ಸಾಧನಾಸಂದೇಶ
''ಇದು ಉಪನಯನ ಕಾರ್ಯಕ್ರಮದಲ್ಲೂ ಅದೆಷ್ಟೋ ವಿಕೃತದೃಶ್ಯಗಳನ್ನು ನಾವು ಕಾಣುತ್ತಿದ್ದೇವೆ. ಅಲ್ಲಿ ಗಾಯತ್ರಿಯ ವೈಭವೀಕರಣದ ಬದಲು ವಟುವಿನ ವಿಕೃತ ವೈಭವೀಕರಣದ ದೃಶ್ಯ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ. ವಟುವಿಗೆ ಉಪನಯನದಲ್ಲಿ ಪ್ಯಾಂಟ್ ಶರ್ಟ್ ಪೀಸುಗಳುನ್ನು ಕೊಟ್ಟು ಅವನ ಭೌತಿಕ ದೇಹ ಹಾಗೂ ಅವನ ಹೃದಯವನ್ನು ಮುಚ್ಚುವ ಆಹ್ವಾನಿತರನ್ನು ನಾವು ಕಾಣುತ್ತಿದ್ದೇವೆ, ಹೊರತು ಅವನ ಆತ್ಮನಿಗೆ ರಕ್ಷಾಕವಚವೆನಿಸುವ ವೇದವಸ್ತ್ರಗಳನ್ನು ಹೊದಿಸಿ ಅವನ ಹೃದಯವನ್ನು ತೆರೆಯುವ ಪುರೋಹಿತರಾಗಲೀ ಶಿಷ್ಟರಾಗಲೀ ತುಂಬ ವಿರಳ''

                                        ಭಗವನ್ಮನಸ್ಕತ್ವಾದಿಗಳ ಸಂದೇಶ
                                ತಾರಕವಾದ ಅಹಂಕಾರ
                                ಜ್ಞಾನಿಗಳಿಂದಲೂ ಪ್ರತಿಮಾಪೂಜೆ
                                ಮಧ್ವಚರಿತೆಯ ಚಿಂತನೆಯ ಫಲ
                                ಗೀತಾಭಾಷ್ಯದ ಸಮರ್ಪಣೆಯ ಔಚಿತ್ಯ
                                ಪರಿಮಳವಿಲ್ಲದ ಮಂತ್ರಪುಷ್ಪದ ಅರ್ಪಣೆ ಸಲ್ಲ
                                ದೇವರ ವಿಸ್ಮರಣೆಯಿಂದ ಸಂಸಾರಬಂಧನ - ದೇವರ ತಾದಾತ್ಮ್ಯಭ್ರಾಂತಿಯಿಂದ ಅಂಧಂತಮಸ್ಸು
                                ಗಾಯತ್ರಿಮಂತ್ರಪ್ರತಿಪಾದ್ಯ ನಾರಾಯಣನೇಕರ್ಮಾಚರಣೆಯ ಮತ್ತು ಫಲಭೋಗದ ಶುದ್ಧೀಕರಣ ಪ್ರಕ್ರಿಯೆ
                                ಪೂರ್ಣಪ್ರಜ್ಞರ ಚಿಂತನೆಯೊಂದಿಗೆ ಈಶನ ಸ್ಮರಣೆಗೆ ಕರೆ
                                ಬ್ರಾಹ್ಮಣನ ಕರ್ತವ್ಯ

ಭಗವನ್ಮನಸ್ಕತ್ವಾದಿಗಳ ಸಂದೇಶ

ಮನ್ಮನಾ ಭವ ಮ್ದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾಮೈವೈಷ್ಯಸಿ ಯುಕ್ತ್ಯೈವಮಾತ್ಮಾನಂ ಮತ್ಪರಾಯಣಃ ||
        - ಎಂಬುದಾಗಿ ಗೀತಾಚಾರ್ಯನು (೯-೩೪) ತನ್ನನ್ನು ಪಡೆಯಲು ಅಳವಡಿಸಿ ಕೊಳ್ಳಬೇಕಾದ ಸಾಧನೆಗಳನ್ನು ಈ ಶ್ಲೋಕದ ಪೂರ್ವಾರ್ಧದಲ್ಲಿ ತಿಳಿಸಿರುವನು.
