆಂದುಅರ್ಥವನ್ನು ಸ್ವೀಕರಿಸಿ
ವಿರೋಧದಸಂದೇಹವನ್ನು ದೂರಮಾಡಿದ್ದಾರೆ.
೩.ಆಧಿ-ಮನಸ್ಸು, ವ್ಯಥೆಯಲ್ಲ
'ಯಮಭ್ಯಷಿಂಚಚ್ಛತಪತ್ರನೇತ್ರೋ ನೃಪಾಸನಾಧಿಂ ಪರಿಹೃತ್ಯ ದೂರಾತ್' (೩.೧.೨೯)
ಎಂಬ ವಚನದಲ್ಲಿ ಮೇಲ್ನೋಟಕ್ಕೆ
ಶ್ರೀಕೃಷ್ಣನು ತನಗೆ ಸಿಂಹಾಸನ ಸಿಗಲಿಲ್ಲವೆಂಬ ಮಾನಸಿಕ ವಥೆ (ಕೊರಗು) ಯನ್ನು ಬಿಟ್ಟು
ಉಗ್ರಸೇನನಿಗೆ ಪಟ್ಟಾಭಿಷೇಕ ಮಾಡಿದನೆಂದು ಅರ್ಥ ಪ್ರತಿಭಾಸವಾಗುತ್ತದೆ. ಆದರೆ
ಪೂರ್ಣಕಾಮನಾದ ಶ್ರೀಕೃಶಾಹ್ಣನಿಗೆ 'ನಿರನಿಷ್ಟೋ ನಿರವದ್ಯಃ' ಎಂದು ಶ್ರುತಿಯು
ಸಾರುತ್ತಿರುವಾಗ ಮಾನಸಿಕವ್ಯಥೆಗೆ ಪ್ರಸಕ್ತಿಯೇ ಇಲ್ಲ ತಾನೆ? ಹೀಗಿರುವಾಗ ಅದರ ನಿಷೇಧವು
ಅಪ್ರಸ್ತುತವಾಗಿವುದಿಲ್ಲವೆ? ಎನ್ನುವ ಪ್ರಶ್ನೆಯು ಉದ್ಭವಿಸುತ್ತದೆ.
ಇಲ್ಲಿಯೂ ಆಚಾರ್ಯಮಧ್ವರು 'ಆಧಿ'
ಶಬ್ದಕ್ಕೆ ಅಪೂರ್ವ ಅಭಿಧಾನವನ್ನು ಉದಾಹರಿಸಿ ಅಪೂರ್ವ ಅರ್ಥವನ್ನು ಹೇಳಿ ಆಕ್ಷೇಪವನ್ನು
ದೂರ ಮಾಡಿದ್ದಾರೆ.
ಇಲ್ಲಿ 'ಆಧಿ' ಎಂದರೆ ಮನಸ್ಸು.
ಮಾನಸಿಕವ್ಯಥೆಯಲ್ಲ - 'ಆಧಿ ರ್ಮನೋ ವರೂಥಂ ಚ ಆತ್ಮಾ ಸ್ವಮಿತ ಚೋಚ್ಯತೇ' ಏವಂಚ
ಪೂರ್ಣಕಾಮನಾದ ಭಕ್ತವತ್ಸಲ ಶ್ರೀಕೃಷ್ಣನು ರಾಜಾಸನವು ತನಗೆ ಸಿಗಲಿ ಎಂಬ ಮನಸ್ಸನ್ನು
ಮಾಡದೆ ಉಗ್ರಸೇನನಿಗೆ ಪಟ್ಟಾಭಿಷೇಕ ಮಾಡಿದನೆಂದು ಭಗವಂತನ ಔದಾರ್ಯವನ್ನೇ ಈ ಮಾತು
ಸೂಚಿಸುತ್ತದೆ. ಕೊರಗನ್ನಲ್ಲ. ಮಧ್ವರು ತೋರಿಸಿದ ಈ ಅರ್ಥಕ್ಕೆ ಪೂರ್ಕವಾಗಿ
ಶ್ರೀಕೃಷ್ಣನನ್ನು ಭಾಗವತವು 'ಶತಪತ್ರನೇತ್ರ' ಎಂಬ ಶಬ್ದದಿಂದ ಉಲ್ಲೇಖಿಸಿದೆ.
ಕಮಲಾಕ್ಷನೆಂದು ಈ ಪದದ ಸರಳಾರ್ಥ. ಆದರೆ ಅಧ್ಯಾತ್ಮಾರ್ಥ, 'ಲೋಕಕಮಲಕ್ಕೆ ನೇತಾರ' ಎಂದು
ಏವಂ ಚ ಲೋಕಕಮಲಕ್ಕೆ ನಾಯಕನಾದ ಶ್ರೀಕೃಷ್ಣನಿಗೆ ಕ್ಷುಲ್ಲಕಮಧುರಾನಾಯಕತ್ವ
ಸಿಗಲಿಲ್ಲವೆಂದು ಮಾನಸಿಕ ವ್ಯಥೆಗೆ ಅವಕಾಶವೆಲ್ಲಿ? ಎಂಬ ಧ್ವನಿಯು ಇಲ್ಲಿ ಅಡಗಿದೆ.
೪. ಶ್ರೀಕೃಷ್ಣನಿಗೆ ವೈರಾಗ್ಯದ ಉತ್ಪತ್ತಿ?
'ಗೃಹಮೇಧೇಷು ಯೋಗೇಷು ವಿರಾಗಃ ಸಮಜಾಯತ' (೩.೩.೨೨)
ಬಹುಕಾಲದ
ವರೆಗೆ ಗೃಹಸ್ಥಭೋಗವನ್ನು ಅನುಭವಿಸಿದ ಬಳಿಕ ಶ್ರೀಕೃಷ್ಣನಿಗೆ ಭೋಗಸಾಧನಗಳಲ್ಲಿ
ವೈರಾಗ್ಯವು ಒಂಟಾಯಿತೆಂದು ಉಲ್ಲೇಖವಿದೆ. ವೈರಾಗ್ಯದ ಉತ್ಪತ್ತಿಯು 'ಭಗವಾನ್' ಎನಿಸಿದ
ಶ್ರೀಕೃಷ್ಣನಿಗೆ ಸರ್ವಥಾ ಸಮಂಜಸ ವಾಗುವುದಿಲ್ಲ. ವೈರಾಗ್ಯವನ್ನೊಳಗೊಂಡ ಆರುಗುಣಗಳಿಂದ
ಸರ್ವದಾ ಪೂರ್ಣನಾದುದರಿಂದ ಶ್ರೀಕೃಷ್ಣನಿಗೆ 'ಭಗವಾ' ಎಂಬ ನಾಮವು ಕೀರ್ತಿತವಾಗಿದೆ.
ಆದುದರಿಂದ ವೈರಾಗ್ಯದ ಉತ್ಪತ್ತಿಯ ಮಾತು ಅಸಂಗತ. ಈ ಅಸಂಗತಿಯನ್ನು ಆಚಾರ್ಯರು
ಪರಿಹರಿಸಿದ್ದಾರೆ. ಭಗವಂತನಿಗೆ ವೈರಾಗ್ಯವು ಸರ್ವದಾ ಇದ್ದರೂ ವೃದ್ಧಾಪ್ಯದಲ್ಲಾದರೂ
ವೈರಾಗ್ಯವನ್ನು ತಾಳಬೇಕೆಂದು ಲೋಕಶಿಕ್ಷಣ ನೀಡುವ ಉದ್ದೇಶದಿಂದ ಭಗವಾನ್ ಶ್ರೀಕೃಷ್ಣನು
ಅಂತಿಮಕಾಲದಲ್ಲಿ ವೈರಾಗ್ಯ ಪ್ರದರ್ಶನವನ್ನು ಮಾಡಿದನೆಂದು ಅರ್ಥೈಸಬೇಕು.
