ಭಂಡಾರಕೇರಿ ಮಠ,ಉಡುಪಿ





ಶ್ರೀ ಭಾಗವತಾಶ್ರಮ ಪ್ರತಿಷ್ಠಾನ,
ಶ್ರೀ ಭಂಡಾರಕೇರಿ ಮಠದಿಂದ ಪ್ರಕಾಶಿತ ಗಂಥಗಳು

ಭಗವದ್ ಬಾದರಾಯಣ ಪ್ರಣೀತಂ
ಶ್ರೀಮದ್ ಭಾಗವತ ಮಹಾಪುರಾಣಮ್ - ೧ನೆ ಸಂಪುಟ
(ಸುಲಲಿತಂ ಶ್ರೀಮದ್ ಭಾಗವತಮ್)
( ೧ ಮತು ೨ ನೆಯ ಸ್ಕಂದ)
ಬೆಲೆ:ರೂ ೨೦೦/=
ಶ್ರೀಗಳ - ಹೃದಯವಾಣಿ
ಶ್ರೀಗಳಿಂದ - ಭಾಗವತ ಹೃದಯ
ಶ್ರೀಮದ್ ಭಾಗವತ ಮಹಾಪುರಾಣಮ್ - ೨ನೆ ಸಂಪುಟ
(ಸುಲಲಿತಂ ಶ್ರೀಮದ್ ಭಾಗವತಮ್)
( ೩ ನೆಯ ಸ್ಕಂದ)
ಬೆಲೆ:ರೂ ೨೦೦/=
ಶ್ರೀಗಳ - ಹೃದಯವಾಣಿ
ಶ್ರೀಗಳಿಂದ - ತೃತೀಯಸ್ಕಂಧದ ಹೃದ್ಗತ

ಶ್ರೀಮದ್ ಭಾಗವತ ಮಹಾಪುರಾಣಮ್ - ೩ನೆ ಸಂಪುಟ
(ಸುಲಲಿತಂ ಶ್ರೀಮದ್ ಭಾಗವತಮ್)
( ೪ ನೆಯ ಸ್ಕಂದ)
ಬೆಲೆ:ರೂ ೨೦೦/=
ಶ್ರೀಗಳ - ಹೃದಯವಾಣಿ
ಶ್ರೀಗಳಿಂದ - ಚತುರ್ಥಸ್ಕಂಧದ ಹೃದ್ಗತ


ಅನುವಾದಕರು

ವಿದ್ವಾನ್ ಕೆ.ಹಯವದನ ಪುರಾಣಿಕ, ನಿವೃತ್ತ ಪ್ರಾಂಶುಪಾಲರು
ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು


ಪ್ರಕಾಶಕರು

ಶ್ರೀ ಭಾಗವತಾಶ್ರಮ ಪ್ರತಿಷ್ಠಾನ, ಶ್ರೀ ಭಂಡಾರಕೇರಿ ಮಠ,
ಗಿರಿನಗರ, ಬೆಂಗಳೂರು


ಶ್ರೀಮದ್ ಭಾಗವತ ಮಹಾಪುರಾಣಮ್ - ೧ನೆ ಸಂಪುಟದ
ಹೃದಯವಾಣಿ
ಶ್ರೀ ಮದ್ಭಾಗವತವು ಭಾಗವತಾಶ್ರಮ ಪ್ರಕಾಶನದಿಂದ ಸಂಪೂರ್ಣವಾಗಿ ಆಚಾರ್ಯರ ತಾತ್ಪರ್ಯದ ಹಿನ್ನೆಲೆಯಲ್ಲಿ ಸೊಗಸಾಗಿ ಕನ್ನಡೀಕೃತವಾಗ ಬೇಕೆಂದು ನಮ್ಮ ಹೆಬ್ಬಯಕೆಯಾಗಿತ್ತು. ಅದಕ್ಕೆ ತಕ್ಕಂತೆ ಸಮರ್ಥರಾದ ಹಯವದನ ಪುರಾಣಿಕರು ಅನುವಾದಕರಾಗಿ ನಮಗೆ ದೊರೆತಿದ್ದು ಅತೀವ ಹರ್ಷವನ್ನುಂಟು ಮಾಡಿದೆ. ತಾತ್ಪರ್ಯಾಂಶವನ್ನು ಸ್ವಲ್ಪವೂ ಬಿಡದೆ ಅವರು ಎರಡು ಸ್ಕಂದಗಳ ಅನುವಾದವನ್ನು ಹೃದಯಂಗಮವಾಗಿ ಮಾಡಿದ್ದಾರೆ. ಜೊತೆಯಲ್ಲಿ ಕೆಲವು ಅಪವ್ಯಾಖ್ಯಾನವನ್ನೂ ಸರಳವಾಗಿ ನಿರಾಕರಿಸಿದ್ದಾರೆ. ಇವರ ಮನೋಜ್ಞ ಅನುವಾದದ ಕಾರ್ಯಕ್ಕಾಗಿ ಅವರನ್ನು ಅಭಿನಂದಿಸುತ್ತಾ ವಿಶೇಷವಾಗಿ ಹರಿ-ಗುರುಗಳ ಅನುಗ್ರಹವನ್ನು ಅವರಿಗಾಗಿ ಪ್ರಾರ್ಥಿಸುತ್ತೇವೆ. ಅನುವಾದಕರು ಭಾಗವತಮಾಹಾತ್ಮ್ಯ - ಭಾಗವತ ಸಪ್ತಾಹವಿಧಿ, ಎರಡು ಸ್ಕಂಧಗಳ ಸಮಗ್ರ ಶ್ಲೋಕಗಳು ಅದರ ಅಧ್ಯಾಯಗಳ ಸಾರಾಂಶ ಹಾಗೂ ಶ್ಲೋಕಗಳ ಭಾವಾನುವಾದ ಇವೆಲ್ಲವುಗಳನ್ನು ಅನುವಾದದಲ್ಲಿ ಒದಗಿಸಿದ್ದಾರೆ. ಇಂಥ ಉಪಯುಕ್ತ ಅನುವಾದದ ಪ್ರಕಾಶನದ ವೆಚ್ಚವನ್ನು ಸಂಪೂರ್ಣವಾಗಿ ಹೊತ್ತು ಮಹಾ ಔದಾರ್ಯವನ್ನು ತೋರಿದ ಹರಿಗುರು ಭಕ್ತರೂ, ಧರ್ಮಭೂಷಣರೂ ಆದ ಕೆ. ಯಾದವಾಚಾರ್ಯ ರನ್ನು ನಾವು ಅಭಿನಂದಿಸುತ್ತೇವೆ. ನಮ್ಮ ಪರಮ ಗುರುಗಳಾದ ವಿಬುಧಪ್ರಿಯರ ನೆಚ್ಚಿನ ಶಿಷ್ಯರಾದ ಹಾಗೂ ತಮ್ಮ ಪೂಜ್ಯ ಪಿತೃಗಳಾದ ಪ್ರಕಾಂಡ ಶ್ರೀಗುರುಗುಂಡಿ ರಾಮಾಚಾರ್ಯರ ಶ್ರೇಯಸ್ಸಿಗಾಗಿ ಅವರ ಸುಪುತ್ರರಾದ ಯಾದವಾಚಾರ್ಯರು ಈ ಔದಾರ್ಯವನ್ನು ತೋರಿದ್ದಾರೆ. ಅವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ಭಗವಂತನು ಆಯುರಾರೋಗ್ಯಾದಿ ಸಂಪತ್ತನ್ನಿತ್ತು ಅನುಗ್ರಹಿಸಲಿ ಎಂದು ನಮ್ಮ ಉಪಾಸ್ಯಮೂರ್ತಿಯಾದ ಶ್ರೀರಾಮಚಂದ್ರನನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇವೆ.
ಶ್ರೀ ವಿದ್ಯೇಶತೀರ್ಥ ಶ್ರೀಪಾದರು
ಶ್ರೀ ಭಂಡಾರಕೇರಿ ಮಠ

ಭಾಗವತ ಹೃದಯ
ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಶ್ರೀ ಭಂಡಾರಕೇರಿ ಮಠ, ಉಡುಪಿ