ಸರ್ವಮೂಲದ ಸೌರಭ
        'ಮನ್ಮನಾ ಭವ ' - ನನ್ನಲೇ ಮನಸನ್ನು ಇಡು. ಭಗವಂತನಲ್ಲಿ ಭಕ್ತಿಮಾಡುವ ಮೂಲಕ ಹೇಗೋ ಹಾಗೆಯೇ ಅವನಲ್ಲಿ ದ್ವೇಷ ಎಸಗುವ ಮೂಲಕವೂ ಅವನಲ್ಲಿ ಮನಸ್ಸನ್ನು ಇಡಲಾಗುವುದು. ಆದರೆ ಭಗವಂತನು ಭಕ್ತಿ ಮಾಡುವ ಮೂಲಕ ತನ್ನಲ್ಲಿ ಮನಸ್ಸನ್ನು ನೆಲೆಗೊಳಿಸುವುದನ್ನು ಅಪೇಕ್ಷಿಸುವನೇ ಹೊರತು ದ್ವೇಷ ಮಾಡುವ ಮೂಲಕ ಅಲ್ಲ. ಇದನ್ನು ಸ್ಪಷ್ಟಪಡಿಸುವುದಕ್ಕಾಗಿಯೇ 'ಮನ್ಮನಾ ಭವ'  - ತನ್ನಲ್ಲಿ ಮನಸ್ಸನ್ನು ನೆಲೆಗೊಳಿಸಲು ಸಂದೇಶಿಸಿದ ಗೀತಾಚಾರ್ಯನು 'ಮದ್ಭಕ್ತೋ (ಭವ) ಎಂದು ಸಂದೇಶ ನೀಡಿ ತನ್ನ ಭಕ್ತನಾಗಿ, ಭಕ್ತಿಯ ಮೂಲಕವೇ ತನ್ನಲ್ಲಿ ಮನಸ್ಸನ್ನು ನೆಲೆಗೊಳಿಸಬೇಕೆಂದು ಸಂದೇಶ ನೀಡಿರುವನು.
        ಭಕ್ತಿಯ ಮೂಲಕ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಬೇಕೆಂಬುದರಲ್ಲಿ ಶಾಸ್ತ್ರಕ್ಕೆ ತಾತ್ಪರ್ಯವೇ ಹೊರತು ದ್ವೇಷದ ಮೂಲಕವಾದರೂ ನೆಲೆಗೊಳಿಸಬಹುದೆಂಬುದರಲ್ಲಿ ಅಲ್ಲಿ. ಯಾಕೆಂದರೆ ಭಗವಂತನಲ್ಲಿ ಭಕ್ತಿ ಉಂಟಾಗುವಂತೆ ಅವನ ಮಹಿಮೆಗಳನ್ನೂ ಅವನ ಮೂಲಕ ಆಗುವ ಉಪಕಾರಗಳನ್ನೂ ಶಾಸ್ತ್ರ ಸಾರುತ್ತಿದೆಯೇ ಹೊರತು ಅವನಲ್ಲಿ ದ್ವೇಷ ಉಂಟಾಗುವುದಕ್ಕೆ ಪ್ರಯೋಜಕವಾಗಿ ಅವನಲ್ಲಿ ದೋಷಗಳನ್ನಾಗಲೀ  ಅಪಕಾರಾದಿಗಳನ್ನಾಗಲೀ, ಎಲ್ಲೂ ಎಂದೂ ಹೇಳುತ್ತಿಲ್ಲ ತಾನೇ? ಇದನ್ನೇ ಅನುವ್ಯಾಖ್ಯಾನದಲ್ಲಿ 'ಯದಿ ದ್ವೇಷೇಣ ಮುಕ್ತಿಃ ಸ್ಯಾತ್ ವಕ್ತವ್ಯೋ ದೋಷಸಂಚಯಃ....' ಎಂದು ಆಪಾದಿಸಲಾಗಿದೆ.
        ನಾನೇ ಬ್ರಹ್ಮ' ಎಂದು ಐಕ್ಯಾನುಸಂಧಾನವೇ ಭಕ್ತಿ ಎಂದು ಹೇಳುವವರೂ ಇರುವರು. ಆದುದರಿಂದ 'ಮದ್ಭಕ್ತೋ ಭವ' ಎಂದು ಸಂದೇಶ ನೀಡಿದ ಗೀತಾಚಾರ್ಯ 'ಮದ್ಯಾಜೀ (ಭವ)' ನನ್ನನ್ನು ಪೂಜಿಸುವವನು (ಆಗ) ಎಂದು ಮುಂದೆ ಸಂದೇಶ ನೀಡುವ ಮೂಲಕ ತಾನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದ ಭಕ್ತಿ ಮಾಹಾತ್ಮ್ಯ ಜ್ಞಾನ ಪೂರ್ವಕವಾದ ಸುದೃಢಸ್ನೇಹವೇ ಹೊರತು ಐಕ್ಯಾನುಸಂಧಾನ ಅಲ್ಲ ಎಂದು ಸ್ಪಷ್ಟಪಡಿಸಿರುವನು. ಭಗವಂತನನ್ನು ಪೂಜಿಸುವವನಾಗಬೇಕೆಂದರೆ ಐಕ್ಯಾನುಸಂಧಾನರೂಪವಾದ ಭಕ್ತಿ ಉಪಯುಕ್ತವೆನಿಸುವುದಿಲ್ಲ ತಾನೇ?
        ಭಾಗವತದಲ್ಲಿ ಭಗವಂತನ ಎರಡು ಬಗೆಯ ಪೂಜೆಗಳ ಪ್ರಸ್ತಾವ ಬಂದಿದೆ.