ಸರ್ವದಾ ವಿರಕ್ತಃ ಸನ್ ಭಾಸಯೀತ ವಿರಾಗಿವತ್ |
ಕಾದಾಚಿತ್ಕಃ ಕುತಸ್ತಸ್ಯ ಲೋಕಶಿಕ್ಷಾರ್ಥಮಿಷ್ಯತೇ ||
ಎಂಬ ಪಾದ್ಮಪುರಾಣದ ಮಾತನ್ನು ಪ್ರಮಾಣೀಕರಿಸಿ ಈ ಅರ್ಥವನ್ನು ಸಮರ್ಥಿಸಿದ್ದಾರೆ.
೫. ಭವಿಷ್ಯವನ್ನೂ ಭೂತವಾಗಿ ಚಿತ್ರಿಸಬಹುದೆ?
ಅನ್ನಂ ಚೋರುರಸಂ ತೇಭ್ಯೋ ದತ್ತ್ವಾ ಭಗವದರ್ಪಣಂ'
ಗೋವಿಪ್ರಾರ್ಥಾಸವಃ ಶೂರಾಃ ಪ್ರಣೇಮುರ್ಭುವಿ ಮೂರ್ಧಭಿಃ || (೩.೩.೨೯)
ಈ ಶ್ಲೋಕದಲ್ಲಿ ಪ್ರಭಾಸಕ್ಷೇತ್ರಕ್ಕೆ ತೆರಳಿದ ಯಾದವರು
ಬ್ರಾಹ್ಮಣರಿಗೆ ಬೆಳ್ಳಿ, ಬಂಗಾರ, ಹಾಸಿಗೆ ಹಾಗೂ ಷಡ್ರಸಾನ್ನವನ್ನು ದಾನ ಮಾಡಿ
ಸಾಷ್ಟಾಂಗ ನಮಸ್ಕಾರ ಮಾಡಿದರೆಂದು ಉದ್ಧವನು ವಿದುರನಿಗೆ ಹೇಳಿದನೆಂದು ಉಲ್ಲೇಖವಿದೆ.
ಆದರೆ ವಿದುರನ ಜೀವಿತಕಾಲದಲ್ಲಿ ಪ್ರಭಾಸಕ್ಕೆ ಯಾದವರು ತೆರಳಲಿಲ್ಲ. ೩೬ ವರ್ಷಗಳ ಬಳಕ
ಅಲ್ಲಿಗೆ ತೆರಳಿ ದಾನ ಮಾಡಿ ಮದಿರಮತ್ತರಾಗಿ ಪರಸ್ಪರ ಹೊಡೆದುಕೊಂಡು ಸಾಯುತ್ತಾರೆಂದು
ಭಾರತದ ಅಭಿಮತ. ಹೀಗಿರುವಾಗ ಭವಿಷ್ಯತ್ಕಾಲೀನವಾದ ಈ ಘಟನೆಯನ್ನು ಭೂತಕಾಲೀನವಾಗಿ
ಚಿತ್ರಿಸಿದ್ದು ಸರಿಯೆ? ಎಂಬ ಪ್ರಶ್ನೆ ಬರುತ್ತದೆ. ಇದಕ್ಕೆ ಸರಿ ಎಂದೇ ಆಚಾಯರು
ಉತ್ತರುಸಿದ್ದಾರೆ.
ಏಷ್ಯಚ್ಚನಿಶ್ಚಿತಂ ಯತ್ತದತೀತ್ವೇನ ಭಣ್ಯತೇ |
ಚಕ್ರವತ್ ಪರಿವೃತ್ತೇರ್ವಾ ದುಷ್ಟಾನಾಂ ಮೊಹನಾಯ ವಾ ||
ಎಂಬ ನಾರದವಚನವನ್ನು ಉದಾಹರಿಸಿ. ಭವಿಷ್ಯಕಾಲೀನ ಘಟನೆಯನ್ನು
ದುಷ್ಟರನ್ನು ಭ್ರಾಂತರನ್ನಾಗಿಸುವ ಸಲುವಾಗಿ, ಯಾದವರ ಪ್ರಭಾಸಯಾತ್ರೆ, ದಾನ, ಹೊಡೆದಾಟ,
ಸಾವು ಇವುಗಳೆಲ್ಲವೂ ಚಕ್ರದಂತೆ ಪುನಃಪುನಃ ಆವೃತ್ತಿಯನ್ನು ಕಾಣುವುದರಿಂದ ಅತೀತಕಲ್ಪದ
ಘಟನೆಯ ವಿವಕ್ಷೆಯಿಂದ ಮತ್ತು ಭವಿಷ್ಯಕಾಲೀನಘಟನೆಯೂ ಖಚಿತವೆಂದು ವಿವಕ್ಷೆಯಿಂದ
ಭೂತಕಾಲೀನವಾಗಿ ಜ್ಞಾನಿಗಳು ಚಿತ್ರಿಸುತ್ತಾರೆ.
೬.ಭಗವಂತನಿಂದ ಭೌತಿಕಶರೀರತ್ಯಾಗ?
'ತ್ತ್ಯಾಜ ಆಕೃತಿಂ ತ್ರ್ಯಧೀಶಃ'
ಎನ್ನುವ ಭಾಗವತವಚನದಲ್ಲಿ ಭಗವಾನ್ ಶ್ರೀಕೃಷ್ಣನು ತನ್ನ ದೇಹವನ್ನು ತ್ಯಾಗಮಾಡಿದನೆಂದು
ಉಲ್ಲೇಖವಿದೆ. ಭಗವಂತನಿಗೆ ಜೀವರಿಗಿರುವಂತೆ ಜಡಭೌತಿಕದೇಹವಿಲ್ಲ. ಹೀಗಿರುವಾಗ ಅದರ
ತ್ಯಾಗದ ಮಾತು ಅಸಂಗತವೆಂದು ಆಕ್ಷೇಪ ಬರುತ್ತದೆ.
ಇದಕ್ಕೆ ಆಚಾರ್ಯ ಮಧ್ವರು
'ಶರೀರಮಾಕೃತಿರ್ದೇಹಃ ಕುಃ ಪೃಥ್ವೀ ಚ ಮಹೀ ತಥಾ' ಎನ್ನುವ ಅಭಿಧಾನವನ್ನು ಉದಾಹರಿಸಿ,
ಆಕೃತಿಶಬ್ದಕ್ಕೆ ಭೂಮಿ ಎಂಬರ್ಥವನ್ನು ತೋರಿಸಿ ಭೂತ್ಯಾಗವೇ ಆಕೃತಿತ್ಯಾಗವೆಂದು
ಸಂಗತಾರ್ಥವನ್ನು ಸಮರ್ತಿಸುವ ಮೂಲಕ ಸಮಾಧಾನವನ್ನು ನೀಡಿದ್ದಾರೆ.
'ಯಸ್ಯ ಪೃಥೀವೀಶರೀರಂ', 'ವಿಷ್ಣೋಃ ಕಳೇಬರತ್ಯಾಗೋ ಭೂತ್ಯಾಗಾನ್ಯೋ ನ ವಿದ್ಯತೇ' ಇತ್ಯಾದಿ ಪ್ರಮಾಣಗಳಿಂದಲೂ ಈ ಅರ್ಥವನ್ನು ಸಮರ್ಥಿಸಬಹುದು. ಭಗವಂತನಿಗೆ ಪ್ರಾಕೃತದೇಹಸಂಬಂಧಜ್ಞಾನವು ಭಗವಂತನ ಅವಜ್ಞೆ ಎಂದು ಗುರುತಿಸಲಾಗಿದೆ.