ಕರ್ತೃವಿನ-ನಿದೋರ್ಷತ್ವ-ಸರ್ವಜ್ಞತ್ವ
        ಶ್ರೀಮದ್ಭಾಗವತವು ಪುರಾಣಗಳಲ್ಲಿ ತಿಲಕಪ್ರಾಯವಾಗಿದೆ. ಮನುಷ್ಯೋತ್ತಮರಲ್ಲಿ ಕುಳಿತು ಅಜ್ಞಾನ-ಮಿಥ್ಯಾಜ್ಞಾನರೂಪದಿಂದ ಪೀಡಿಸುತ್ತಿದ್ದ ಕಲಿಯ ಶಿರವನ್ನು ಭಗವಾನ್ ವ್ಯಾಸರು ಭಗವತ್ ಪರವಾದ ಇಂಥ ಪುರಾಣಶಸ್ತ್ರದಿಂದಲೇ ಕತ್ತರಿಸಿದರೆಂದು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಮಧ್ವಾಚಾರ್ಯರು ಸಾರಿದ್ದಾರೆ. ವ್ಯಾಸರು ಯಃಕಶ್ಚಿತ್ ಋಷಿಯಲ್ಲ. ಭಾಗವತವೇ '' ಪರಸ್ಯ ಪುಂಸಃ ಪರಮಾತ್ಮನಃ ಕಲಾಂ'' ಎನ್ನುವ ವಚನದಲ್ಲಿ ತಿಳಿಸಿರುವಂತೆ ಪರಮಾತ್ಮನ ಸಾಕ್ಷಾತ್ ಅವತಾರ. ವಾಸ್ತವಿಕವಾಗಿ ಅವರು 'ಅಜರು' - ನಮ್ಮಂತೆ ಭೌತಿಕ ದೇಹ ಸಂಬಂಧ ರೂಪವಾದ ಜನ್ಮ ವಿದೂರರು. ಆದರೂ -ಪ್ರಜಾತ'ರು- ಸಚ್ಚಿದಾನಂದಮಯ ರೂಪದಿಂದ ಲೋಕದಲ್ಲಿ ಪ್ರಕಟರಾದವರು.
        ''ತಸ್ಯೈವಂ ಖಿನ್ನಮಾತ್ಮಾನಂ ಮನ್ಯಮಾನಸ್ಯ ಖಿದ್ಯತಃ ' ಎನ್ನುವ ವಚನದಲ್ಲಿ ಅವರಿಗೆ ಖೇದವಾಯಿತೆಂದು ಉಲ್ಲೇಖವಿದೆ. ಆದರೆ ಇಲ್ಲಿ ಖೇದವೆಂದರೆ ದುಃಖವಲ್ಲ. 'ಖೇದೋತೃಪ್ತಿರನಲಂಬುದ್ಧಿಃ ' ಎನ್ನುವ ಅಭಿಧಾನಕ್ಕನುಸಾರವಾಗಿ ಅತೃಪ್ತಿ ಎಂಬರ್ಹವನ್ನು ಸ್ವೀಕರಸಬೇಕು. ಭಕ್ತರಿಗಾಗಿ ತಾನು ಮಾಡಿದ ಜ್ಞಾನಕಾರ್ಯ ಸಾಲದು, ಇನ್ನೂ ತಾನು ಮಾಡಬೇಕೆಂಬ ಮಹೌದಾರ್ಯವೇ ಇಲ್ಲಿ ಖೇದ ಶಬ್ದದಿಂದ ಸೂಚಿತವಾಗಿದೆ.
        ಬಾದರಾಯಣರು ತನ್ನ ಪುತ್ರರಾದ ಶುಕರು ಸನ್ಯಾಸಿಯಾಗಿ ಹೊರಟಾಗ ಪುತ್ರನ ವಿರಹವನ್ನು ತಾಳಲಾರದೆ ಪುತ್ರನನ್ನು ಕೂಗಿದರು. ಅವರು ಕಾತರತೆಗೆ ಒಳಗಾದರು ಎಂಬ ಉಲ್ಲೇಖವಿದೆ. ಆದರೆ 'ವಿರಹಕಾತರ ಆಜುಹಾವ ' ಎನ್ನುವ ಮಾತಿಗೆ ಅಸುರ ವ್ಯಾಮೋಹಕ್ಕಾಗಿ ಅವರು ವಿರಹಕಾತರತೆಯನ್ನು ತೋರಿಸಿದರೇ ವಿನಾ ಅವರಿಗೆ ಕಾತರತೆ ಉಂಟಾಗಿಲ್ಲವೆಂದು ಅರ್ಥೈಸಬೇಕು. ಏಕೆಂದರೆ ಅವರು ದ್ವೈಪಾಯನರು. ಎಂಬ ಅರ್ಥಗರ್ಭಿತವಾದ ಶಬ್ದವನ್ನು ಬಳಸುವ ಮೂಲಕ ಈ ವಿಷಯವನ್ನು ಭಾಗವತವು ಸೂಚಿಸಿದೆ.
        ಯಮುನಾದ್ವೀಪವನ್ನೇ ಜನ್ಮಸ್ಥಾನವಾಗಿ ಪಡೆದವರು ಎಂಬರ್ಥದಲ್ಲಿ ಈ ಶಬ್ದವು ತೆರೆದುಕೊಂಡರೂ ಇದಕ್ಕೆ ಇನ್ನೊಂದು ಮುಖದ ಅಂತರಾರ್ಥವನ್ನೂ ನಾವು ಅಲ್ಲಗಳೆಯುವಂತಿಲ್ಲ. 'ದ್ವೈಪರು ' ಅಂದರೆ ಶ್ರೇಷ್ಠವಾದ ಪ್ರಸಿದ್ಧಶ್ವೇತದ್ವೀಪ ನಿವಾಸಿಗಳಾದ ಮುಕ್ತರು (ದ್ವೀಪಸ್ಯ ಸಂಬಂಧಿನಃ ದ್ವೈಪಾಃ) ಅವರಿಗೆ 'ಅಯನ' ಆಶ್ರಯನಾದವನೇ ದ್ವೈಪ + ಅಯನ = ದ್ವೈಪಾಯನ. ಅಂಥ ಮುಕ್ತರಿಗೆ ಆಸರೆಯನ್ನು ನೀಡಿದ ಭಗವಾನ್ ನಾರಾಯಣಸ್ವರೂಪರಾದ ಇವರಿಗೆ ಎಲ್ಲಿಂದ ವಿರಹವೇದನೆ? ಯಾವ ಸಾಧಕರು ಶ್ವೇತದ್ವೀಪಸ್ಥಶ್ರೀಹರಿಯನ್ನು ನೋಡಿದ ಬಳಿಕ ದೋಷದೂರರಾಗಿ ಸುಖಪೂರ್ಣರಾಗಿ 'ಶ್ವೇತ' ಎಂದೆನಿಸಿಕೊಳ್ಳುತ್ತಾರೋ 'ಶುದ್ಧಃ ಶ್ವೇತಃ ಸುಖೀ ಶ್ವೇತಃ ಶ್ವೇತವರ್ಣೋಪಿ ಕಥ್ಯತೇ ' ಎನ್ನುವ ಪ್ರಮಾಣವಚನದಿಂದ ಈ ಅರ್ಥವು ಸಿದ್ಧವಾಗಿದೆ. ಅಂಥ ಮುಕ್ತರಿಗೆ ಆಶ್ರಯನಾಗಿ ದ್ವೈಪಾಯನನಾದ ಈತನಿಗೆ ದೋಷಲೇಶವನ್ನಾದರೂ ಊಹಿಸಲು ಸಾಧ್ಯವೆ ?
        ತನಗೆ ತೃಪ್ತಯಾಗಬೇಕಾದರೆ ತಾನೇನು ಮಾಡಬೇಕೆಂದು ತೋಚದೆ ಅವರು ತನ್ನಾಶ್ರಮಕ್ಕೆ ಬಂದಿರುವ ನಾರದರನ್ನು ಕೇಳಿದರೆಂದೂ ಉಲ್ಲೇಖವಿದೆ. ಇದೂ ಅಸುರವ್ಯಾಮೋಹಕ್ಕಾಗಿ ಅಜ್ಞಾನ ಪ್ರದರ್ಶನಮಾತ್ರ. ಏಕೆಂದರೆ ಅವರು ಸ್ವತಃ ಸರ್ವಜ್ಞರು. 'ಇದಂ ಭಾಗವತಂ ನಾಮ ಪುರಾಣಂ ಬಹ್ಮಸಮ್ಮಿತಂ | ಅಧೀತವಾನ್ ದ್ವಾಪರಾದೌ ಪಿತುರ್ದ್ವೈಪಾಯನಾದಹಂ' ಎನ್ನುವ ಭಾಗವತ ವಚನದಲ್ಲಿ ಉಲ್ಲೇಖಿಸಲ್ಪಟ್ಟ ಶುಕರು ಮಾತಿನಿಂದ ಅವರು ದ್ವಾಪರಯುಗದಲ್ಲಿ ಕೃಷ್ಣಾವತಾರಕ್ಕಿಂತ ಮೊದಲೇ ( ದ್ವಾಪರೇ, ಆದೌ ದ್ವಾಪರಾದೌ) ತಂದೆಯಾದ ವ್ಯಾಸರಿಂದ ವಿಸ್ತಾರವಾದ ಕೃಷ್ಣಚರಿತ್ರೆಯನ್ನೊಳಗೊಂಡು ಭಾಗವತವನ್ನು ಕೇಳಿದರೆಂದು ವೇದ್ಯವಾಗುತ್ತದೆ. ಭವಿಷ್ಯದ ಕೃಷ್ಣಾವತಾರದ ಬಗ್ಗೆ ಸ್ಪಷ್ಟ ಜ್ಞಾನದಿಂದ ಅವರು ಸ್ವತಃ ಸರ್ವಜ್ಞನಾದ ಭಗವತನೆಂದೇ ಸಿದ್ಧವಾಗುತ್ತದೆ. ಭಗವಂತನಲ್ಲದವರಿಗೆ ಭಗವಂತನ ಬಗ್ಗೆ ಭವಿಷ್ಯದ ಜ್ಞಾನವಿರಲು ಸಾಧ್ಯವೆ?

