ಎಂದು ಸ್ಕಾಂದವು ತಿಳಿಸಿರುವಂತೆ ದೇಶ ಕಾಲಗಳು, ಭಕ್ತ್ಯಾದಿಗಿಣಗಳು, ಯೋಗ್ಯತೆ ಹಾಗೂ ಕರ್ಮವನ್ನು ಅನುಸರಿಸಿ ಫಲ ನೀಡುವ ಭಗವಂತನೇ ಸಮ ಶಬ್ದದ ಅರ್ಥತಾನೆ?
ಬ್ರಾಹ್ಮಣಶಬ್ದವಾಚ್ಯನಾದ
ಚತುರ್ಮುಖನಲ್ಲಿ ಸಮವೆನಿಸಿದ ಭಗವಂತನ ಅಸ್ತಿತ್ವವನ್ನು ಹೇಳಿದ್ದರಿಂದ ಫಲದಲ್ಲಿ
ಅಸ್ವತಂತ್ರನಾದ ಆತನೂ ಸರ್ವೋತ್ತಮನಲ್ಲವೆಂದು ಸಿದ್ಧವಾಗುವುದರಿಂದ ಹಿರಣ್ಯಗರ್ಭನೇ
ಸರ್ವೋತ್ತಮನೆಂದು ಸಾರವ ಹಿರಣ್ಯಗರ್ಭ ಮತವೂ ನಿರಾಕೃತವಾಯಿತು. ಶಕ್ತಿಯೇ
ಸರ್ವೋತ್ತಮಳೆಂದು ಸಾರುವ ಶಾಕ್ತಮತವೂ ಲಕ್ಷ್ಮಿಯ ಸಹಿತನಾದ ಭಗವಂತನನ್ನು (ಮಯಾ
ಸಹಿತಃ ಸಮಃ) ಸಾರುವ ಸಮಶಬ್ದದಿಂದ ನಿರಾಕೃತವಾಯಿತು. ಹರಿಯನ್ನು ಹೊಗಳುವ ವೇದವಿದ್ಯೆಗೆ
(ಮಾ ಶಬ್ದವಾಚ್ಯವಾದ ಹರಿವಿದ್ಯೆಗೆ) ಅಭಿಮಾನಿನಿಯಾಗಿ 'ಮಾ' ಎನಿಸಿದ ಲಕ್ಷ್ಮಿಯು ಹರಿಯ
ಪಾರಮ್ಯವನ್ನು ಸ್ತುತಿಸುವವಳೆಂದು ಭಾಗವತದ ಶ್ರುತಿಗೀತೆಯಿಂದ ಸ್ಪಷ್ಟವಾಗಿ
ತಿಳಿದುಬರುತ್ತದೆ. ಹೀಗಾಗಿ ಸ್ತುತ್ಯನಾದ ಹರಿಗಿಂತಲೂ ಯಾವಾಗಲೂ ಆತನ ಜೊತೆಗಿದ್ದು
ಸ್ತುತಿ ಪರಾಯಣಳಾದ ಲಕ್ಷ್ಮೀ ಹೇಗೆ ಉತ್ತಮಳಾಗಬಲ್ಲಳು? ಎನ್ನುವ ಧ್ವನಿಯು ಸಮಶಬ್ದದ
ಸ್ವಾರಸ್ಯದಿಂದ ವ್ಯಕ್ತವಾಗುವುದು. ಒಟ್ಟಿನಲ್ಲಿ ಬ್ರಾಹ್ಮಣ, ಗೋ, ಹಸ್ತಿ ಹಾಗೂ
ಸಮಶಬ್ದದ ಬಲದಿಂದ ಸ್ಕಾಂದ, ಸೌರ, ಶಾಕ್ತ, ಪಾಶುಪತ, ಗಾಣಪತ್ಯ ಹಾಗೂ ಹಿರಣ್ಯಗರ್ಭ
ಎನ್ನುವ ಅವೈದಿಕ ಷಣ್ಮತಗಳೂ ಈ ಶ್ಲೋಕದಿಂದ ನಿರಾಕೃತಗಳಾಗಿವೆ ಎನ್ನಬಹುದು.
ಈ ಎಲ್ಲಾ ತಾತ್ಪರ್ಯಗಳನ್ನೊಳಗೊಂಡ
ವ್ಯಾಪಕ ಅರ್ಥವನ್ನೇ 'ನಿರ್ದೋಷಂ ಹಿ ಸಮಂ ಬ್ರಹ್ಮ' ಎನ್ನುವ ಮುಂದಿನ ಭಾಗದಲ್ಲಿ
ವಿವರಿಸಲಾಗಿದೆ. ಷಣ್ಮತಗಳ ನಿರಾಕರಣ ದಿಂದಲೇ ಹರಿಯ ಪಾರತಂತ್ರ್ಯಾದಿದೋಷಗಳು
ನಿರಾಕೃತಗಳಾಗಿ ಆತನು ನಿರ್ದೋಷನೆಂದು ಸಾಬೀತಾಗಬಲ್ಲುದು ತಾನೆ? ಹರಿಯು ಸಾಧನೆ
ಯೋಗ್ಯತಾನುಗುಣವಾಗಿ ಫಲವನ್ನು ನೀಡಿದರೆ ತಾನೆ ವೈಷಮ್ಯ - ನೈಘೃಣ್ಯ ದೋಷಗಳಿಂದ
ದೂರನಾಗಬಲ್ಲನು. ಅಂತೆಯೇ ಸರ್ವಪ್ರಾಣಿಗಳಲ್ಲೂ ಗುಣಪೂರ್ಣನಾಗಿದ್ದರೆ ಮಾತ್ರ
ಅಧಿಷ್ಠಾನದೋಷ ಪ್ರಯುಕ್ತ ದೋಷದಿಂದ ದೂರನಾಗಬಲ್ಲನು. ಗುಣಪೂರ್ಣತ್ವವೇ ನಿರ್ದೋಷತ್ವಕ್ಕೆ
ಪ್ರಯೋಜಕವೆಂದು 'ಪ್ರಚ್ಯುತೋಶೇಷದೋಷೈಃ ಸದಾ ಪೂರ್ತಿತಃ' ಎನ್ನುವಲ್ಲಿ ಶ್ರೀಮಧ್ವರು
ಅಭಿಪ್ರಾಯಪಟ್ಟಿದ್ದಾರಷ್ಟೆ.
( ೧೯೯೧, ಜೂನ್ ತತ್ವವಾದ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)
ಅನಂತದೋಷದುಷ್ಟಂ ಮಾಯಾಮತಮ್