ಇದಲ್ಲದೆ
'ಯೋ ವೇತ್ತಿ ಪ್ರಾಕೃತಂ ದೇಹಂ ಕೃಷ್ಣಸ್ಯ ಪರಮಾತ್ಮನಃ |
ಸ ಸರ್ವಸ್ಮಾತ್ ಬಹಿಷ್ಕಾರ್ಯಃ ಶ್ರೌತಸ್ಮಾರ್ತವಿಧಾನತಃ ||
ಎನ್ನುವ ಮಾತು ಭಗವಂತನಿಗೆ ಪ್ರಾಕೃತಶರೀರದ ಸಂಬಂಧವನ್ನು
ತಿಳಿದವನು ಸರ್ವವೈದಿಕ ಸ್ಮೃತ್ಯುಕ್ತ ಕರ್ಮಗಳಿಂದ ಭ್ರಷ್ಟನಾಗುತ್ತಾನೆಂದು ಆತನನ್ನು
ನಿಂದಿಸಲಾಗಿದೆ. ಆದುದರಿಂದ ಭಗವದಜ್ಞೆ, ಸರ್ವಕರ್ಮಗಳಿಂದ ಪಾತಿತ್ಯ ಮುಂತಾದ
ಅನಿಷ್ಟಫಲಗಳಲ್ಲಿ ಪರ್ಯವಸಾನಗೊಳ್ಳುವ ಪ್ರಸಿದ್ಧಾರ್ಥವನ್ನು ಆಕೃತಿತ್ಯಾಗಶಬ್ದಕ್ಕೆ
ಸ್ವೀಕರಿಸಬಾರದು. ಭಾಗವತವೇ ಈ ಅಭಿಪ್ರಾಯವನ್ನೇ ಪುಷ್ಟೀಕರಿಸುತ್ತಾ 'ರಾಜನ್
ತನುಭೃಜ್ಜನನಾಪ್ಯಯೇಹಾಂ ಮಾಯಾವಿಡಂಬನಮವೈಹಿ ಯಥಾ ನಟಸ್ಯ' ಎಂಬ ಮಾತಿನಲ್ಲಿ ಭಗವಂತನ
ಶರೀರಪರಿಗ್ರಹ - ವ್ಯಾಧನ ಬಾಣದ ಹೊಡೆತವನ್ನು ನಿಮಿತ್ತವಾಗಿಸಿಕೊಂಡು ಶರೀರತ್ಯಾಗವು
ಜನವಿಡಂಬನೆ ಮಾತ್ರ ಅವುಗಳು ವಾಸ್ತವಿಕವಾಗಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಜರಾವ್ಯಾಧನ ಬಾಣ ತಾಗಿದಾಗ ಭಗವಂತನೇ ಪ್ರಾಕೃತಶರೀರವನ್ನು ತತ್ಕಾಲದಲ್ಲಿ ಸೃಷ್ಟಿಸಿ
ತ್ಯಾಗಮಾಡಿದನೆಂದು ತಿಳಿಯಬೇಕು.
'ಮಾಯಯಾ ಮೃತಕಂ ದೇಹಂ ತದಾ ಸೃಷ್ಟ್ವಾ ಪ್ರದರ್ಶಯೇತ್ |
ಕುತೋ ಹಿ ಮೃತಕಂ ತಸ್ಯ ಮೃತ್ಯಭಾವಾತ್ ಪರಾತ್ಮನಃ ||
ಎಂಬ ವಚನವೂ ಈ ಅಭಿಪ್ರಾಯವನ್ನು ಪ್ರಾಮಾಣಿಕವೆಂದು ಸಮರ್ಥಿಸಿದೆ.
೭. ಮಿಥ್ಯಾವಚನವೂ ಗುಣಸಂಪಾದಕವಾದರೆ ದೋಷವಲ್ಲ
ವಿದುರನು ತನಗೆ ತತ್ವದ ಬಗ್ಗೆ
ಸಂಶಯವಿದೆ. ತತ್ವನಿಶ್ಚಯವಿಲ್ಲ. ನಿಮ್ಮ (ಮೈತ್ರೇಯ೦) ಚರಣಾರವಿಂದಗಳ ಸೇವೆಯಿಂದ ಅದನ್ನು
ಪರಿಹರಸಿ ಕೊಳ್ಳುವೆನೆಂದು ವಿನಮ್ರವಾಗಿ ನುಡಿದಿದ್ದಾನೆ-
'ತಾಂ ಚಾಪಿ ಯುಷ್ಮಚ್ಚರಣಾರವಿಂದಸೇವಯಾಹಂ ಪರಾಣುದೇ'
ದ್ರೋಣದ್ರೌಣಿಕೃಪಾಃ ಪಾರ್ಥಾ ಭೀಷ್ಮೋ ವಿದುರಸಂಜಯೌ |
ಯೇಚಾನ್ಯೇ ತತ್ರ ದೇವಾಂಶಾಃ ಸಮ್ಯಕತ್ವಾಪರೋಕ್ಷಿಣಃ'
ಎಂಬುದಾಗಿ ಸ್ಕಾಂದವು ವಿದುರನಿಗೆ ತತ್ವಜ್ಞಾನವಿದೆಯೆಂದು
ಸಾರುತ್ತಿರುವಾಗ ಯಮಾಂಶಸಂಭೂತನಾದ ವಿದುರನು ತನಗೆ ಜ್ಞಾನವಿಲ್ಲವೆಂದು ನುಡಿದಿರುವುದು
ಸುಳ್ಳಲ್ಲವೆ? ಈ ಮಿಥ್ಯಾವಚನವು ವಿದುರನಿಗೆ ಶೋಭಿಸುವುದೆ? ಎಂಬ ಪ್ರಶ್ನೆಗೆ
ಆಚಾರ್ಯಮಧ್ವರು ಸಮಾಧಾನವನ್ನು ನೀಡಿದ್ದಾರೆ. ವಿದುರನು ಜ್ಞಾನಿಯಾಗಿದ್ದರೂ ಲೋಕಕ್ಕೆ
ತತ್ವಜ್ಞಾನವನ್ನು ಮೈತ್ರೇಯರ ಮುಖೇನ ತಲುಪಿಸುವ ಉದಾತ್ತಉದ್ದೇಶದಿಂದ
ಪ್ರಶ್ನಿಸಿದ್ದಾನೆ. ಪ್ರಶ್ನೆ ಮಾಡದಿದ್ದರೆ ಉತ್ತರವನ್ನೂ ಹೇಳಬಾರದು ತಾನೆ? -
'ನಾಪೃಷ್ಟಃ ಕಸ್ಯಚಿದ್ ಬ್ರೂಯಾತ್' ಪ್ರಶ್ನೆ ಮಾಡುವಾಗ ತತ್ವನಿಶ್ಚಯರೂಪಗುಣದ
ಅಭಾವವನ್ನು ವಿನಯೋಕ್ತಿರೂಪದಿಂದ ಹೇಳಬೇಕು. ಸುಳ್ಳು ಹೇಳಿದ್ದರಿಂದ ಲೋಕಕ್ಕೆ
ತತ್ವನಿಶ್ಚಯರೂಪಪ್ರಯೋಜನ ತನಗೂ ಕೇಳಿದ ತತ್ವದ ನಿಶ್ಚಯ ಬಗ್ಗೆ ದಾರ್ಢ್ಯ ಉಂಟಾಗುತ್ತದೆ.
ಏವಂಚ ಸ್ವ - ಪರಗುಣ ಸಂಪಾದಕವಾದ ಈ ಸುಳ್ಳು ವಿದುರನಿಗೆ ಭೂಷಣವೇ ವಿನಾ ದೂಷಣವಲ್ಲ.
ಈ ವಿಷಯದ ಬಗ್ಗೆ
'ಆತ್ಮನಸ್ತು ಗುಣಾಭಾವಂ ವದತೋ ನತ್ವಸತ್ಯತಾ|
ಅಪೃಷ್ಟಸ್ಯ ದರ್ಮಾರ್ಥಂ ಚ ಗುಣಾಯೈವ ಭವತ್ಯಪಿ'
ಎಂಬ
ವಚನವೇ ಪ್ರಮಾಣವಗಿದೆ. 'ಸತಾಂ ಹಿತಂ ಸತ್ಯಂ' ಇಲ್ಲಿ ಸಜ್ಜನರಿಗೆ ಹಿತವಾದ
ಜ್ಞಾನಲಾಭವಾಗುವುದರಿಂದ ತಾನು ಜ್ಞಾನಿಯಲ್ಲವೆನ್ನುವ ವಿದುರನ ಮಾತು ಸತ್ಯವೇ,
ಅಸತ್ಯವಲ್ಲವೆಂದು ವಚನದ ಆಶಯವಾಗಿದೆ.