ವ್ಯಾಸರ ಆತ್ಮಚರಿತ್ರೆ-ಭಾಗವತ
        ಭಾಗವತವು ಶ್ರೀವ್ಯಾಸರೇ ರಚಿಸಿದ ಆತ್ಮಚರಿತ್ರೆ. ವಿವಿಧ ಅವತಾರಗಳೂ ಅವರ ಸ್ವರೂಪಭೂತಗಳಾಗಿವೆ. ಇದನ್ನೇ ''ಏತೇ ಸ್ವಾಂಶಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಂ'' ಎಂದು ಭಾಗವತವು ಸಾರಿದೆ. ಪೂರ್ಣನಾದ ಭಗವಂತನ ವರಾಹ-ಮತ್ಸ್ಯ ಮುಂತಾದ ಸ್ವರೂಪಾಂಶಗಳು ಸ್ವತಃ ಷಡ್ಗುಣಪೂರ್ಣನಾದ ಭಗವಾನ್ ಕೃಷ್ಣನೇ, ಅರ್ಥಾತ್ ವಾಸಿಷ್ಠ ಕೃಷ್ಣನೇ ಎಂಬರ್ಥದಲ್ಲಿ ಈ ವಚನವು ತೆರೆದುಕೊಳ್ಳುತ್ತದೆ. ವೇದವ್ಯಾಸರಿಗೆ ವೇದವನ್ನು ವಿಕರ್ಷಣ-ವಿಭಾಗ ಮಾಡಿದ್ದರಿಂದ ಕೃಷ್ಣ ಎಂಬ ಹೆಸರು ಅನ್ವರ್ಥವಾಗಿದೆ. ಭಗವಂತನು ತನ್ನನ್ನು ಯಾವ ತೆರನಾಗಿ ತಿಳಿದಿದ್ದಾನೋ ಆ ತೆರನಾಗಿ ಯಾರೂ ತಿಳಿಯಲು ಸಾಧ್ಯವಿಲ್ಲ. ಹೀಗಾಗಿ ಆತನೇ ರಚಿಸಿದ ಈ ಭಾಗವತರೂಪ ಆತ್ಮಚರಿತ್ರೆ ಅತ್ಯಂತ ಮಾನ್ಯವೆನಿಸಿದೆ.
        ವ್ಯಾಸಪ್ರಣೀತವಾದ ಈ ಭಾಗವತವನ್ನು ಪರಮವಿರಕ್ತರಾದ ರುದ್ರ ಸ್ವರೂಪಭೂತರಾದ ಶುಕರೂ ಕೇಳಿದರು. 'ಪರಿನಿಷ್ಠಿತೋಪಿ ನೈರ್ಗುಣ್ಯ ಉತ್ತಮ ಶ್ಲೋಕಲೀಲಯಾ | ಗೃಹೀತಚೇತಾ ರಾಜರ್ಷ ಆಖ್ಯಾನಂ ಯದಧೀತವಾನ್' ಎನ್ನುವ ವಚನವು ತೀಳಿಸಿರುವಂತೆ ಅವರು ತಮಗೆ ಮೋಕ್ಷ ಖಚಿತವೆಂದು ತಿಳಿದಿದ್ದರೂ ಭಗವಂತನ ಲೀಲಾಮಾಧುರ್ಯಪರವಶರಾಗಿ ಕೇಳದೆ ಸುಮ್ಮನಿರಲು ಅವರಿಂದ ಸಾದ್ಯವಾಗಲಿಲ್ಲ.