        '......ವಿವಿಕ್ತದೃಷ್ಟಿಸ್ತದುತಾರ್ಹಣಂ ಮೇ ' - ಎಂಬುದಾಗಿ ಋಷಭದೇವನು ತನ್ನ ಮಕ್ಕಳಿಗೆ ಉಪದೇಶಿಸಿರುವ (ಭಾಗ. ೫-೫-೨೬) ಒಂದು ಬಗೆಯ ಪೂಜಾಪದ್ಧತಿ. ಇದರ ರಹಸ್ಯವನ್ನು ಶ್ರೀಮದಾಚಾರ್ಯರು 'ಪಾದ್ಮ' ದ ಮೂಲಕ ಸ್ಪಷ್ಟಪಡಿಸಿರುವರು -
ಉಪಪಾದಯೇತ್  ಪರಾತ್ಮಾನಂ ಜೀವೇಭ್ಯೋ ಯಃ ಪದೇಪದೇ ||
ಭೇದೇನೈವ ನ ವೈ ತಸ್ಮಾತ್ ಪ್ರಿಯೋ ವಿಷ್ಣೋಸ್ತು ಕಶ್ಚನ ||
        ಹೆಚ್ಚೆಹೆಚ್ಚೆಗೆ ಪರಮಾತ್ಮನನ್ನು ಜೀವಾತ್ಮರಿಗಿಂತ ಭಿನ್ನನಾಗಿರುವವನೆಂದು ಉಪಪಾದಿಸುವವನು ಭಗವಂತನಿಗೆ ಅತ್ಯಂತ ಪ್ರಿಯ.
        ಆದುದರಿಂದ ಭಗವಂತನು ಎಲ್ಲ ಜೀವರಿಗಿಂತ ಭಿನ್ನ ಎಂದು ತಿಳಿದುಕೊಳ್ಳುವುದೇ ಅವನ ಪ್ರೀತಿಗೆ ಪ್ರಯೋಜಕವಾಗಿದ್ದು ಅವನ ಪೂಜೆ ಎನಿಸುವುದು.
        'ಕ್ಷೇತ್ರಜ್ಞಂ ಸರ್ವಭೂತೇಷು ಸಮತ್ವೇನ ಯಜೇತ ಮಾಮ್' - ಎಂದು ಉದ್ಧವಗೀತೆಯಲ್ಲಿ (ಭಾಗ. ೧೧-೧೧-೪೪) ಶ್ರೀಕೃಷ್ಣ ಸಂದೇಶಿಸಿರುವಂತೆ ಎಲ್ಲ ಭೂತಗಳಲ್ಲಿ ಭಗವಂತನು ಕ್ಷೇತ್ರಜ್ಞನಾಮಕನಾಗಿ ಸಮನಾಗಿ ಇರುವನು ಎಂದು ತಿಳಿಯುವುದೂ ಒಂದು ಪೂಜೆ.
        ಹೀಗೆ ಪ್ರತ್ಯೇಕತೆಯು ಸರ್ಶನರೂಪದ ಪೂಜೆಯನ್ನಾಗಲೀ, ಸಮತ್ವದರ್ಶನ ರೂಪದ ಪೂಜೆಯನ್ನಾಗಲೀ ನಡೆಸುವಾಗ 'ಮಾಂ ನಮಸ್ಕುರು' - ನಮಸ್ಕಾರವನ್ನು ನಡೆಸಲು ಮರ್‍ಎಯಬೇಡ ಎಂದು ಸಂದೇಶಿಸಲಾಗಿದೆ. ಮಾನಸಿಕ ಪ್ರವಣತೆಯೇ ನಮಸ್ಕಾರ. ಇದೇ ಜಿಜ್ಞಾಸೆ. ಆದುದರಿಂದ ಜಿಜ್ಞಾಸಾಪೂರ್ವಕವಾಗಿ ತನ್ನನ್ನು ಪೂಜಿಸಲು ಸಂದೇಶಿಸಿದಂತಾಗುವುದು. ಹೀಗೆ ಗೀತಾಚಾರ್ಯನು 'ಮನ್ಮನಾ ಭವ...' ಇತ್ಯಾದಿ ಮಾತಿನಲ್ಲಿ ಭಗವನ್ಮನಸ್ಕತ್ವವೇ ಮುಂತಾದ ತನ್ನನ್ನು ಹೊಂದಲು ಬೇಕಾದ ಸಾಧನೆಗಳನ್ನು ತಿಳಿಸುವಾಗ, ಅವುಗಳ ಸ್ವರೂಪದ ಮೇಲೆ ಬೆಳಕುಚೆಲ್ಲುವಂತೆ ಕ್ರಮವಾಗಿ ಅವುಗಳನ್ನು ಉಲ್ಲೇಖಿಸಿರುವನೆಂಬುದನ್ನು ವಿಶ್ಲೇಷಿಸಿಕೊಳ್ಳಬಹುದಾಗಿದೆ.
(ರಾಯಚೂರಿನಲ್ಲಿ ನಡೆದ ಅಖಿಲಭಾರತ ಮಾಧ್ವಮಹಾಮಂಡಲದ ೧೮ನೇ ಸಮ್ಮೇಳನದಲ್ಲಿ ಪಾಲ್ಗೊಂಡು.....)