೮.ಪ್ರಸಿದ್ಧಕಥನವು ವ್ಯರ್ಥವಲ್ಲ
ಗೌರಜಃ ಮಹಿಷಃ ಕೃಷ್ಣಃ ಸೂಕರೂ ಗವಯೋ ರುರುಃ |
ದ್ವಿಶಫಾಃ ಪಶವಶ್ಚೈತೇ ಆವಿರುಷ್ಟ್ರಶ್ಚ ಸತ್ತಮ ||
ಇಲ್ಲಿ ಗೋ,ಆಡು, ಕೋಣ, ಕೃಷ್ಣಮೃಗ, ಹಂದಿ ಮೊದಲಾದ ಪಶುಗಳು
ಎರಡುಗೊರಸುಗಳಿಂದ ಸಂಪನ್ನವಾಗಿವೆ ಎಂದೂ ಎಲ್ಲರಿಗೂ ತಿಳಿದ ವಿಷಯವನ್ನೇ ಹೇಳಲಾಗಿದೆ.
ಶಾಸ್ತ್ರಕ್ಕೆ ಅಪೂರ್ವಾರ್ಥವು ಆವಶ್ಯಕ. ಹೀಗಿರುವಾಗ ಪ್ರಸಿದ್ಧಾರ್ಥದ ಕಥನದಿಂದ
ಶಾಸ್ತ್ರವು ನಿರರ್ಥಕವೆನಿಸುವುದಿಲ್ಲವೆ? ಎಂಬ ಪ್ರಶ್ನೆಗೆ ಆಚಾರ್ಯಮಧ್ವರು
ಸಮಾಧಾನವನ್ನು ಸಾರ್ಥಕ್ಯವನ್ನು ಸಮರ್ಥಿಸುವ ಪ್ರಮಾಣವಚನಗಳ ಉಲ್ಲೇಖದ ಮುಲಕ ನೀಡಿದ್ದಾರೆ.
ತಿಳಿಯದಿರುವ ಅಪೂರ್ವ ಅರ್ಥವನು
ತಿಳಿಸುವ ಉದ್ದೇಶ, ಹಾಗೂ ತಿಳಿದ ವಿಷಯವಾಗಿದ್ದರೂ ಅದರ ಸ್ಮರಣೆಯನ್ನುಂಟುಮಾಡುವ
ಉದ್ದೇಶದಿಂದ ಶಾಸ್ತ್ರದ ಮಾತುಗಳು ಹೊರಟಿವೆ. ಪ್ರಕೃತದಲ್ಲಿ ಭಗವಂತನಿಂದ
ಸೃಷ್ಟಿಗೊಳಪಡುವ ಗೋಮೊದಲಾದ ಪಶುಗಳನು, ಹಾಗೂ ಅದರೊಳಗಿರುವ ಭಗವಂತನ ರೂಪಗಳನ್ನು
'ದ್ವಿಶಫ' (ಎರಡುಗೊರಸುಗಳಿಂದ ಸಂಪನ್ನ) ರೂಪದಲ್ಲಿ ಸ್ಮರಿಸಬೇಕು. ಅದರಿಂದ
ಭವರೋಗಪರಿಹಾರವಾಗಬಲ್ಲುದು ಎಂಬ ಉದ್ದೇಶದಿಂದ ಪ್ರಸಿದ್ಧವಾದ ವಿಷಯವನ್ನು ಹೇಳಿದ್ದಾರೆ -
'ಉಚ್ಯತೇ ಸುಪ್ರಸಿದ್ಧಂ ಚ ಸ್ಮರಣಾರ್ಥಂ ಚ ಕುತ್ರಚಿತ್ |
ಅಪ್ರಸಿದ್ಧಜ್ಞಾಪನಾರ್ಥಂ ಚ ದ್ವಿಧಾ ಶಾಸ್ತ್ರವಚಃ ಸ್ಮೃತಮ್ ||
ತತ್ತದಾಕಾರ ಸಂಯುಕ್ತಾನ್ ಸೃಜ್ಯಾನ್ ಸ್ರಷ್ಟಾರಮೇವ ಚ |
ಯಃ ಸದಾ ಸಂಸ್ಮರೇದ್ಯೋಗೀ ನ ಸ ಭೂಯೋಭಿಜಾಯತೇ ||
ಎಂಬ ಪ್ರಮಾಣನುಡಿಗಳು ಮೇಲಿನ ವಿಚಾರವನ್ನು ಸಮರ್ಥಿಸುತ್ತವೆ.
೯. ಬ್ರಹ್ಮಾಂಡ ಎಷ್ಟು?
ಲಕ್ಷ್ಯಂತೇಂತರ್ಗತಾಶ್ಚಾನ್ಯೇ ಕೋಟಿಶೋ ಹ್ಯಂಡರಾಶಯಃ |
ಎಂಬ ಭಾಗವತವಚನದಲ್ಲಿ ಕೋಟಿಬ್ರಹ್ಮಾಂಡಗಳು ಕಾಣುತ್ತವೆ ಎಂದು ಹೇಳಿದೆ.
ಆದರೆ ಒಂದು ಕಲ್ಪದಲ್ಲಿ
ಕೋಟಿಬ್ರಹ್ಮಾಂಡಗಳಿಲ್ಲ, ಒಂದೇ ಬ್ರಹ್ಮಾಂಡ ಇರುತ್ತದೆ. ಎಂಬ ವಿಷಯವನ್ನು
ಆಚಾರ್ಯಮಧ್ವರು 'ಬೃಹದಂಡಮಭೂದೇಕಂ' ಎಂಬ ಭಾರತವಚನದ ಉಲ್ಲೇಖದಿಂದ ಖಚಿತಪಡಿಸಿದ್ದಾರೆ.
ಹಾಗಾದರೆ ಬ್ರಹ್ಮಾಂಡಬಹುತ್ವವನ್ನು ಸಾರುವ ಪೂರ್ವೋಕ್ತಭಾಗವತವಚನವನ್ನು ಹೇಗೆ
ಸ್ವೀಕರಿಸಬೇಕು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಮಧ್ವರು ನೀಡಿದ
ಸಮಾಧಾನ ಹೀಗಿದೆ -
ಬ್ರಹ್ಮಾಂಡ ಏಕವಾದರೂ ಅದಕ್ಕೆ
ಆಶ್ರಯವನ್ನು ನೀಡಿದ ಭಗವಂತನ ರೂಪಗಳು ಬಹಳವಾಗಿವೆ. ಆದುದರಿಂದ
ಆಶ್ರಯಬಹುತ್ವವಿವಕ್ಷೆಯಿಂದ ಬ್ರಹ್ಮಾಂಡಬಹುತ್ವವ್ಯವಹಾರವು ಕಂಡು ಬರುತ್ತದೆ. ಅಥವಾ
ವರ್ತಮಾನ ಕಾಲೀನಬ್ರಹ್ಮಾಂಡಜೊತೆಯಲ್ಲಿ ಭೂತ - ಭವಿಷ್ಯತ್ - ಕಾಲೀನ ಬ್ರಹ್ಮಾಂಡಗಳನ್ನು
ಸೇರಿಸಿ ಪರಿಗಣಿಸಿದಾಗ ಬ್ರಹ್ಮಾಂಡಬಹುತ್ವಲಾಭ ವಾಗುವುದು ಕಲ್ಪಾಂತರ ಬ್ರಹ್ಮಾಂಡಗಳನ್ನೂ
ಸ್ವೀಕರಿಸಿ ಬ್ರಹ್ಮಾಂಡಬಹುತ್ವ ವ್ಯವಹಾರವು ಪುರಾಣದಲ್ಲಿ ಕಂಡು ಬರುತ್ತದೆ. ಅಥವಾ ಒಂದೇ
ಬ್ರಹ್ಮಾಂಡವನ್ನು ಶ್ರೀಹರಿಯು ತನ್ನ ಅಚಿಂತ್ಯಾದ್ಭುತಸಾಮರ್ಥ್ಯದಿಂದ ಬಹುರೂಪಗಳಿಂದ
ತನ್ನ ರೋಮಕೂಪಗಳಲ್ಲಿ ತೋರಿಸುವುದರಿಂದ ಬಹುತ್ವವ್ಯವಹಾರವನ್ನು ಪುರಾಣದಲ್ಲಿ ನಾವು
ಕಾಣುತ್ತೇವೆ.