ನಿಶ್ಚಿತ ಮುಕ್ತಿಗಳಿಗೂ ಭಾಗವತ ಶ್ರವಣ-ಸಫಲ
        ಕೇವಲ ಭಗವಂತನ ಲೀಲಾ ಮಾಧುರ್ಯಕ್ಕೆ ಮನಸೋತು ಭಗವತ್ ಕಥೆಯನ್ನು ಆಲಿಸಿದ ಶುಕರಿಗೆ ಭಾಗವತಶ್ರವಣದಿಂದ ಪಾರತ್ರಿಕ ಫಲವಿಲ್ಲವೆ? ಎಂಬ ಪ್ರಶ್ನೆಯು ಇಲ್ಲಿ ಉದ್ಭವಿಸುತ್ತದೆ. ಅದಕ್ಕೆ 'ಉತ್ತಮಶ್ಲೋಕಲೀಲಯಾ' ಎಂಬ ಮಾತಿನಲ್ಲಿ ಉತ್ತರವು ಅಡಗಿದೆ. ಇಲ್ಲಿ ಉತ್ತಮಶ್ಲೋಕ ಶಬ್ದವು ಉತ್ತಮವಾದ ಕೀರ್ತಿಶಾಲಿಯಾದ ಭಗವಂತ ಎಂಬರ್ಥದಲ್ಲಿ ತೆರೆದುಕೊಂಡರೂ ಇದು ಇನ್ನೊಂದರ್ಥದಲ್ಲಿ ತೆರೆದುಕೊಳ್ಳುತ್ತದೆ. ಉತ್ತಮ-ಅತಿಶಯಿತವಾದ ಶ್ಲೋಕ-ಶಂ-ಲೋಕ = ಶ್ಲೋಕ = ಸುಖ ಮತ್ತು ಜ್ಞಾನಗಳು ಯಾವ ಲೀಲೆಯನ್ನು ಶ್ರವಣ ಮಾಡಿದ್ದರಿಂದ ಮುಕ್ತಿಯಲ್ಲಿ ಅಪರೋಕ್ಷಜ್ಞಾನಿಗಳಿಗೆ ಸಿಗುವುದೋ ಅದೇ 'ಉತ್ತಮ ಶ್ಲೋಕಲೀಲೆ' ಎನಿಸುತ್ತದೆ. (ಉತ್ತಮೌ- ಅತಿಶಯಿತೌ ಶ್ಲೋಕೌ = ಆನಂದಬೋಧೌ ಯಸ್ಯಾಃಸಾ ಉತ್ತಮ ಶ್ಲೋಕಾ, ಸಾಚಾಸೌ ಲೀಲಾ ಚ ಉತ್ತಮಶ್ಲೋಕಲೀಲಾ) 'ಶುಭಂ ಕೃತ್ಯಾ ಚ ವರ್ಧತೇ' ಎನ್ನುವ ವಚನದಲ್ಲಿ ಜ್ಞಾನೋತ್ತರದಲ್ಲಿ ಮಾಡುವ ಸತ್ಕರ್ಮಗಳಿಗೆ ಫಲ ಮೋಕ್ಷದಲ್ಲಿ ಸ್ವರೂಪಾನಂದದ ಅತಿಶಯ ಉನ್ನಾಹ (ಸ್ಪಷ್ಟ ಆನಂದದ ಅಭಿವ್ಯಕ್ತಿ) ವೆಂದು ತಿಳಿಸಲಾಗಿದೆ.
        ಶುಕರು ಬ್ರಹ್ಮಾಪರೋಕ್ಷಜ್ಞಾನಿಗಳಾದರೂ ಮುಕ್ತಿಯಲ್ಲಿ ಆನಂದದ ಉನ್ನಾಹಕ್ಕೋಸ್ಕರ ಭಗವತ್ಕಥಾ ಶ್ರವಣದಲ್ಲಿ ಪ್ರವೃತ್ತರಾದರೆಂದು ಸೂಚ್ಯವಾಗಿ -
ಋಷ್ಯುತ್ತಮಾ ದೇವಾಶ್ಚ ವಿಮುಕ್ತೌಪರಿನಿಶ್ಚಿತಾಃ |
ತಥಾಪ್ಯಧಿಕಸೌಖ್ಯಾರ್ಥಂ ಯತಂತೇ ಶುಭಕರ್ಮಸು ||
        ಎಂಬ ಪ್ರಮಾಣ ವಚನದಿಂದ ಮಧ್ವರು ತೀಳಿಸಿದ್ದಾರೆ.
        ಇಲ್ಲಿ ಉತ್ತಮಶ್ಲೋಕಹೇತುಲೀಲಾ ಉತ್ತಮಶ್ಲೋಕಲೀಲಾ ಎಂಬುದಾಗಿ ಮಧ್ಯಮಪದಲೋಪಿಸಮಾಸವನ್ನೂ ಸ್ವೀಕರಿಸಬಹುದು.
        'ಶ್ಲೋಕಂ ವಂದತಿ' ಎಂಬ ಉಪನಿಷತ್ತಿನಲ್ಲಿ ಬಂದ ಶ್ಲೋಕ ಶಬ್ದಕ್ಕೆ ಆಚಾರ್ಯರು ಭಾಷ್ಯದಲ್ಲಿ ಶಂ = ಸುಖಂ ಲೋಕಂ = ಜ್ಞಾನಂ ಚ ವಿಂದತಿ ಎಂಬುದಾಗಿ ಅರ್ಥವನ್ನು ವಿವರಿಸಿದ್ದಾರೆ. ಆದುದರಿಂದ ಶ್ಲೋಕಶಬ್ದಕ್ಕೆ ಈ ತೆರೆನಾದ ಅರ್ಥವು ಸಂಪ್ರದಾಯ ಸಿದ್ಧವಾಗಿದೆ.
ಭಾಗವತ ಶ್ರೋತೃವಾದ ಪರೀಕ್ಷತನ ಬಗ್ಗೆ ಶ್ರೀಕೃಷ್ಣ ನಿರಸ್ತ ಕುಹಕನಾದ
        ಭಗವಂತನ ವಿವಿಧ ಅವತಾರಗಳ ಕಥೆಯನ್ನು ಅದರಲ್ಲೂ ವಿಶೇಷವಾಗಿ ಶ್ರೀಕೃಷ್ಣನ ಕಥೆಗಳನ್ನು ಭಕ್ತಿ ವೈರಾಗ್ಯಸಂಪನ್ನನಾಗಿ ಹರಿಪಾದೋದಕವೆನಿಸಿದ ಮಹಾಗಂಗಾಸನ್ನಿಧಾನದಲ್ಲಿ ಋಷ್ಯಾದಿ ವೈಷ್ಣೋತ್ತಮರಿಂದ ಕೂಡಿದ ಶ್ರೀ ಭಾರ್ಗವರಾಮ-ಶ್ರೀವ್ಯಾಸಾತ್ಮಕ ಉಭಯ ಭಗವದ್ರೂಪಗಳ ಮಹಾಸನ್ನಿಧಾನದಲ್ಲಿ ನಿರಂತರ ಏಳುದಿನಗಳ ಪರ್ಯಂತ ಮಹಾಭಾಗವತರಾದ ರುದ್ರಸ್ವರೂಪಿ ಶುಕರಿಂದ ಆಲಿಸಿದ ಪರೀಕ್ಷಿತನು "ಭೇಜೇ ಖಗೇಂದ್ರಧ್ವಜಪಾದ ಮೂಲಂ" ಎನ್ನುವ ವಚನವು ತಿಳಿಸಿದಂತೆ ಶ್ರೀಹರಿಪಾದವನ್ನು ಅನಾಯಾಸವಾಗಿ ಸೇರಿ ವಿಮುಕ್ತನಾದನು. ಬ್ರಹ್ಮಶಾಪದಿಂದ ಪ್ರೇರಿತನಾದ ತಕ್ಷಕನೂ ವೇಷಾಂತರದಿಂದ ಬಂದು ಕಚ್ಚಿದರೂ ಆತನಿಗೆ ಅಪಮೃತ್ಯು ವೇದನೆ ಭಯ ದುರ್ಗತಿಗಳನ್ನು ನೀಡಲು ಸಫಲನಾಗಲಿಲ್ಲ. ಭಗವಾನ್ ಶ್ರೀಕೃಷ್ಣನು ತನ್ನ ಭಕ್ತನ ಮೇಲೆ ಹರಿಸಿದ ಕೃಪಾಮೃತದ ಪ್ರಭಾವದಿಂದ ವೇಷಾಂತರವನ್ನು ಹೊಂದಿ 'ಕುಹಕ' ನೆನಿಸಿದ ತಕ್ಷಕನಿಂದ ಯಾವ ಅನಿಷ್ಟಗಳೂ ಭಕ್ತನಿಗೆ ಬಾರದಂತೆ ಅನಿಗ್ರಹಿಸಿದನು. ಒಟ್ಟಿನಲ್ಲಿ ತಕ್ಷಕನು ಪರೀಕ್ಷಿತನ ಬಗ್ಗೆ ಘೋರವ್ದ ಶಾಪಪ್ರಭಾವವಿದ್ದರೂ ಶ್ರೀಕೃಷ್ಣನ ಪ್ರಭಾವದಿಂದ ಹತ ತೇಜಸ್ಕನಾದನು. ಆತನಿಗೆ ಅನಿಷ್ಟವನ್ನು ನೀಡಲು ವಿಫಲನಾಗಿ ನಿರಸ್ತನಾದನು
        ಈ ರೀತಿಯಾಗಿ ತಕ್ಷಕನ ಪ್ರಭಾವವನ್ನು ಪರೀಕ್ಷತನ ವಿಷಯದಲ್ಲಿ ನಿರಾಸ ಮಾಡಿದ್ದರಿಂದ ಮೊದಲನೆಯ ಪದ್ಯದಲ್ಲಿ ಭಗವಾನ್ ಶ್ರೀಕೃಷ್ಣನು ನಿರಸ್ತಕುಹಕನೆಂದು ಕೀರ್ತಿತನಾಗಿದ್ದಾನೆ. ವಿಜಯಧ್ವಜರು ಕುಹಕ ಶಬ್ದಕ್ಕೆ ವೇಷಾಂತರಲೀನನಾದ ತಕ್ಷಕ ಎಂಬರ್ಥವನ್ನೂ ಬರೆದಿದ್ದಾರೆ. ಆದುದರಿಂದ ಈ ಅರ್ಥವು ಇಲ್ಲಿ ಸಂಪ್ರದಾಯಸಿದ್ಧವಾಗಿದ್ದು ಉಚಿತವೆನಿಸಿದೆ. ತಕ್ಷಕನಿಂದ ದೇಹತ್ಯಾಗದ ಸಮಯದಲ್ಲಿ ಹರಿಯಲ್ಲಿ ಮನನೆಟ್ಟ ಪರೀಕ್ಷತನಿಗೆ ಯಾವ ಅನಿಷ್ಟಗಳೂ ಆಗಲಿಲ್ಲವೆಂದು-
ಬ್ರಹ್ಮಶಾಪೋತ್ಥಿತಾದ್ಯಸ್ತು ತಕ್ಷಕಾತ್ ಪ್ರಾಣವಿಪ್ಲವೇ |
ನ ಸಂಮುಮೋಹೋರುಭಯಾತ್ ಭಗವತ್ಯರ್ಪಿತಾಶಯಃ ||
        ಎಂಬ ವಚನವನದಲ್ಲಿ ಪ್ರತಿಪಾದಿಸಲಾಗಿದೆ.
ಶುಕರ ವೈಶಿಷ್ಯ
        ಶುಕಾಚಾರ್ಯರು, ಸರ್ವಭೂತ ಹೃದಯಂ ಎಂದು ಭಾಗವತವು ಸೂಚ್ಯವಾಗಿ ಬೋಧಿಸಿದಂತೆ ಸರ್ವ ಜೀವರ ಹೃದ್+ಅಯಂ=ಹೃದಯ - ಮನಸ್ಸಿನಲ್ಲಿ ನಿಯಾಮಕರಾಗಿ ನೆಲೆಸಿದವರು. ಅರ್ಥಾತ್ ಮನೋನಿಯಾಮಕ ರುದ್ರ ಸ್ವರೂಪಭೂತರು. 'ಅಹಂಕಾರಾತ್ಮಕೋ ರುದ್ರಃ ಶುಕೋ ದ್ವೈಪಾಯನಾತ್ಮಜಃ' ಎನ್ನುವ ಸ್ಕಾಂದ ವಚನದಿಂದ ಈ ಪ್ರಮೇಯವನ್ನು ಮಧ್ವರು ಸ್ಪಷ್ಟಪಡಿಸಿದ್ದಾರೆ.
        ಅವರ ಇನ್ನೊಂದು ಮುಖದ ವೈಶಿಷ್ಟ್ಯವನ್ನು 'ಅಪೇತಕೃತ್ಯಂ' ಎನ್ನುವ ಪದದಿಂದ ಸೂಚಿಸಲಾಗಿದೆ. ಛೇದಿಸಲು ಅರ್ಹವಾದ ( ಪರಿಹರಿಸಲು ಯೋಗ್ಯವಾದ) ಅರ್ಥಾತ್ ಪರಿಹಾರಮಾಡದೆ ಉಳಿದಿರುವ ಪರೀಕ್ಷಿತನು ಕೇಳಿದಯಾವ ಪ್ರಶ್ನೆಯೂ ಅವರಲ್ಲಿ ಇಲ್ಲ. ಎಲ್ಲಾ ಪ್ರಶ್ನೆಗಳನ್ನು ಅವರು 'ಛಿನ್ನ ಸಂಶಯ' ರೆನಿಸಿದ್ದಾರೆ. ಇದೇ ಗುರುವಿನ ದೊಡ್ಡ ಲಕ್ಷಣ 'ಅಸಂಶಯಃ ಸಂಶಯಚ್ಛಿತ್ ಗುರುರುಕ್ತೋ ಮನೀಷೀಭಿಃ' ವಾಯುದೇವರ ವಿಶೇಷ ಸನ್ನಿಧಾನ ಬಲದಿಂದ ರುದ್ರರೂಪಿ ಶುಕರು ಶಿಷ್ಯನ ಎಲ್ಲಾಪ್ರಶ್ನೆ (ಸಂಶಯ) ಗಳನ್ನು ಪರಿಹರಿಸಲು ಶಕ್ತರಾದರು.
        ಅಪೇತಕೃತ್ಯ ಎನ್ನುವ ಪದವು ಅವರ ಇನ್ನೊಂದು ಮುಖ್ಯ ವೈಶಿಷ್ಟ್ಯದಲ್ಲೂ ತೆರೆದುಕೊಳ್ಳುತ್ತದೆ.
        ಅವರು ರುದ್ರಾವತಾರ ಭೂತರಾದ ದೂರ್ವಾಸರಂತೆ ಯಾವ ಕೃತ್ಯೆಯನ್ನು ವಿಷ್ಣುಭಕ್ತರ ವಿರುದ್ಧ ಪ್ರಯೋಗಿಸಿ ವೈಷ್ಣವದ್ರೋಹ ಬಗೆದವರಲ್ಲ. ಅಥವಾ ರುದ್ರಸ್ವರೂಪರಾದ ಅಶ್ವತ್ಠಾಮಾಚಾರ್ಯರಿಗೆ ಕೃಷ್ಣನಿಗೆ ಅಪ್ರಿಯವಾಗುವ ರೀತಿಯಲ್ಲಿ ವೈಷ್ಣವನಾದ ಪರೀಕ್ಷತನು ಛೇದ್ಯನಾದಂತೆ (ಸಂಹರಿಸಲು ಯೋಗ್ಯನಾದಂತೆ) ಇವರಿಂದ ಯಾವ ವೈಷ್ಣವರೂ ಕೃಷ್ಣನಿಗೆ ಅಪ್ರಿಯವಾದ ಹಿಂಸೆಗೆ ಒಳಗಾಗಲಿಲ್ಲ. ಒಟ್ಟಿನಲ್ಲಿ ರುದ್ರನ  ಅವತಾರಭೂತರಾದ ದೂರ್ವಾಸ-ಅಶ್ವತ್ಥಾಮಾಚಾರ್ಯರು ವೈಷ್ಣವದ್ರೋಹ ಬಗೆದರೂ ಈ ಶುಕರೂಪವು ಈ ಕೆಲಸವನ್ನು ಮಾಡಿಲ್ಲ. ಇದೇ ಈ ಶುಕರೂಪದ ಇನ್ನೊಂದು ಮುಖದ ವೈಶಿಷ್ಟ. ಇದಕ್ಕೆಮುಖ್ಯಕಾರಣ ವಾಯುದೇವರ ವಿಶೇಷ ಸನ್ನಿಧಾನದ ಪ್ರಭಾವವೆಂದೇ ತಿಳಿಯಬೇಕು. ಈ ಅಂಶವನ್ನು 'ಸ್ವಮರೋತ್ತಮಾಭಂ' ಎನ್ನುವ ಪದದಿಂದ ಸೂಚ್ಯವಾಗಿ ತಿಳಿಸಲಾಗಿದೆ. ಅಮರೋತ್ತಮ ಅಂದರೆ ವಾಯುದೇವರು ಅವರ ಸು=ಶೋಭನವಾದ, ಆಭಾ=ಸನ್ನಿಧಾನ ಪ್ರಭಾವ.  ಅದನ್ನು ಹೊಂದಿದ ಶುಕರು 'ಸ್ವಮರೋತ್ತಮಾಭ' ಎಂದೆನಿಸಿದ್ದಾರೆ. ಅಪೇತಾ ಕೃತ್ಯಾ ಯಸ್ಮಾತ್ ಸಃ ಅಪೇತಕೃತ್ಯಃ= ಎಂಬುದಾಗಿ ದೂರ್ವಾಸರಲ್ಲಿದ್ದ ದೋಷವನ್ನು ನಿರಾಕರಿಸುವ ಬಗೆಯಲ್ಲಿ ಈ ಪದವು ತೆರೆದುಕೊಂಡರೆ, ಅಪೇತಃ ಕೃತ್ಯಃ (ಹಿಂಸ್ಯಃ) ಯಸ್ಮಾತ್ ಸಃ ಎಂಬುದಾಗಿ ಅಶ್ವತ್ಥಾಮಾಚಾರ್ಯರಲ್ಲಿದ್ದ ದೋಷವನ್ನು ನಿರಾಕರಿಸುವ ಬಗೆಯಲ್ಲಿ ತೆರೆದುಕೊಳ್ಳುತ್ತದೆ.
        ಕೃತಿ ಛೇದನೇ ಎಂಬ ಧಾತುವನ್ನು ಮೂಲವಾಗಿ ಸ್ವೀಕರಿಸಿದಾಗ ಮೊದಲನೆಯ ಅರ್ಥ ಹಾಗೂ ಮೂರನೆಯ ಅರ್ಥ ಸಮುಚಿತವಾಗುತ್ತದೆ. ಕಲಿಯ ಆವೇಶದಿಂದ ಕಲಿಪ್ರೀತಿಗಾಗಿ ವೈಷ್ಣವನಾದ ಪರೀಕ್ಷಿತನನ್ನು ಅಶ್ವತ್ಥಾಮರೂಪದಿಂದ ಕೃಷ್ಣನಿಗೆ ಅಪ್ರಿಯವಾಗುವಂತೆ ಸಂಹರಿಸಲುದ್ಯುಕ್ತರಾಗಿ ಮಾಡಿದ ಅಪರಾಧದ ಪರಿಮಾರ್ಜನೆಗಾಗಿಯೇ ಎಂಬಂತೆ ಅದೇ ಪರೀಕ್ಷತನಿಗೆ ರುದ್ರದೇವರು ಶುಕರೂಪದಿಂದ ಭಾಗವತಾಮೃತವನ್ನುಣಿಸಿ ಅನುಗ್ರಹಿಸಿ ಕೃಷ್ಣಾನುಗ್ರಹ ಪಾತ್ರರಾದರು.
ಬ್ರಹ್ಮರಾತ-ಶುಕ
ತ್ರೀಮೂರ್ತಿತಾರತಮ್ಯ