ಈ ತೆರನಾದ ಅನೇಕ ಅಬಿಪ್ರಾಯಗಳ
ಹಿನ್ನೆಲೆಯಲ್ಲಿ ಬ್ರಹ್ಮಾಂಡಬಹುತ್ವ ವ್ಯವಹಾರವನ್ನು ಸಮರ್ಥಿಸುವ ಪ್ರಮಾಣಗಳ
ಉಲ್ಲೇಖವನ್ನು ಅಚಾರ್ಯರು ಮಾಡಿದ್ದಾರೆ -
ಶರೀರಾಣಾಂ ಬಹುತ್ತ್ವೇನ ಅತೀತಾನಾಗತೈಸ್ತಥಾ |
ಅಸ್ಯೈವ ದೇವಕಾಯೇಷು ಪ್ರತಿಪ್ರತಿದರ್ಶನಾತ್ ||
ವಿಷ್ಣುಸಾಮರ್ಥ್ಯತೋಂಡಾನಾಂ ಬಹುತ್ವಂ ನಾನ್ಯಥಾ ಕ್ವಚಿತ್ |
ಏಕಮಂಡಂ ಬಹುತ್ತ್ವೇನ ಪ್ರತ್ಯೇಕರೋಮಕೂಪಗಮ್ |
ಬ್ರಹ್ಮಾಪಶ್ಯತ್ ತಥಾತ್ಮಾನಂ ಹರೇಸ್ತೇಷು ಪೃಥಕ್ ಪೃಥಕ್ ||
೧೦. ಜಯವಿಜಯರ ಶಪದ ಮೂಲಕಾರಣವೇನು?
ಸರ್ವಾಂತರ್ಯಾಮಿಯಾದ ಭಗವಂತನ ರೂಪ ಹಾಗೂ
ವೈಕುಂಠಸ್ಥಭಗವದ್ರೂಪಗಳಲ್ಲಿ ಅನ್ಯೋನ್ಯವಾಗಿ ಭೇದವಿಲ್ಲ. ಸರ್ವಾಂತರ್ಯಾಮಿಯದ
ಭಗವಂತನಾದರೂ ಸ್ವಪ್ರತಿಕೂಲಚೇಷ್ಟೇಯನ್ನು ಜೀವನಿಗೆ ಪ್ರೇರಿಸಿ ಆತನಿಂದ ತನಗೆ ಭಯವನ್ನೂ
ಹುಟ್ಟಿಸಿ ಕೊಳ್ಳುವ ಅವಿವೇಕದ ಕಾರ್ಯವನ್ನು ಮಾಡಲಾರ. ಏವಂಚ ಸರ್ವಾಂತರ್ಯಾಮಿಗೆ
ಭಯವಿಲ್ಲವೆಂದ ಮೇಲೆ ಆ ರೂಪದಿಂದ ಅಭ್ನ್ನವಾದವೈಕುಂಠಸ್ಥರೂಪಕ್ಕೆ ನಮ್ಮ
ಪ್ರತಿಕೂಲಚೇಷ್ಟೆಯಿಂದ ಭಯವಿರಲು ಸಾಧ್ಯವೆ? ಹೀಗಿದ್ದರೂ ನೀವು ಈ ರೂಪಗಳಲ್ಲಿ ಭೇದವನ್ನು
ಭಾವಿಸಿ ವೈಕುಂಠಸ್ಥಭಗವದ್ರೂಪಕ್ಕೆ ನಮ್ಮಿಂದ (ಸನಕಾದಿಗಳಿಂದ) ಪ್ರತಿಕೂಲಚೇಷ್ಟೆಯಿಂದ
ಭಯವಾದೀತೆಂದು ಭ್ರಮಿಸಿ ನಮ್ಮನ್ನು (ಸನಕಾದಿ) ತಡೆದಿರುವಿರಿ.
ನೀವು ಹೊಂದಿದ ಭೇದಭಾವನೆ ಹಾಗೂ
ತನ್ನಿಮಿತ್ತಭಗವಂತನಲ್ಲಿ ಆಪತ್ತಿನ ಭಯಭಾವನೆಗೆ ತಕ್ಕ ಶಿಕ್ಷೆಯನ್ನು ನೀವು ಹೊಂದಬೇಕು.
ಆದುದರಿಂದ ನೀವು ಅಸುರಾವೇಶವುಳ್ಳ ಮೂರು ದೇಹಗಳನ್ನು ಪಡೆಯಿರಿ. ಈ ದೇಹಗಳು ನಿಮಗೆ
ಇಷ್ಟವಲ್ಲದ ಭಗವಂತನ ದ್ವೇಷಕ್ಕೆ ಸಾಧನಗಳಾಗಿ ನಿಮಗೆ ಶತ್ರುಗಳೆಂದು ತಿಳಿಯಿರಿ. ಹೀಗೆ
ಜಯವಿಜಯರು ಹೊಂದಿದ ಭೇದ - ಭಯಭಾವನೆಗಳನ್ನು ನಿಮಿತ್ತವಾಗಿ ಸ್ವೀಕರಿಸಿ ಸನಕಾದಿಗಳು
ಅವರಿಗೆ ಶಾಪವಿತ್ತರೆಂದು ಈ ಕೆಳಗಿನ ಭಾಗವತದ ಮಾತು ಸ್ಪಷ್ಟಪಡಿಸಿದೆ -
ತದ್ವಾ ಅಮುಷ್ಯ ಪರಮಸ್ಯ ವಿಕುಂಹಭರ್ತುಃ
ಕರ್ತುಂ ನ ಯುಕ್ತಮಿತಿ ಧೀಮಹಿಮಂದಧೀಭ್ಯಾಮ್ |
ಲೋಕಾನಿತೋ ವ್ರಜತಮಂತರಭಾವದೃಷ್ಟ್ಯಾ
ಪಾಪೀಯಸಸ್ತ್ರಯ ಇಮೇ ರಿಪುವೋಸ್ಯ ಯತ್ರ್ ||
ಭಗವಂತನಲ್ಲಿ ಭೇದಭಾವನೆಯನ್ನು ಹೊಂದಿದವನು ಸರ್ವತ್ರ ಭಯವನ್ನು
ಹೊಂದಿ ಸತ್ತನಂತರ ತಮಸ್ಸನ್ನೂ ಹೊಂದುವನು. ಆದುದರಿಂದ ಸರ್ವಥಾ ಭಗವದ್ರೂಪಗಳಲ್ಲಿ
ಭೇದವನ್ನು ಭಾವಿಸಿ ಗುಣ - ದೋಷತಾರತಮ್ಯದ ಭ್ರಮೆಯನ್ನು ಹೊಂದಬಾರದು ಎನ್ನುವ
ಎಚ್ಚರಿಕೆಯನ್ನು ನೀಡುವ ಪ್ರಮಾಣವನ್ನೂ ಮಧ್ವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ -
ಸರ್ವೋದರಗತಂ ಬ್ರಹ್ಮಯೇ ಭೇದೇನ ವಿಚಕ್ಷತೇ |
ಸರ್ವತ್ರಾಪಿ ಭಯಂ ತೇಷಾಂ ಮೃತಾನಾಂ ತಮ ಏವ ಚ ||
೧೧. ಭಗವಂತನ ರೂಪವು ಭ್ರಾಂತಿಕಲ್ಪಿತವೆ?