        ಜಗದ್ಗುರು ಸ್ಥಾನದಲ್ಲಿ ವಿರಾಜಮಾನರಾದ ಬ್ರಹ್ಮದೇವರನ್ನು ಒಮ್ಮೆ ಜ್ಞಾನಾರ್ಥಿಗಳಾಗಿ ಮುನಿಗಳು ಗುರುವನ್ನು ಕರುಣಿಸಲು ಪ್ರಾರ್ಥಿಸಿದರು. ಆಗ ಚತುರ್ಮುಖ ಬ್ರಹ್ಮದೇವರಿಂದ ಶುಕರು ಬಾಲರಾಗಿದ್ದರೂ ಜ್ಞಾನ ವೃದ್ಧರಾದುದರಿಂದ ಋಷಿಗಳಿಗೆ ತತ್ತ್ವದ ಉಪದೇಶದ ಸಲುವಾಗಿ ಗುರುರೂಪದಲ್ಲಿ ಪ್ರದಾನ ಮಾಡಲ್ಪಟ್ಟರು. ಆದುದರಿಂದ ವ್ಯಾಸಪುತ್ರರಾದ ಅವರಿಗೆ 'ಬ್ರಹ್ಮರಾತ' (ಬ್ರಹ್ಮನಿಂದ ದತ್ತರು) ಎಂಬ ಹೆಸರು ಪ್ರಾಪ್ತವಾಯಿತು.
ಬಾಲೋಪಿ ಸ ಗುರುತ್ವೇನ ಮುನಿಭ್ಯೋ ಬ್ರಹ್ಮಣೋ ಯತಃ|
ದತ್ತೋತಃ ಬ್ರಹ್ಮರಾತೇತಿ ನಾಮ ವೈಯಾಸಕೇರಭೂತ್ ||
        ಎನ್ನುವ ಮಾತಿನಿಂದ ಈ ವಿಷಯವು ವೇದ್ಯವಾಗುತ್ತದೆ.
        ಎಲ್ಲಾ ಮುನಿಗಳಿಗೆ 'ಜ್ಞಾನಂ ಮಹೇಶ್ವರಾದಿಚ್ಛೇತ್' ಎಂದು ಭಾಗವತವು ಸೂಚಿಸಿದಂತೆ ಅಪೇಕ್ಷಣೀಯವಾದ (ಶಿವನಿಂದ ಜ್ಞಾನವನ್ನು ಪಡೆಯಬೇಕೆಂದು ಭಾಗವತದ ಶಾಸನ) ಜ್ಞಾನವನ್ನು ರುದ್ರರುಪಿ ಶುಕರು ಅನುಗ್ರಹಿಸಿ 'ಮುನಿಗುರು' (ಗುರುಂ ಮುನೀನಾಂ) ವೆಂದು ಪ್ರಸಿದ್ಧಿ ಪಡೆದರು. ಬ್ರಹ್ಮನಿಂದ ರುದ್ರರೂಪರಾದ ಶುಕರು ಜ್ಞಾನಕಾರ್ಯದಲ್ಲಿ ನಿಯೋಜಿತರಾದುದರಿಂದ ನಿಯೋಜಕರಾದ ಬ್ರಹ್ಮನು ಶ್ರೇಷ್ಠನು. ಅವನಿಂದ ನಿಯೋಜಿತರಾದ ಶುಕರು (ರುದ್ರನು) ಅವರಿಗಿಂತ ನಿಕೃಷ್ಟರು. ಅವನನ್ನೂ ಜಗದ್ಗುರು ಸ್ಥಾನದಲ್ಲಿ ನಿಯೋಜಿಸಿದವನು ಶ್ರೀ ಹರಿ. 'ಜಗದ್ಗುರುತ್ವ ಮಾದಿಷ್ಟಂ ಮಯಾ ತೇ ಕಮಲೋದ್ಭವ' ಎಂಬ ಮಾತಿನಿಂದ ಈ ವಿಷಯ ಸಿದ್ಧವಾಗಿದೆ. ಇದಲ್ಲದೆ ಭಾಗವತದಲ್ಲಿ ತಿಳಿಸಿದಂತೆ ಆತನನ್ನು ಸೃಜಿಸಿ ಸೃಷ್ಟಿಕಾರ್ಯದಲ್ಲಿ ತೊಡಗಿಸಿದವನೂ ಶ್ರೀಹರಿ. ಆದುದರಿಂದ ನಿಯೋಜಿತರಾದ ಬ್ರಹ್ಮನಿಗಿಂತಲೂ ಆತನನ್ನು ಸೃಷ್ಟಾದಿಕಾರ್ಯದಲ್ಲಿ ನಿಯೋಜಿಸಿದ ಶ್ರೀಹರಿ ಉತ್ತಮನು- ಸರ್ವೋತ್ತಮನು ಎಂಬುದು ಸಿದ್ಧವಾಯಿತು.
        ತ್ರಿವಿಕ್ರಮರೂಪಿ ಪರಮಾತ್ಮನ ಪಾದವನ್ನು ತೊಳೆದವನು ಬ್ರಹ್ಮದೇವನು. ಪಾದಪ್ರಕ್ಷಾಲನ ಜಲವಾದ ಗಂಗೆಯನ್ನು ಶಿರಸ್ಸಿನಲ್ಲಿ ಧರಿಸಿ ಶಿವನು ಶಿವನಾದನು (ಪವಿತ್ರನೂ ಮಂಗಳ ಸ್ವರೂಪನೂ ಆದನು) ಪಾದ ತೊಳೆಸಿಕೊಂಡವನು ಶ್ರ್?ಇಹರಿ. ಇದರಿಂದ ಪಾದ ತೊಳೆಸಿಕೊಂಡ ಶ್ರೀಹರಿ ಸರ್ವೋತ್ತಮನು. ಪಾದ ಪ್ರಕ್ಷಾಲನೆ ಮಾಡಿದ ಪೂಜಕನಾದ ಬ್ರಹ್ಮನು ಜೀವೋತ್ತಮನು ಆತನು ಒದಗಿಸಿದ ಪಾದಪ್ರಕ್ಷಾಲನ ಜಲವನ್ನು ಧಾರಣಮಾಡಿ ಪವಿತ್ರನಾದ ಶಿವನು ನಂತರ ಸ್ಥಾನದಲ್ಲಿ ಇರುತ್ತಾನೆಂದು ಲೌಕಿಕ ನ್ಯಾಯದಿಂದಲೂ ಸಾಬೀತಾಗುತ್ತದೆ. ೧-೧೮-೨೧ ಶ್ಲೋಕವು ವಿಷ್ಣು-ಬ್ರಹ್ಮ-ರುದ್ರರ ಸ್ಥಾನ-ಮಾನವನ್ನು ಹಿಂದೆ ತಿಳಿಸಿದಂತೆ ಸೂಚ್ಯವಾಗಿ ಪ್ರತಿಪಾದಿಸಿದೆ.
ಶಿವ-ಬ್ರಹ್ಮರ ಪಾರತಂತ್ರ್ಯ
        ಪ್ರಥಮ ಸ್ಕಂದದಲ್ಲಿ ವರ್ಣಿಸಿದಂತೆ ರುದ್ರರೂಪಿಯಾದ ಅಶ್ವತ್ಥಾಮಾಚಾರ್ಯರು ಗರ್ಭಸ್ಥನಾದ ಪರೀಕ್ಷತನನ್ನು ಸಂಹರಿಸಲು ಪ್ರಬಲವಾದ ಬ್ರಹ್ಮಶಿರೋಸ್ತ್ರವನ್ನು ಪ್ರಯೀಗಿಸಿದರೂ ಸಫಲರಾಗಲಿಲ್ಲ. ಏಕೆಂದರೆ ಆ ಹತ್ಯೆ ಭಗವಂತನ ಸಂಕಲ್ಪಕ್ಕೆ ವಿರುದ್ಧವಾಗಿತ್ತು. ಹರಿಯ ಅನುಗ್ರಹದಿಂದ ದೂರರಾದ ಶಿವರೂಪಿ ಅಶ್ವತ್ಥಾಮರು ಪ್ರಬಲ ಬ್ರಹ್ಮಶಿರೋಸ್ತ್ರದಿಂದ ಶಿಶಿವನ್ನೇ ಕೊಲ್ಲಲು ಸಮರ್ಥರಾಗಲಿಲ್ಲ. ಹೀಗಿರುವಾಗ ಭಗವಂತನ ಅನುಗ್ರಹವಿಲ್ಲದೆ ಅವರು ಸ್ವತಂತ್ರರಾಗಿ ಸಮಗ್ರ ಜಗತ್ತನ್ನು ಮೂಲರೂಪದಲ್ಲಿ ಸಂಹರಿಸಲು ಸಫಲರಾಗುವರೆ?
        ಸೃಷ್ಟಿಕಾರ್ಯದಲ್ಲಿ ತಾನು ಸ್ವತಂತ್ರನಲ್ಲ. ಭಗವಂತನ ಮಾಯ್ರ್ಯಿಂದ ಮೋಹಿತವಾದ ಬುದ್ಧಿಯಿಂದ ಕೆಲವರು ತನಗಿಂತ ಉತ್ತಮನಾದ ಶ್ರೀಹರಿಯನ್ನು ಕಾಣದೆ ತನ್ನನ್ನೇ ಜಗದ್ಗುರು ಅರ್ಥಾತ್ ಸ್ವತಂತ್ರನಾಗಿ ಜಗತ್ತಿನ ಜನಕನೆಂದು ಭಾವಿಸುತ್ತಾರೆ. ೨-೫-೧೦ - ೨-೫-೧೨. ತಾನು ಭಗವಂತನಿಂದ ರೇರಿತನಾಗಿ ಸೃಷ್ಟಿಕಾರ್ಯವನ್ನು ಮಾಡುತ್ತೇನೆ. ರುದ್ರನು ಭಗವಂತನ ಅಧೀನನಾಗಿಯೇ ಈ ಜಗತ್ತನ್ನು ಸಂಹರಿಸುತ್ತಾನೆ. ೨-೬-೩೧ ಎಂಬುದಾಗಿ ಸ್ವಯಂ ಜಗದ್ಗುರುವಾದ ಬ್ರಹ್ಮದೇವರೇ ಪುತ್ರರಾದ ನಾರದರ ಹಿತೈಷಿಯಾಗಿ ತನ್ನ ರುದ್ರನ ಪಾರಮ್ಯವನ್ನು ನಿರಾಕರಿಸಿ ತಮ್ಮಿಬ್ಬರ ಸೃಷ್ಟಾದಿ ಕಾರ್ಯದಲ್ಲಿ ಪಾರತಂತ್ರ್ಯವನ್ನು ಸ್ಪಷ್ಟಪಡಿಸಿದ್ದಾರೆ.