ಭಗವತದ ೩.೧೬.೪೨ ನೇ ಶ್ಲೋಕದಲ್ಲಿ
'ಸ್ವಾನಾಂ ಧಿಯಾ ವಿರಚಿತಂ ಬಹುಸೌಭಗಾಢ್ಯಂ ' ಎಂಬ ವಚನವನ್ನು ಅವಲೋಕಿಸಿದಾಗ
ಸೌಂದರ್ಯಾದಿ ಗುಣಗಳಿಂದ ಸಂಪನ್ನನಾದ ಭಗವಂತನ ಶರೀರವು 'ಬುದ್ಧಿಯಿಂದ ವಿರಚಿತ -
ಕಲ್ಪಿತ, ವಾಸ್ತವಿಕವಲ್ಲವೆಂದು ಮೇಲ್ನೋಟಕ್ಕೆ ಪ್ರತಿಭಾಸವಾಗುತ್ತದೆ. ಈ ಉಲ್ಲೇಖದಿಂದ
ಭಗವಂತನು ವಾಸ್ತವಿಕವಾಗಿ ನಿರಾಕಾರನೇ ಸರಿ ಎಂಬ ನಿರ್ಣಯಕ್ಕೆ ನಾವು ಬದ್ಧರಾಗುವ
ಅಪಾಯವಿದೆ. ಈ ಅಪಾಯವನ್ನು ರಚನೆಯ ದ್ವೈಇಧ್ಯವನ್ನು ಸಾರುವ ಪ್ರಮಾಣವಚನದ ಉಲ್ಲೇಖದಿಂದ
ನಧ್ವರು ದೂರಮಾಡಿ ಮಹೋಪಕಾರಮಾಡಿದ್ದಾರೆ -
ಅವಿದ್ಯಮಾನ ಕರಣಂ ವಿದ್ಯಮಾನಸ್ಮೃತಿಸ್ತಥಾ |
ಉಭಯಂ ರಚನಂ ಪ್ರೋಕ್ತಂ ಪೂರ್ವಸಿದ್ಧೇಷು ತು ಸ್ಮೃತಿಃ ||
ಎಂಬ ಪ್ರಮಾಣದ ಉಲ್ಲೇಖದ ಮೂಲಕ
ಇಲ್ಲದಿರುವ ವಸ್ತುವಿನ ನಿರ್ಮಾಣ್, ಹಾಗೂ ಇದ್ದವಸ್ತುವಿನ ಸ್ಮರಣೆ ಎಂಬುದಾಗಿ ರಚನೆ
ಎರಡು ವಿಧವಾಗಿದೆ ಎಂದು ತಿಳಿಸಿದ ಅವರು ಭಗವಂತನ ಶರೀರವು ಅನಾದಿನಿತ್ಯವಾದುದರಿಂದ
ಬುದ್ಧಿಯಿಂದ ಅದರ ರಚನೆ ಎಂದರೆ ಧ್ಯಾನವೆಂದೇ ತಿಳಿಯಬೇಕು. ಆದುದರಿಂದ ಬುದ್ಧಿಯಿಂದ
ಇಲ್ಲದ ಭಗವದ್ರೂಪದ ಕಲ್ಪನೆ ಎಂಬ ಭ್ರಮೆಗೆ ಅವಕಾಶವಿಲ್ಲ ಎಂದು ಸಾರಿದ್ದಾರೆ.
೧೨. ಹಿರಣ್ಯಾಕ್ಷನು ಧರ್ಮಸಂರಕ್ಷಕನೆ?
ಭಗವಾನ್ ವರಾಹನ ಕೈಯಿಂದ ಗದೆಯು ಕೆಳಗೆ
ಜಾರಿಬಿದ್ದಾಗ, ನಿರಾಯುಧನ ಮೇಲೆ ಸಾಯುಧನಾಗಿ ಆಯುಧಪ್ರಯೋಗಿಸುವುದು ಧರ್ಮವಲ್ಲವೆಂದು
ತಿಳಿದ ಹಿರಣ್ಯಾಕ್ಷನು ಯುದ್ಧರ್ಧವನ್ನು ಗೌರವಿಸಿ ಸುಮ್ಮನೆ ನಿಂತು ಬಿಟ್ಟನು. ಆಗ
ವರಾಹನೂ ಅವನು ಪಾಲಿಸಿದ ಧರ್ಮವನ್ನು ಮಾನ್ಯ ಮಾಡಿದನೆಂದು (೩.೨೦.೪-೫) ಶ್ಲೋಕಗಳಲ್ಲಿ
ಉಲ್ಲೇಖವಿದೆ.
ಇದು ಹೇಗೆ ಸಮಂಜಸವೆನಿಸುತ್ತದೆ?
ಹರಿಭಕ್ತನಲ್ಲದವನು ಧರ್ಮಮಾಡಿದರೂ
ಪಾಪವೆನಿಸುತ್ತದೆ ಎಂದು ಶಾಸ್ತ್ರವು ಸಾರುತ್ತಿದೆ. ಹೀಗಿರುವಾಗ ಹಿರಣ್ಯಾಕ್ಷನು
ಪಾಲಿಸಿದ ಯುದ್ಧಧರ್ಮವನ್ನು ಭಗವಂತನೂ ಮಾನ್ಯ್ಮಾಡಿದನೆಂದು ಹೇಳುವುದು ಸಮಂಜಸವೆ? ಈ
ಪ್ರಶ್ನೆಗೆ ಧರ್ಮದ್ವಿಮುಖತೆಯನ್ನು ತೋರಿಸುವ ಪ್ರಮಾಣವನ್ನು ಉಲ್ಲೇಖಿಸಿ ಸಮಾಧನವನ್ನು
ಮಧ್ವರು ನೀಡಿದ್ದಾರೆ -
ಧರ್ಮಃ ಸತ್ಯಮಿತಿಪ್ರೋಕ್ತೋ ಧರ್ಮಶ್ಚಾಪಿ ಹರೇ ಪ್ರಿಯಃ |
ಶಾಸ್ತ್ರವಿಹಿತವಾಗಿ 'ಸತ್ಯ' ವೆನಿಸಿದ್ದು
ಒಂದು ಬಗೆಯಧರ್ಮವಾದರೆ ಹರಿಪ್ರೀತಿಕರವಾದದ್ದು ಇನ್ನೊಂದು ಮುಖದ ಧರ್ಮ. ಅವುಗಳಲ್ಲಿ
ಭಕ್ತನಲ್ಲದ ಹಿರಣ್ಯಾಕ್ಷನು ಪಾಲಿಸಿದ, ಹರಿಯು ಗೌರವಿಸಿದ ಧರ್ಮ, ಶಾಸ್ತ್ರವಿಹಿತವಾದ
ಎರಡನೇ ದರ್ಜೆಯು ಧರ್ಮವೇ ವಿನಾ ಹರಿಪ್ರೀತಿಕರವಾದ ಭಾಗವತಧರ್ಮವಲ್ಲ. ಅಭಕ್ತನಲ್ಲಿ
'ಸತ್ಯ' ವೆನಿಸಿದ ಧರ್ಮವನ್ನು ಒಪ್ಪಿದರೆ ಯಾವ ಶಾಸ್ತ್ರದ ವಿರೋಧವೂ ಇಲ್ಲ ತಾನೆ?
೧೩. ಅಧಿಕಾರಸ್ಥ ದೇವತೆಗಳಿಗೆ ಅಧಿಕಾರಕಾಮನೆ ದೋಷವೆ?
(೩.೧೦.೩೯) ಶ್ಲೋಕದಲ್ಲಿ ಚತುರ್ಮುಖನು
ಲೋಕಾಧಿಪತ್ಯದ ಕಾಮನೆಯಿಂದ ಭಗ್ವಂತನನ್ನು ಸ್ತೋತ್ರದಿಂದ ಸಂತೋಷಪಡಿಸಿದನೆಂದು
ಉಲ್ಲೇಖವಿದೆ. 'ಋಜು'ಗಳಾದ ಅವರು ಹರಿಪ್ರೀತಿ - ಭಗವದ್ಭಕ್ತಿ - ಜ್ಞಾನರೂಪಫಲಗಳನ್ನು
ಬಿಟ್ಟು ಬೇರೇನನ್ನೂ ಬಯಸುವುದಿಲ್ಲವೆಂದು ಶಾಸ್ತ್ರವು ಸಾರುತ್ತಿದೆ ತಾನೆ? ಹೀಗಿರುವಾಗ
ಲೋಕಾಧಿಪತ್ಯದ ಕಾಮನೆಯ ಬ್ರಹ್ಮನ ಋಜುತ್ವ (ಶುದ್ಧಭಾಗವತಧರ್ಮಪರಾಯಣತೆ) ಕ್ಕೆ
ಭಂಗವನ್ನುಂಟು ಮಾಡುವುದಿಲ್ಲವೆ? ಎಂಬ ಪ್ರಶ್ನೆಗೆ ಮಧ್ವರು ಉತ್ತರವನ್ನು ಕೆಳಗೆ ಕಾಣುವ
ಪ್ರಮಾಣಗಳ ಉಲ್ಲೇಖದ ಮೂಲಕ ನೀಡಿದ್ದಾರೆ -
ಆಧಿಕಾರಿಕದೇವಾನಾಂ ಸ್ವಾಧಿಕಾರಾಭಿಕಾಮನಮ್ |
ಭವತಿ ಪ್ರೀತಯೇ ವಿಷ್ಣೋಕ್ತ್ಯಾದೇರಪಿ ಯತ್ ಸದಾ ||
ಅಧಿಕಾರಸ್ಥದೇವತೆಗಳು, ಹೇಗೆ
ಹರಿಭಕ್ತ್ಯಾದಿಗಳನ್ನು ಬಯಸಿದರೆ ಆತನಿಗೆ ಪ್ರಿಯವಾಗುವುದೋ ಹಾಗೆ ಯೋಗ್ಯ ಅಧಿಕಾರವನ್ನು
ಬಯಸಿದರೂ ಹರಿಗೆ ಪ್ರೀತಿ ಆಗುವುದು. ಆದುದರಿಂದ ಹರಿಪ್ರೀತಿಗೆ ಪೂರಕವಾಗಿ ಅಧಿಕಾರವನ್ನು
ಬಯಸಿದ್ಧರಿಂದ ಅವರ ಋಜುತ್ವಕ್ಕೆ ಅದರಿಂದ ಹಾನಿಯಿಲ್ಲ.
೧೪. ಕಪಿಲನಿಂದ ಪರಶುಕ್ಲನ ಹಿರಿಮೆಯ ಗಾನ
ಉಪನಿಷತ್ತುಗಳಲ್ಲಿ ಬ್ರಹ್ಮಾದಿಜೀವರ
ಶರೀರಗಳ ಪತನವು ಮುಖ್ಯಪ್ರಾಣನ ನಿರ್ಗಮನದಿಂದ, ಉತ್ಥಾನವು ಆತನ ಪುನಃ ಪ್ರವೇಶದಿಂದ
ಆಯಿತೆಂದು ವರ್ಣಿಸಿ ಶರೀರೋತ್ಥಾಪಕತ್ವದಿಂದ ಜೀವೋತ್ತಮನೆಂದು ನಿರ್ಣಯಿಸಲ್ಪಟ್ಟ ಆತ
'ಉಕ್ಠ' ನೆಂದು ಖ್ಯಾತನಾಗಿದ್ದಾನೆ.
ಭಾಗವತದಲ್ಲೂ ಕಪಿಲನು ದೇವಹೂತಿಯನ್ನು
ಕುರಿತು ಈ ವಿಷಯದ ಬಗ್ಗೆ ಬೆಳಕನ್ನು ಚೆಲ್ಲಿದ್ದಾನೆ. ನೀರಿನಲ್ಲಿ ಬಿದ್ದ ಬ್ರಹ್ಮದೇವರ
ದೇಹವನ್ನು ರುದ್ರಾದಿದೇವತೆಗಳು ಒಳಗೆ ಪ್ರವೇಶಿಸಿ ಏಳಿಸಲು ಸಮರ್ಥರಾಗಲಿಲ್ಲ. ಯಾವಾಗ
ಬ್ರಹ್ಮಾಂತರ್ಯಾಮಿಯಾದ ಕ್ಷೇತ್ರಜ್ಞನೆನಿಸಿದ ಶ್ರೀಹರಿಯು
ಚಿತ್ತಾಭಿಮಾನಿಬ್ರಹ್ಮ-ವಾಯುರಿಂದೊಡಗೂಡಿ ದೇಹದೊಳಗೆ ಪ್ರವೇಶಿಸಿದನೋ ಆಗ ಬ್ರಹ್ಮದೇವರ
ದೇಹವು ಎದ್ದು ನಿಂತಿತು ಎಂದು ಉಪದೇಶಿಸಿದ್ದಾನೆ -
ಚಿತ್ತೇನ ಹೃದಯಂ ಚೈತ್ಯಃ ಕ್ಷೇತ್ರಜ್ಞಃ ಪ್ರಾವಿಶದ್ ಯದಾ |
ವಿರಾಟ್ ತದೈವ ಪುರುಷಃ ಸಲಿಲಾದುದತಿಷ್ಠತ ||
ಇಲ್ಲಿ ಚಿತ್ತ ಶಬ್ದದಿಂದ
'ಚಿತ್ತಾಭಿಮಾನೀ ಬ್ರಹ್ಮೈವ' ಎಂಬ ಪ್ರಮಾಣಾನುಸಾರವಾಗಿ ಬ್ರಹ್ಮನನ್ನು ಹಾಗೂ 'ಪ್ರಾಣಃ
ಸೂತ್ರಂ ಮಹಾನ್ ಬ್ರಹ್ಮ ಚಿತ್ತಂ ವಾಯುರ್ಬಲಂ ಧೃತಿಃ' ಎಂಬ ಪ್ರಮಾಣಾನುಸಾರವಾಗಿ
ಮುಖ್ಯಪ್ರಾಣನನ್ನೂ ಸ್ವೀಕರಿಸಬೇಕು. ಹರಿಯು ಸ್ವತಂತ್ರವಾಗಿ ಶರೀರವನ್ನು ಎಬ್ಬಿಸಲು
ಸಮರ್ಥನು. ಚಿತ್ತಾಭಿಮಾನಿಗಳು ಹರಿಪ್ರಸಾದದಿಂದಲೇ ಎಬ್ಬಿಸಲು ಸಮರ್ಥರು. ಸ್ವತಂತ್ರವಾಗಿ
ಸಮರ್ಥರಲ್ಲ ಎಂಬ ಪ್ರಮೇಯರಹಸ್ಯವು ಅಪ್ರಾಧಾನ್ಯಸೂಚಕವಾದ 'ಚಿತ್ತೇನ' ಎಂಬ
ತೃತಿಯಾವಿಭಕ್ತಿಯಿಂದ ಸೂಚಿತವಾಗುತ್ತದೆ.
೧೫. ಜೀವೇಶ್ವರಭೇದದರ್ಶನದಿಂದ ಭಯವಿಲ್ಲ
ಸರ್ವಸಂಹಾರಶಕ್ತಿಯಾಗಿ 'ಕಾಲ' ಎನಿಸಿದ
ಭಗವಂತನಿಂದ 'ಯತೋ ಭಿನ್ನದೃಶಾಂ ಭಯಂ' ಎಂಬ ವಚನದಲ್ಲಿ ಜೀವೇಶ್ವರಭೇದಜ್ಞಾನಿಗಳಿಗೆ ಭಯ
ಉಂಟಾಗುತ್ತದೆ ಎಂಬ ಅರ್ಥವು ಮೇಲ್ನೋಟಕ್ಕೆ ತೋರುತ್ತದೆ. ಆದರೆ ಈ ಅರ್ಥದಲ್ಲಿ ಕಪಿಲನು ಈ
ಮಾತನ್ನು ಆಡಲಿಲ್ಲ. ಏಕೆಂದರೆ ಆತನೇ ಮುಂದೆ ತನ್ನ ತಾಯಿಯನ್ನು ಕುರಿತು
'ಭೇದದೃಷ್ಟ್ಯಾಭಿಮಾನೇನ' ಮುಂತಾದ ಉಪದೇಶವಚನಗಳಲ್ಲಿ ಜೀವೇಶ್ವರಭೇದಜ್ಞಾನವು
ಚತುರ್ಮುಖಾದಿಗಳ ಮುಕ್ತಿಗೆ ಸಾಧನವಾಗಿದೆ ಎಂದು ಸ್ಪಷ್ಟ ಪಡಿಸಿದ್ದಾನೆ. ಹೀಗಾಗಿ ತನ್ನ
ಮಾತಿಗೆ ವಿರುದ್ಧವಾಗಿ ಭೇದಜ್ಞಾನವು ಭಯಜನಕವೆಂದು ಹೇಳಿ ವ್ಯಾಹತಭಾಷಿ ಆಗಲು ಬಯಸುವನೆ?