ಶುಕಶ್ರುತ ಶ್ರೀಕೃಷ್ಣನು ನಿರಸ್ತಕುಹಕ ಕಾಮಾದಿದೋಷದೂರನು
        ಕಲಿಮಲವನ್ನು ಶ್ರವಣಮಾತ್ರದಿಂದ ತೊಳೆಯುವ ಶ್ರೀಕೃಷ್ಣನ ವಿಶೇಷಚರಿತ್ರೆಯನ್ನು ವಿಶದವಾಗಿ ಬಣ್ಣಿಸಲು ಪ್ರವೃತ್ತವಾದ ಶ್ರೀಮದ್ಭಾಗವತವು ಕೃಷ್ಣನನ್ನು ನಿರಸ್ತಕುಹಕ ಎಂದು ಮಂಗಲಪದ್ಯದಲ್ಲಿ ವರ್ಣಿಸಿದೆ. ಇಲ್ಲಿ ಕುಹಕ ಶಬ್ದದ ಅರ್ಥ ಮನೋವಿಕಾರವನ್ನುಂಟುಮಾಡುವ ಸ್ತ್ರೀಯರ ವಿಲಾಸಗಳೆಂದು. ಇವುಗಳನ್ನು ಭಗವಾನ್ ಶ್ರೀಕೃಷ್ಣನು ನಿರಾಸಮ್ಡಿದ್ದಾನೆ - ಅರ್ಥಾತ್ ವಿಫಲಗೊಳಿಸಿದ್ದಾನೆ. ಸಾಮೂಹಿಕವಗಿ ಸ್ತ್ರೀಯರ ಹಾವ-ಭಾವಗಳು, ಮಹಾಭಾರತ ಯುದ್ಧವನ್ನು ಮುಗಿಸಿ
ಎಷ್ಟೋ ತಿಂಗಳು ಕಳೆದಬಳಿಕ ದ್ವಾರಕೆಯನ್ನು ತಲುಪಿದ ಶ್ರೀಕೃಷ್ಣನನ್ನೂ ಸ್ವಲ್ಪವೂ ವಿಚಲಿತಗೊಳಿಸಲಿಲ್ಲ. ಅದಕ್ಕೆಂದೇ ಆತ 'ಅನಾದಿಬ್ರಹ್ಮಚಾರಿ' ಎಂದು ಖ್ಯಾತನಾಗಿದ್ದಾನೆ.
ಯಸ್ಯೇಂದ್ರಿಯಂ ಪ್ರಮಥಿತುಂ ಕುಹಕೈರ್ನ ಶೇಕುಃ (೧-೧೦-೭೩)
        ಎನ್ನುವ ಭಾಗವತದ ಸೂಕ್ತಿಯಿಂದ ಈ ವಿಷಯವು ಸ್ಪಷ್ಟವಾಗುತ್ತದೆ.
        ತಿಳಿಗೇಡಿಗಳು ಮಾತ್ರ ಶ್ರೀಕೃಷ್ಣನನ್ನು 'ಸ್ತ್ರೈಣ'=ಸ್ತ್ರೀಲೋಲುಪನೆಂದು ಭಾವಿಸಿದರು. ಎಂಬುದಾಗಿ ಗೋಪಿಯರ ಜೊತೆಗೆ ರಾಸಕ್ರೀಡೆ ಆಡಿದ ಶ್ರೀಕೃಷ್ಣನನ್ನೇ 'ತಂ ಮೇನಿರೇ ಖಲಾ ಮೂಢಾಸ್ತ್ರೈಣಂ ಚಾನುವ್ರತಂ ಹರೇಃ' ಎಂಬ ವಚನದಿಂದ ಕಾಮಾದಿ ದೂರನೆಂದು ಚಿತ್ರಿಸಿದೆ. ಶ್ರೀಕೃಷ್ಣನು ಕಾಮಾದಿದೋಷ ಕಲಂಕಿತನಾಗಿದ್ದರೆ ಪರಮವಿರಕ್ತರಾದ ಶುಕಮುನಿಗಳು ಆತನ ಚರಿತ್ರೆಯನ್ನು ಕೇಳಲು ಹಾಗೂ ಹೇಳಲು ಹೇಗೆ ಪ್ರವೃತ್ತರಾದಾರು?
ಗಾಯತ್ರಿ ಪ್ರತಿಪಾದ್ಯ-ಶ್ರೀಕೃಷ್ಣನು
        ಗಾಯತ್ರಿಮಂತ್ರದಲ್ಲಿ ಭರ್ಗ ಶಬ್ದವು ಅಡಕವಾಗಿದೆ. ಇದರರ್ಥ ಪಾಲನೆ-ಪೋಷಣೆ ಮಾಡುವವನು ಹಾಗೂ ಗಮನ ಮಾಡುವವನು - ಭಕ್ತರ ಪೋಷಣೆಗಾಗಿ ಭಕ್ತರಿದ್ದಲ್ಲಿಗೆ ಧಾವಿಸುವವನು ಎಂದು ತಾತ್ಪರ್ಯ. ಶ್ರೀಕೃಷ್ಣನು ಉತ್ತರಾಗರ್ಭಸ್ಥನಾದ ಶಿಶುವಾದ ಪರೀಕ್ಷಿತನನ್ನು ಅಶ್ವತ್ಥಾಮಾಚಾರ್ಯರ ಅಮೋಘ ಬ್ರಹ್ಮಶಿರೋಸ್ತ್ರದಿಂದ ಪಾಲಿಸಲು ಉತ್ತರೆಯ ಗರ್ಭಕ್ಕೆ ಧಾವಿಸಿ ಬಂದನು ಮತ್ತು ತನ್ನ ಗದೆಯನ್ನು ಬೀಸುತ್ತಾ ಅತ್ರೆತೇಜಸ್ಸನ್ನು ಶಾಂತಗೊಳಿಸಿ ಪರೀಕ್ಷತನನ್ನು ಹತ್ತು ತಿಂಗಳ ತನಕ ಸಂರಕ್ಷಿಸಿದನೆಂದು ೧-೧೧-೧೦ ನೇ ಶ್ಲೋಕವು ಬಣ್ಣಿಸಿದೆ. ಈ ಘಟನೆಯಿಂದ ಭರ್ಗ ಶಬ್ದವಾಚ್ಯನು ಶ್ರೀಕೃಷ್ಣನೆಂದು ಸಿದ್ಧವಾಯಿತು.
        ಯಾರು ಗರ್ಭದಲ್ಲಿರುವಾಗ ಸಂರಕ್ಷಿಸುವನೋ ಆತನೇ ಎಲ್ಲಾ ಜಗತ್ತಿನ ರಕ್ಷಕನೆಂದು ತಿಳಿಯಬೇಕು - 'ಸ ರಕ್ಷಿತಾ ರಕ್ಷತಿ ಯೋ ಹಿ ಗರ್ಭೇ' ಶ್ರೀಕೃಷ್ಣನೇ ಗರ್ಭಸ್ಥಶಿಶುವನ್ನು ಸಂರಕ್ಷಿಸುವ ಮೂಲಕ ತಾನೇ ಜಗದ್ರಕ್ಷಕನಾದ ಭರ್ಗ ಎಂದು ತಿಳಿಸಿದ್ದಾನೆ.
ಗಾಯತ್ರಿ ಪ್ರತಿಪಾದ್ಯ - ಬುದ್ಧಿಪ್ರೇರಕ ಶ್ರೀಹರಿ
        ಪದ್ಮಾಸನಸ್ಥನಾದ ಬ್ರಹ್ಮನು ಜಗತ್ತನ್ನು ಸೃಷ್ಟಿಮಾಡಬೇಕೆಂದು ಬಯಸಿದರೂ ಅದಕ್ಕೆ ಉಪಯುಕ್ತವಾದ ದೃಷ್ಟಿಯನ್ನು ಪಡೆಯಲು ವಿಫಲನಾದನು. ತನ್ನ ಭಗವದಧೀನತೆಯನ್ನು ತೋರಿಸುವ ಸಲುವಾಗಿ ಇಲ್ಲಿಬ್ರಹ್ಮನು ಅಜ್ಞಾನ ಪ್ರದರ್ಶನ ಮಾಡಿದನು. ಬಳಿಕ ಪರಮಾತ್ಮನಿಂದ ತಪ ತಪವೆಂದು ಪ್ರಚೋದಿತವಾದ ಬುದ್ಧಿಯಿಂದ ತಪೋಗೈದು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡನು. ಆತನ ಅನುಗ್ರಹದಿಂದ ಸೃಷ್ಟಿಕಾರ್ಯದಲ್ಲಿ ಯಶಸ್ವಿಯಾದನು. ಜೀವೋತ್ತಮನಾದ ಚತುರ್ಮುಖನಿಗೆ ಕರ್ತವ್ಯಬುದ್ಧಿಯನ್ನು ಶ್ರೀಹರಿಯು ಪ್ರೇರಿಸಿದನೆಂದು ೨-೯-೬ ನೇ ಶ್ಲೋಕದಲ್ಲಿ ಉಲ್ಲೇಖಿಸಿದ ಭಾಗವತವು ಅವನಿಂದ ನಿಕೃಷ್ಟರಾದ ಎಲ್ಲಾ ಜೀವರಿಗೂ ಶ್ರೀಹರಿಯೇ ಬುದ್ಧಿಪ್ರೇರಕನಾಗಿ ಗಾಯತ್ರಿ ಪ್ರತಿಪಾದ್ಯನೆಂದು ಸೂಚ್ಯವಾಗಿ ತಿಳಿಸಿದೆ. ಈ ದೃಷ್ಟಿಯಲ್ಲಿಯೇ ಭಾಗವತವನ್ನು 'ಗಾಯತ್ರೀಭಾಷ್ಯರೂಪೋಸೌ' ಎಂದು ಬಣ್ಣಿಸಲಾಗಿದೆ.
ಭಗವಂತನ ಕರ್ತೃತ್ವ-ಭ್ರಾಂತಿ ಕಲ್ಪಿತವಲ್ಲ
        'ನ ಚಾಸ್ಯ ಜನ್ಮಕರ್ಮಾಣಿ ಪರಸ್ಯ ನ ವಿಧೀಯತೇ' - ಭಗವಂತನಿಗೆ ಜನ್ಮಕರ್ಮಗಳಿಲ್ಲವೆಂಬುದಾಗಿ ಜ್ಞಾನಿಗಳಿಂದ ನ ವಿಧೀಯತೇ=ಶಾಸ್ತ್ರ ವಿರುದ್ಧವಾಗಿ ಚಿಂತಿಸಲ್ಪಡುವುದಿಲ್ಲವೆನ್ನುತ್ತದೆ ಭಾಗವತ. ಹಾಗೆ ಉಪಾಸನೆ ಮಾಡಿದರೆ ಶಸ್ತ್ರವಿರುದ್ಧ ಉಪಾಸನೆ ಎನಿಸುತ್ತದೆ-
ನಾವಿದ್ಯಮಾನಂ ಬ್ರುವತೇ ವೇದಾ ಧ್ಯಾತುರ್ನ ವೈದಿಕಾಃ |
ಅವಿದ್ಯಮಾನಂ ಧ್ಯಾಯಂತೋ ಯಾಂತಿ ಸರ್ವೇಧರಂ ತಮಃ ||
        ಎಂಬ ಶಾಸ್ತ್ರವಚನವು, ಮಿಥ್ಯಾಭೂತವಾದ ಕರ್ತೃತ್ವಾದಿಗಳನ್ನು ಉಪಾಸನೆಗಾಗಿ ಎಲ್ಲಿಯೂ ಶಾಸ್ತ್ರ ಹೇಳುವುದಿಲ್ಲವೆಂದೂ, ಅಂಥ ಉಪಾಸನೆಯಿಂದ ಅನರ್ಥವೇ ಹೊರತು ಫಲವಿಲ್ಲವೆಂದೂ ಘೋಷಿಸಿದೆ. ಆದುದರಿಂದ ಶಾಸ್ತ್ರದಲ್ಲಿ ಭಗವಂತನನ್ನು 'ನಿಷ್ಕ್ರಿಯಂ' ಕ್ರಿಯಾಶೂನ್ಯನೆಂದು ಹೇಳಿದರೂ ನಮ್ಮಂತೆಯೇ ಲೇಪಕಾರಕ ಪ್ರಾಕೃತ ಕರ್ತೃತ್ವವಿಲ್ಲವೆಂಬ ಅಭಿಪ್ರಾಯವನ್ನು ಆ ನಿಷೇಧದ ಮಾತಿಗೆ ಸ್ವೀಕರಿಸಬೇಕು.
        'ಕರ್ತೃತ್ವಂ ಪ್ರತಿಷೇಧಾರ್ಥಂ ಮಾಯಯಾ ಆರೋಪಿತಂ ಹಿ ತತ್' ಎನುವ ಭಾಗವತ ವಚನವು 'ನೇಹ ನಾನಾಸ್ತಿ ಕಿಂಚನ' ಎನ್ನುವಲ್ಲಿ ಕರ್ತೃತ್ವಾದಿಗಳನ್ನು, ಅಜ್ಞಾನದಿಂದ ಕಲ್ಪ್ತವಾದುದರಿಂದ ನಿಷೇಧಿಸುವ ಸಲುವಾಗಿ 'ತತ್ತೇಜೋ ಅಸೃಜತ' ಮುಂತಾದ ಕಡೆಗಳಲ್ಲಿ ಮಿಥ್ಯಾಭೂತವಾದ ಕರ್ತೃತ್ವವನ್ನು ಉಲ್ಲೇಖಿಸಲಾಗಿದೆ ಎಂಬುದಾಗಿ ಪ್ರತಿಪಾದಿಸಿದೆ ತಾನೆ? ಎಂಬುದಾಗಿ ಇಲ್ಲಿ ಸಂದೇಹಕ್ಕೊಳಪಡಬಾರದು. ಈ ಭಾಗವತ ಮಾತಿಗೆ ಅರ್ಥವೇ ಬೇರೆಯಾಗಿದೆ.
        ಇಲ್ಲಿ ಮಾಯಾ ಶಬ್ದದ ಅರ್ಥ ಭಗವಂತನ ಇಚ್ಛೆ. ಆರೋಪಿತ ಶಬ್ದದ ಅರ್ಥ ಏರಿಸಲ್ಪಟ್ಟಿದ್ದು. ಪ್ರತಿಷೇಧ ಶಬ್ದದ ಅರ್ಥ ಸಂಸಾರದ ಪರಿಹಾರ. ಬಗವಂತನು ಸಜ್ಜೀವರ ಸಂಸಾರವನ್ನು ಪರಿಹರಿಸುವ ಸಲುವಗಿಯೇ ಭಕ್ತರಿಗೆ ಶ್ರವಣಾದಿಗಳಿಂದ ತಾರಕವೆನಿಸಿದ ಜಗತ್ ಸೃಷ್ಟ್ಯಾದಿ ಕರ್ತೃತ್ವವನ್ನು ತನ್ನ ಮೇಲೆ ಅನುಕಂಪದಿಂದಲೇ ಹೊರಿಸಿಕೊಂಡಿದ್ದಾನೆ ಎಂಬುದು ಈ ವಚನದ ತಾತ್ಪರ್ಯ ಭಗವಂತನ ಜನ್ಮ-ಕರ್ಮಗಳು ಶ್ರವಣಾದಿಗಳಿಂದ ಜ್ಞಾತವಾದಾಗ ಅವುಗಳು ಜನ್ಮ-ಮರಣರೂಪಸಂಸಾರ ಚಕ್ರದಿಂದ ನಮ್ಮನ್ನು ವಿಮುಕ್ತಗೊಳಿಸುತ್ತದೆ. ಸಂಸಾರ ನಿರಾಸಕಗಳಾಗುತ್ತವೆ ಎಂಬುದಾಗಿ ಭಗವಂತನು 'ಜನ್ಮಕರ್ಮಚ ಮೇ ದಿವ್ಯಂ ಯೋ ಮಾಂ ವೇತ್ತಿತತ್ತ್ವತಃ | ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋರ್ಜುನ' ಎಂಬ ಮಾತಿನಲ್ಲಿ ಸ್ಪಷ್ಟಪಡಿಸಿದ್ದಾನೆ. ಆದುದರಿಂದ 'ಪ್ರತಿಷೇಧಾಯ ಬಂದಸ್ಯ ಜೀವಸ್ಯ ಪರಮೇಶಿತುಃ' ಎನ್ನುವ ವಚನದಿಂದ ವರ್ಣಿತವಾದ ಅರ್ಥವು ಗೀತಾಸಂವಾದದಿಂದ ಸಂಪನ್ನವಾಗಿದ್ದು ಸಮುಚಿತವೆನಿಸುತ್ತದೆ. ಇಂಥ ಮೂಲರೂಪ ಅವತಾರರೂಪಗಳ ವಿವಿಧ ವಿಚಿತ್ರ ಲೀಲಾಕತೃತ್ವವನ್ನು ಶ್ರವಣ-ಸ್ಮರಣಕೀರ್ತನಗಳಿಂದ ಸಜ್ಜನರು ಮುಕ್ತಿಪಡೆಯಲೆಂದೇ ಭಾಗವತದಲ್ಲಿ ಭಗವಾನ್ ವ್ಯಾಸರು ಬಣ್ಣಿಸಿದ್ದಾರೆ.
        ಇಂಥ ಭಾಗವತ ರೂಪ ಫಲವನ್ನು ನಮಗಾಗಿ ವೇದ ಕಲ್ಪ ವೃಕ್ಷದಿಂದ ಉದುರಿಸಿದ್ದಾರೆ. ಅದನ್ನು ಭಕ್ತರು ಸವಿದರೆ 'ಅಹೋ ಮೇ ಮಹತೀ ತೃಪ್ತಿಃ ಪಶ್ಯತೋ ಭವೇತ್' ಎನ್ನುವ ಮಾತಿನಲ್ಲಿ ಅವರು ಅಂಥವರನ್ನು ನೋಡಿ ತನಗೆ ಬಹಳ ಪ್ರೀತಿಯಾಗುತ್ತದೆ ಎಂಬುದನ್ನು ಉದ್ಗರಿಸಿದ್ದಾರೆ.
        ವ್ಯಾಸರ ಉದ್ಗಾರಕ್ಕೆ ತಕ್ಕಂತೆ ನಾವೆಲ್ಲರೂ ನಡೆದುಕೊಂಡು ಕೃತಾರ್ಥರಾಗೋಣ.

೧-೫-೨೦೦೪
                                                                                                                                                            
ಶ್ರೀ ವಿದ್ಯೇಶತೀರ್ಥ ಶ್ರೀಪಾದರು
ಶ್ರೀ ಭಂಡಾರಕೇರಿ ಮಠ
ಉಡುಪಿ


</