ಇಲ್ಲಿ 'ಭಿನ್ನದೃಶಾಂ' ಎಂಬ ಮಾತಿಗೆ
ಭಗವಂತನಿಗಿಂತ ಮಹಾಅಲ್ಪಜ್ಞಾನವುಳ್ಳವರಿಗೆ ಭಯವನ್ನು ಭಗವಂತನು ಹುಟ್ಟಿಸುತ್ತಾನೆಂದು
ಅರ್ಥೈಸಬೇಕು.
ಭಿನ್ನಮಲ್ಪಂ ವಿಜಾನೀಯಾದಭಿನ್ನಂ
ಪೂರ್ಣಮಿಷ್ಯತೇ' ಎಂಬ ಶಬ್ದನಿರ್ಣಯವಚನದಲ್ಲಿ ಭಿನ್ನಶಬ್ದಕ್ಕೆ 'ಅಲ್ಪ' ಅರ್ಥವನ್ನೂ
ತೋರಿಸಲಾಗಿದೆ. ಆದುದರಿಂದ ಜೀವೇಶ್ವರಭೇದಜ್ಞಾನಿಗೆ ಭಗವಂತನು ಭಯವನ್ನು ಹೇಳಲಿಲ್ಲ.
'ಭಿನ್ನ' ಎಂಬ ಶಬ್ದಕ್ಕೆ ಅಲ್ಪ ಎಂಬರ್ಥವೂ ಇರುವುದರಿಂದ. 'ವಿದ್ಯಾ ಆತ್ಮನಿ ಭಿದಾ
ಭೋದಃ' ಎಂಬ ಶ್ರೀಕೃಷ್ಣನ ಮಾತಿಗೆ ಆತ್ಮ (ತನ್ನಲ್ಲಿ) (ಜೀವನದಲ್ಲಿ) ಅಲ್ಪತ್ವದ ಜ್ಞಾನವೂ ವಿದ್ಯೆ. ಎನಿಸುತ್ತದೆ ಎಂದು ಸೂಚಿತವಾಯಿತು.
೧೬. ಕಪಿಲಾವತಾರದ ರಹಸ್ಯ
'ಕರ್ದಮವೀರ್ಯಮಾಪನ್ನೊ ಜಜ್ಞೇ ಅಗ್ನಿರಿವ ದಾರುಣಿ' ಎಂಬ ವಚನದಲ್ಲಿ ಕಪಿಲನು
ಕರ್ದಮವೀರ್ಯವನ್ನು ಹೊಂದಿ ದೇವಹೂತಿಯಲ್ಲಿ ಜನಿಸಿದನೆಂದು ಹೇಳಲಾಗಿದೆ. ಭಗವಂತನಿಗೆ
ವೀರ್ಯದಿಂದ ಉತ್ಪನ್ನವಾದ ಜಡದೇಹವಿಲ್ಲ. ಆದುದರಿಂದ ಕರ್ದಮವೀರ್ಯವನ್ನು ಹೊಂದಿ
ಮಾತೃದೇಹವನ್ನೂ ಪ್ರವೇಶಿಸಿದ ಭಗವಂತನು ಆ ವೀರ್ಯವನ್ನು ನಾಶಪಡಿಸಿ ತನ್ನದೇ
ಜ್ಞಾನಾನಂದಮಯ ರೂಪದಿಂದ ಪ್ರಕಟನಾಗುತ್ತಾನೆ ಎಂಬುದು ಅವತಾರರಹಸ್ಯ -
ನಾವತಾರೇಷು ಹೇರೇರ್ದೇಹಃ ಶುಕ್ಲಾದಿಸಂಭವಃ |
ತಥಾಪಿ ಶುಕ್ಲಸಂಸ್ಥಃ ಮಾತೃದೇಹಂ ಪ್ರವಿಶ್ಯತಿ ||
ವಿಲಾಪ್ಯ ಶುಕ್ಲಂ ತತ್ರೈವ ಕೇವಲಜ್ಞಾನರೂಪಕಃ |
ಉದೇತಿ ಭಗವಾನ್ ವಿಷ್ಣುಃ ಕಾಲೇ ಲೋಕಂ ವಿಮೋಹಯನ್ |
೧೭. ಅವತಾರದ ಉದ್ದೇಶ
ತ್ವಂ ದೇಹತಂತ್ರಃ ಪ್ರಶಮಾಯ ಪಾಪ್ಮನಾಂ
ನಿದೇಶಭಾಜಾಂ ಚ ವಿಭೋ ವಿಭೂತಯೇ |
ಯಥಾವತಾರಾಸ್ತವಸೂಕರಾದಯ -
ಸ್ತಥಾಯಮಪ್ಯಾತ್ಮಪಥೋಪಲಬ್ಧಯೇ ||
ದೇಹಪ್ರಕಾಶರೂಪನೆನಿಸಿ 'ದೇಹತಂತ್ರ' ಎನಿಸಿದ
ಸ್ರ್ವತ್ರವ್ಯಾಪಕನಾದ ಭಗವಂತನೇ ನಿನ್ನ ಅವತಾರವು ಪಾಪಿಗಳ ಸಂಹಾರ ಹಾಗೂ ಆದೇಶಪಾಲಿಸುವ
ಬ್ರಹ್ಮಾದಿದೇವತೆಗಳ ಜ್ಞಾನಾದಿಸಂಪತ್ತುಗಳ ಉನ್ನತಿಗಾಗಿ, ವರಾಹಾದಿರೂಪಗಳಲ್ಲಿ ನೀನು
ಭಗವತ್ಪ್ರಾಪ್ತಿ ಸಾಧನಗಳನ್ನೂ ಭೂದೇವಿಮೊದಲಾದವರಿಗೆ ಉಪದೇಶಿಸಿರುವಂತೆ ಈ ಕಪಿಲಾವತಾರವೂ
ಭಗವತ್ಪ್ರಾಪ್ತಿಸಾಧನಗಳಾದ ಭಕ್ತ್ಯಾದಿಗಳನ್ನು ಉಪದೇಶಿಸುವ ಸಲುವಾಗಿ ಇದೆ ಎಂದು ನಾನು
(ದೇವಹೂತಿ) ಭಾವಿಸುತ್ತೇನೆ.
ಇಲ್ಲಿ 'ಆತ್ಮಪಥೋಪಲಬ್ಧಯೇ' ಎಂಬ ವಚನವು
ಇನ್ನೊಂದು ಅರ್ಥದಲ್ಲೂ ತೆರೆದುಕೊಳ್ಳುತ್ತದೆ. ಆತ್ಮ ಅಂದರೆ ವಾಯುದೇವ (ಆತ್ಮಾ
ವಾಯುರುದಾಹೃತಃ) ಅವನ ಪಥ ಅಂದರೆ ಆತನ ಸಿದ್ಧಾಂತಮಾರ್ಗ - ಭಕ್ತಿ - ಭೇದಸಿದ್ಧಾಂತಮಾರ್ಗ
- ಅದರ ಜ್ಞಾನವನ್ನು ಸಜ್ಜನರಿಗೆ ಉಪದೇಶಿಸುವ ಸಲುವಾಗಿ ಕಪಿಲನ ಅವತಾರ. ಈ ಮಾತು 'ಭೇದದೃಷ್ಟ್ಯಾಭಿಮಾನೇನ' ಮುಂತಾದಮಾತಿನಿಂದ ಸ್ಪಷ್ಟವಾಗುತ್ತದೆ.
ಏವಂ ಚ ಕಪಿಲೋಪದೇಶದ ಸಾರಾಂಶವನ್ನು
ಅವಲೋಕಿಸಿದಾಗ, ಹರಿಯ ಮತವೇ ಹನುಮನ ಮತ. ಹನುಮನ ಮತವೇ ಹರಿಯ ಮತವೆಂದು ದಿಟವಾಗಿತ್ತದೆ.
ಶ್ರೀಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು