ಸುವರ್ಣಸಂದೇಶ
ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥರ
ಸುವರ್ಣ ಜಯಂತಿ ಉತ್ಸವದ ಹಾಗೂ ಪೀಠಾರೋಹಣ ರಜತೋತ್ಸವದ
ಸವಿನೆನಪಿಗಾಗಿ ಪೋಣಿಸಲ್ಪಟ್ಟ ಅವರ ಸಂದೇಶಗಳ ಸಂಗ್ರಹ

"ಓಂ ಕ್ರತೋ ಸ್ಮರ ಕೃತಂ ಸ್ಮರ"

ಮೂಲ - ಶ್ರೀ ಶ್ರೀ ವಿದ್ಯೇಶತೀರ್ಥರು
ಭಂಡಾರಕೇರಿ ಮಠ, ಬಾರ್ಕೂರು, ಉಡುಪಿ

ಸಂಗ್ರಹ - ಸಂಪಾದನೆ - ಸಗ್ರಿ ರಾಘವೇಂದ್ರ ಉಪಾಧ್ಯಾಯ

ಪರವಿದ್ಯಾಪ್ರಕಾಶನ
'ಶಮ್ಯಾಪ್ರಾಸ' ಮೂಡಸಗ್ರಿ

ಶ್ರೀ ಶ್ರೀ ವಿದ್ಯೇಶತೀರ್ಥರ
ಲೇಖನಿಯ ಸಾಧನೆ

''....ಸತ್ಯತೀರ್ಥ ಇಹ ಭಾಷ್ಯಮಾಲಿಖತ್' ಎಂದು ಮಧ್ವ ವಿಜಯದಲ್ಲಿ ೯-೧೩, ಉಲ್ಲೇಖ ಗೊಂಡಿರುವಂತೆ ಶ್ರೀ ಮಧ್ವಗುರುಗಳ ಸೂತ್ರ ಭಾಷ್ಯವನ್ನು ಲಿಪಿಬದ್ಧಗೊಳಿಸಿದ ಭಾಗ್ಯಶಾಲಿಗಳು ಶ್ರೀಸತ್ಯತೀರ್ಥರು. ಭಂಡಾರಕೇರಿ ಮಠದ ಮೂಲಯತಿಗಳಾಗಿರುವ ಅವರ ಆ ಬಗೆಯ ವಾಙ್ಮಯ ಸೇವೆಯ ಫಲವಾಗಿಯೇ ಅವರ ಪರಂಪರೆಯಲ್ಲಿಯೇ ಬಂದಿರುವ ಶ್ರೀ ಶ್ರೀ ವಿದ್ಯೇಶತೀರ್ಥರಿಂದ ಅನಿತರಸಾಧಾರಣವಾದ ಬರವಣಿಗೆಯ ಸೇವೆಯನ್ನು ಹರಿಗುರುಗಳು ಮಾಡಿಸಿಕೊಳ್ಳಿತ್ತಿರುವರೋ.! ''


ಪರಿಶಿಷ್ಟ - ೧
ಶ್ರೀ ಶ್ರೀ ವಿದ್ಯೇಶತೀರ್ಥರ ಕೃತಿಗಳ ಸಮಾಲೋಚನೆ

        ಶ್ರೀ ವೇದವ್ಯಾಸರನ್ನು ಪಾಠಪ್ರವಚನಗಳ ಮುಲಕ, ವಿದ್ವಾಂಸರನ್ನು ಸಮ್ಮಾನಿಸುವ ಮೂಲಕ ಹೇಗೋ ಹಾಗೆ ಶ್ರೀ ವೇದವ್ಯಾಸರ ಕೃತಿಗಳ ಬಗ್ಗೆ ಬೆಳಕುಚೆಲ್ಲುವ ಕೃತಿಗಳನ್ನು ನಿರ್ಮಿಸುವ ಮೂಲಕವೂ ಶ್ರೀ ವಿದ್ಯೇಶತೀರ್ಥರು ಪೂಜಿಸಿರುವರು.

ಹೊರಹೊಮ್ಮಿರುವ ಕೃತಿಗಳು
ನಾಳಿಕೇರಪಾಕ
        ಸರ್ವಮೂಲದ ಮಾತುಗಳ, ಸಂದೇಶಗಳ ಆಧಾರದಲ್ಲಿಯೇ ಹೊಸ ಹೊಸ ವಿಚಾರಗಳ ಆವಿಷ್ಕಾರ, ದುರ್ಮತವಿಚಾರಗಳ ನಿರಾಕರಣೆ ಇವನ್ನು ಹೆಚ್ಚಾಗಿ ನಡೆಸಲಾಗುವ ಈ ಕೃತಿಗಳಲ್ಲಿ ನಾಳಿಕೇರಪಾಕದ ಅಳವಡಿಕೆ ಅನಿವಾರ್ಯ.
        ಆದ್ದರಿಂದಲೇ ಈ ಕೃತಿಗೆ ಶಾಸ್ತ್ರದಲ್ಲಿ ಈಗಾಗಲೇ ಪ್ರವೇಶಮಾಡಿ ಪ್ರಾಥಮಿಕ ಶಾಸ್ತ್ರೀಯ ಪರಿಚಯ ಪಡೆದುಕೊಂಡಿರುವ ಜಿಜ್ಞಾಸುಗಳೇ ಮುಖ್ಯ ಅಧಿಕಾರಿಗಳು, ಹೊರತು ಶಾಸ್ತ್ರವನ್ನು ಒಳಹೊಕ್ಕದೆ ಹೊರಗಿನಿಂದಲೇ ಶಾಸ್ತ್ರದ ಸಂದೇಶಗಳನ್ನು - 'ದ್ರಾಕ್ಷಾಪಾಕಕ್ಕೊಳಪಡಿಸಿ ಬಡಿಸಿಕೊಳ್ಳಲು ಬಯಸುವ ಜಿಜ್ಞಾಸುಗಳು ಮುಖ್ಯಾಧಿಕಾರಿಗಳೆನಿಸಲಾರರು.
        ಯಾವ ಕೃತಿಯೂ ಸರ್ವಾಧಿಕಾರಿಕ ಎನಿಸಲಾರದು ತಾನೇ?
ಕೃತಿಗಳ ವೈಶಿಷ್ಟ್ಯಗಳು
ಸೌಹಾರ್ದದ ಸೂಚನೆಗಳು
        ಈ ನಿಟ್ಟಿನಲ್ಲಿ ಶಬ್ದಗಳ ವಾಕ್ಯಗಳ ಪ್ರಯೋಗದಲ್ಲಿಯ ಪರಿಷ್ಕಾರದೊಂದಿಗೆ ಇನ್ನೂ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಬಹುದು -
ಕೃತಿಪರಿಚಯ
        ಹೀಗೆ ಶ್ರೀ ವಿದ್ಯೇಶತೀರ್ಥರ ಸುಮಾರು ಇಪ್ಪತ್ತು ಕೃತಿಗಳ ಬಗ್ಗೆ ಸ್ಥೂಲ ಮಾಹಿತಿಯನ್ನು ಪಡೆದುಕೊಂಡ ಬಳಿಕ ಪ್ರತಿಯೊಂದು ಕೃತಿಯನ್ನೂ ಅದರ ವಿಷಯಾದಿಗಳ ವಿವರದೊಂದಿಗೆ ಪರಿಚಯಿಸಿಕೊಳ್ಳೋಣ. 'ಸ್ಥಾಲೀಪುಲಾಕ' ನ್ಯಾಯವನ್ನನುಸರಿಸಿ ಆಯಾ ಕೃತಿಯಲ್ಲಿ ಪ್ರಸ್ತುತಪಡಿಸಿದ ಒಂದು ವಿಚಾರವನ್ನೂ ತಿಳಿದುಕೊಳ್ಳೋಣ........

ಜಿಜ್ಞಾಸುಗಳಿಗೆ ಸರಿಯಾದ ಗುರಿಯನ್ನು
ಗುರಿತಿಸಿಕೊಟ್ಟು ಮಾರ್ಗದರ್ಶನ ನೀಡಬಲ್ಲ

ಗುರಿಯಿಲ್ಲದ ದಾರಿ
        ೧೯೮೮ ರಲ್ಲಿ ಪ್ರಕಟಗೊಂಡ ಈ ಕೃತಿ ಪ್ರಾಯಃ ಶ್ರೀಪಾದರದ್ದು ಚೊಚ್ಚಲ ಕೃತಿ. ಗುರು ಶ್ರೀ ವಿದ್ಯಾಮಾನ್ಯ ತೀರ್ಥರು ಮನಬಿಚ್ಚಿ ಈ ಕೃತಿಗೆ ನೀಡಿರುವ ಸಂದೇಶದ ಮಾತುಗಳೇ ಇದರ ಮೌಲ್ಯವನ್ನು ಸಾರಬಲ್ಲವು. ''ಗುರಿ ಇಲ್ಲದ ದಾರಿ, ನಾಮವು ಈ ನಾಮದ ಗ್ರಂಥವನ್ನು ಓದಬೇಕು ಎಂದು ಚಿತ್ತಾಕರ್ಷಣ ಮಾಡಿದರೆ ಗ್ರಂಥಸ್ಥ ವಿಷಯ ಗಳು ನ್ಯಾಯಸುಧಾ, ನ್ಯಾಯಾಮೃತ, ಚಂದ್ರಿಕಾ, ಯುಕ್ತಿಮಲ್ಲಿಕಾ ಗ್ರಂಥಗಳ ಸಾರಭೂತವಾಗಿದ್ದು ವಿದ್ವಾಂಸರನ್ನು ಪರಮಾನಂದಭರಿತರನ್ನು ಮಾಡಲು ಸಮರ್ಥವಾಗಿವೆ. ಪ್ರಸಕ್ತ ದೃಷ್ಟಾಂತಗಳಿಗೆ ಸದೃಶ ದೃಷ್ಟಾಂತಗಳು, ಕಥೆಗಳು ಈ ಗ್ರಂಥದಲ್ಲಿ ಇರುವುದು ವಿಶೇಷ ಚಿತ್ತಾಕರ್ಷಕವಾಗಿದೆ''.
        ಮುಖಪುಟದಲ್ಲಿಯೇ 'ಸಪ್ತಾರ್ಚಿಃ' ಎಂದು ಉಲ್ಲೇಖಿಸಿರುವಂತೆ ೧. ತತ್ವವಿಮರ್ಶೆ ಅಗತ್ಯ ೨. ನಿರಂಕುಶ ಕಲ್ಪನೆಯ ಕೂಸು - ಏಕಾತ್ಮವಾದ ೩. ನಿರಾಶ್ರಿತ ಅವಿದ್ಯೆಯಿಂದ ಭಿನ್ನ ಜೀವ-ಜಗತ್ತಿನ ಪ್ರಸವ ಸಾಧ್ಯವೇ? ೪. ಬ್ರಹ್ಮನು ಅಜ್ಞಾನದ ಆರೋಪಕ್ಕೆ ಅಧಿಷ್ಠಾನವೇ? ೫. ಬೆಂಬಲವಿಲ್ಲದ 'ತತ್ವಮಸಿ' ೬. ಬೇಡಿಕೆಯಿಲ್ಲದ ಭಯಾನಕ ಬಿಡುಗಡೆ - ಮೋಕ್ಷ ೭.ಐಕ್ಯೋಪದೇಶವು ಸಂಗತವೇ? - ಎಂಬ ಈ ಏಳು ವಿಚಾರಜ್ಯೋತಿಗಳ ಬೆಳಕಿನಲ್ಲಿ ಅದ್ವೈತಮತ ಪ್ರಸ್ತುತಪಡಿಸುವ ಆಧ್ಯಾತ್ಮಿಕ ದಾರಿ ಗುರಿ ಇಲ್ಲದಿರುವಂತಹದ್ದೆಂಬುದನ್ನು ಸಮರ್ಥಿಸಲಾಗಿದೆ.
        ಶ್ರೀಮದಾಚಾರ್ಯರು ತೋರಿಸಿರುವ ಮೋಕ್ಷವೇ ನಿಜವಾದ ಅಪೇಕ್ಷಣೀಯ ಎಂಬುದನ್ನು ಅಲ್ಲಲ್ಲಿ ಸ್ಪಷ್ಟಪಡಿಸಲಾಗಿದೆ.
        ಭೇದಖಂಡನೆ, ಏಕಾತ್ಮವಾದಿಗಳ ಭ್ರಮೆ ಕಲ್ಪನೆಗಳ ನಿರಾಕರಣೆ, ಸ ಆತ್ಮಾ ತತ್ತ್ವಮಸಿ - ಎಂಬಲ್ಲಿಯ ಪದಚ್ಛೇದ ಮುಂತಾದ ಪ್ರಮುಖ ಶಾಸ್ತ್ರೀಯ ಪ್ರಮೇಯಗಳನ್ನು ಕಥೆಗಳ ಮೂಲಕ ಸಮರ್ಥಿಸಿರುವುದು ಉಲ್ಲೇಖಾರ್ಹ.
        ಈ ಕೃತಿಯ ಉಪಸಂಹಾರದ ಪ್ರಮೇಯ ಹೀಗಿದೆ:

ಶ್ರೀಮದಾನಂದತೀರ್ಥರ ದಾರಿಯೇ ಹೆದ್ದಾರಿ
        '.....ಹೀಗೆ ವಿವಿಧ ನಿಟ್ಟಿನಲ್ಲಿ ವಿಮರ್ಶೆ ಮಾಡಿದಾಗ ಏಕಾತ್ಮವಾದಿಗಳ ಗುರಿ - 'ಮೋಕ್ಷ' ಯಾರಿಗೂ ಮೆಚ್ಚಿಗೆಯಾಗಲಾರದು. ಆದುದರಿಂದ ಅದನ್ನು ಗುರಿಯಾಗಿಟ್ಟುಕೊಂಡು ಹೊರಟ ಇಂತಹ ಶಾಸ್ತ್ರವು ವಿಮರ್ಶಕರ ದೃಷ್ಟಿಯಲ್ಲಿ 'ಗುರಿಯಿಲ್ಲದ ದಾರಿ' ಎನ್ನುವ ವಿಷಯದಲ್ಲಿ ಎರಡುಮಾತಿಲ್ಲ.
        ಆದುದರಿಂದ ಶ್ರೀಮದಾಚಾರ್ಯರ ಗುರಿಯೇ - ಮೋಕ್ಷವೇ -ಸಕಲ ಜ್ಞಾನಿಗಳಿಂದಲೂ ಬೇಡಿಕೆಯನ್ನು ಪಡೆದ ಗುರಿ. ಅದನ್ನು ಗುರಿಯಾಗಿಟ್ಟುಕೊಂಡು ಹೊರಟ ಅವರ ಸುದರ್ಶನವೇ - ಸಚ್ಛಾಸ್ತ್ರವೇ ತನ್ನ ಜ್ಞಾನಪ್ರಭೆಯಿಂದ ಮುಕ್ತರಿಗೂ ಸ್ವಾಮಿಯಾದ ಹರಿಯನ್ನು ತೋರಿಸಿ, ಅಲ್ಲಿಗೆ ನಮ್ಮನ್ನು ಕೊಂಡೊಯ್ಯಬಲ್ಲದು. ಅವರ ಶಾಸ್ತ್ರವು ಬರೇ ಕವಲುದಾರಿಯಲ್ಲ. ಇಡೀ ಜಗತ್ತಿಗೆ ಅನುಗ್ರಹಿಸಿದ ಶ್ರೀ ರಾಘವೇಂದ್ರಸ್ವಾಮಿಗಳು, ಜಯತೀರ್ಥರು, ವ್ಯಾಸತೀರ್ಥರು, ವಾದಿರಾಜರು, ಪುರಂದರದಾಸರು, ಕನಕದಾಸರು ಮುಂತಾದ ಶ್ರೇಷ್ಠ ಜ್ಞಾನಿಗಳೂ 'ರಾಜಮಾರ್ಗ' ವೆಂದು ಗುರಿತಿಸುವ ಮೂಲಕ ಹಿಡಿದ ಹೆದ್ದಾರಿ - 'ಅರ್ಚಿಮಾರ್ಗ'


ಗಾಯತ್ರಿಯ ವೈಭವವನ್ನು ಸಾರುವ
'ಗಾಯತ್ರೀಹೃದಯ'
        ಎರಡು ಬಾರಿ ಎರಡೆರಡು ಸಾವಿರ ಪ್ರತಿಗಳಂತೆ ಮುದ್ರಣಗೊಂಡಿರುವ ಶ್ರೀಪಾದರ ಈ ಕೃತಿಯ ವೈಶಿಷ್ಟ್ಯ ಜಿಜ್ಞಾಸುಗಳ ವ್ಯಾಪಕ ಬೇಡಿಕೆಯಿಂದಲೇ ಸಿದ್ದವಾಗುವುದು. ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರ ಸಂದೇಶದ '೧೫ ದಿನಗಳಲ್ಲಿ ನೂರು ಪುಟದ ವರೆಗೆ ಗಾಯತ್ರಿಹೃದಯವೆಂಬ ಶ್ರೇಷ್ಠ ಪ್ರಬಂಧವನ್ನು ಚಾತುರ್ಮಾಸ್ಯಕಾಲದಲ್ಲಿ ಬರೆದು ಶ್ರೀಬದರಿ ನಾರಾಯಣದೇವರಿಗೆ ಸಮರ್ಪಿಸುವ ಸಂಕಲ್ಪ ಮಾಡಿದ್ದಾರೆ' ಎಂಬ ಮಾತು ಈ ಕೃತಿಯ ರಚನೆಯ ಅವಧಿಯ ಬಗ್ಗೆಯೂ ಉದ್ದೇಶದ ಬಗ್ಗೆಯೂ ಬೆಳಕು ಚೆಲ್ಲಬಲ್ಲದು.
        ಜಪ ಶಬ್ದದ ಅರ್ಥವೇನು? ಇತ್ಯಾದಿಯಾಗಿ ಹದಿನಾಲ್ಕು ಶೀರ್ಷಿಕೆಗಳಲ್ಲಿ ಗಾಯತ್ರೀ ಮಂತ್ರದ ಸುತ್ತಮುತ್ತದ ಮಾಹಿತಿಗಳನ್ನೂ ಅರ್ಥಗಾಂಭೀರ್ಯವನ್ನೂ ಪ್ರತಿಪಾದಿಸಿ, 'ಗಾಯತ್ರಿಯಲ್ಲಿ ಪ್ರಾರ್ಥಿತವಾದ ತತ್ತ್ವಜ್ಞಾನದ ಸ್ವರೂಪವೇನು?' - ಎಂಬ ಕೊನೆಯ ಶೀರ್ಷಿಕೆಯಲ್ಲಿ 'ಆದುದರಿಂದ ಶ್ರೀಮದಾನಂದತೀರ್ಥರ ಗುಣಪೂರ್ಣ, ಸುಂದರನಾದ ಶ್ರೀಹರಿಯ ಜ್ಞಾನವನ್ನೇ ಪಡೆದು ಕೃತಕೃತ್ಯರಗಬೇಕು' - ಎಂದು ಕರೆನೀಡುವ ಜೊತೆಗೆ ಈ ಕಾಲದಲ್ಲಿ ಉಪನಯನ ಬಗ್ಗೆ ತಾಳಿರುವ ವಿಕೃತರೂಪದ ವಿರುದ್ಧ ಎಚ್ಚರಿಕೆ ನೀಡುತ್ತ ಉಪಸಂಹರಿಸಲಾಗಿದೆ. ಗಾಯತ್ರಿಯ ಸವಿತೃ, ಭರ್ಗ ಇತ್ಯಾದಿ ಶಬ್ದಗಳ ಪ್ರತಿಪಾದ್ಯವ್ಯಕ್ತಿಗಳ ಕುರಿತೂ ಆಯಾ ಶಬ್ದಗಳ ಅರ್ಥಗಾಂಭೀರ್ಯದ ಕುರಿತೂ ಮಾಧ್ವ ತತ್ತ್ವಜ್ಞಾನದ ಬೆಳಕಿನಲ್ಲಿ ಚಿಂತಿಸಲಾಗಿದೆ.
        ಈ ಕೃತಿಯಲ್ಲಿ ಪ್ರಸ್ತುತವಾದ ಒಂದು ಪ್ರಮೇಯ....

ಧಿಯೋ ಯೋ ನಃ ಪ್ರಚೋದಯಾತ್
        ....ಈ ವಚನವು ಗಾಯತ್ರಿಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿದೆ. ಇಲ್ಲಿ ಗಾಯತ್ರೀ ಪ್ರತಿಪಾದ್ಯನಿಗೆ ಬುದ್ಧಿ ಪ್ರೇರಕತ್ವರೂಪವಾದ ಗುಣವು ಹೇಳಲ್ಪಟ್ಟಿದೆ.
        ಈ ಗುಣದಿಂದ 'ಹೃಷೀಕೇಶ' - ಸರ್ವ ಇಂದ್ರಿಯಗಳ ಒಡೆಯನೆನಿಸಿದ ಶ್ರೀಹರಿಯೇ ಇಲ್ಲಿ ಪ್ರತಿಪಾದ್ಯನೆಂದು ತೀರ್ಮಾನಿಸಬಹುದು.
        ಇಲ್ಲಿ 'ಧೀಯಃ' ಎಂದು ಬಹುವಚನ ಪ್ರಯೋಗವಿದೆ. ಸಂಸ್ಕೃತದಲ್ಲಿ ಬಹುವಚನ ಪ್ರಯೋಗವು ಆದ್ಯರ್ಹವನ್ನು, ಮೊದಲಾದ ಎಂಬ ಅರ್ಥವನ್ನು ನೀಡುವುದು. 'ಕಡಾರಾಃ ಕರ್ಮಧಾರಯೇ' ಎಂಬ ಸೂತ್ರದಲ್ಲಿ ಕಡಾರವೇ ಮೊದಲಾದ ಶಬ್ದಗಳು ಎನ್ನುವ ಅರ್ಥದಲ್ಲಿ ಬಹುವಚನವನ್ನು ಪ್ರಯೋಗಿಸಲಾಗಿದೆ. ಆದಿದರಿಂದ ಇಲ್ಲಿ 'ಧಿಯಃ' ಎಂಬ ಬಹುವಚನಪ್ರಯೋಗದಿಂದ ಬುದ್ಧಿ ಮೊದಲಾದ ಇಂದ್ರಿಯಗಳು ಸೂಚಿಸಲ್ಪಟ್ಟಿವೆ ಎಂದು ಇಟ್ಟುಕೊಳ್ಳಬಹುದು.
        ಒಟ್ಟು ಇಂದ್ರಿಯಗಳು ಹನ್ನೆರಡು. ಶ್ರೀಮದಾಚಾರ್ಯರು ಬ್ರಹ್ಮಸೂತ್ರಭಾಷ್ಯದಲ್ಲಿ ಪ್ರಮಾಣದಿಂದ ಹೀಗೆ ಸಮರ್ಥಿಸಿದ್ದಾರೆ-
ಶ್ರೋತ್ರಾದೀನಿ ತು ಪಂಚೈವ ತಥಾ ವಾಗಾದಿ ಪಂಚಕಮ್ |
ಮನೋಬುದ್ಧಿಸಹಾಯಾನಿ ದ್ವಾದಶೈವೇಂದ್ರಿಯಾಣಿ ತು ||
        ಈ ಹನ್ನೆರಡು ಇಂದ್ರಿಯಗಳಲ್ಲಿ ಬುದ್ಧಿಯೂ ಒಂದು.
        ಏವಂ ಚ 'ಧಿಯೋ ಯೋ ನಃ ಪ್ರ್ಚೋದಯಾತ್' ಎಂಬ ವಚನದಿಂದ ನಿಯಾಮಕನೆನಿಸಿ 'ಯ' ಎಂದು ವೇದಖ್ಯಾತನಾದ ಶ್ರೀಹರಿಯು ನಮ್ಮ ಬುದ್ಧಿ ಮೊದಲಾದ ಹನ್ನೆರಡು ಇಂದ್ರಿಯಗಳನ್ನು ಪ್ರೇರಿಸುತ್ತಾನೆ ಎನ್ನುವ ಅರ್ಥವು ಸಿದ್ಧವಾಗುವುದು.

ವೇದಾಭಿಮಾನಿನಿಯ ಆಶಯ
        ಕ್ಷೀರಸಾಗರದ ಮಥನಕಾಲದಲ್ಲಿ ಸಾಗರದಿಂದ ಪಾದುರ್ಭೂತಳಾದ ಸಕಲ ವೇದಗಳಿಗೆ ಅಭಿಮಾನಿನಿಯಾದ ರುಮೆಯು ಇತರ ಎಲ್ಲಾ ದೇವತೆಗಳಲ್ಲಿ ಕೋಪ, ಕಾಮ, ಪಾರತಂತ್ರ್ಯ ಮೊದಲಾದ ದೋಷಗಳನ್ನೂ, ಗುಣಗಳ ನ್ಯೂನತೆಯನ್ನೂ ಕಂಡಳು. ಆದರೆ ಶ್ರೀಹರಿಯು ಅವ್ಯಭಿಚಾರಿ (ಬೇರೆಕಡೆ ಇಲ್ಲದ) ಸದ್ಗುಣಗಳ ನಿಧಿ ಹಾಗೂ ನಿರ್ದೋಷನಾದ ಸುಮಂಗಲ ಪುರುಷೋತ್ತಮನೆಂದು ಗುರುತಿಸಿ ಆತನನ್ನೇ ಪತಿರೂಪದಲ್ಲಿ ವರಿಸಿದಳು. ವೇದ ಹಗೂ ಅದರ ಅಭಿಮಾನಿನಿಯಾದ ಲಕ್ಷ್ಮಿಯ ಅಭಿಪ್ರಾಯ ಒಂದೇ ಆಗಿದೆ.
        ಆದುದರಿಂದ ಸಕಲ ವೇದಗಳೂ ಶ್ರೀಹರಿಯನ್ನೇ ನಿರ್ದೋಷ ಗುಣ ಪೂರ್ಣನಾದುದರಿಂದ ಸರ್ವೋತ್ತಮನೆಂದು ಆಯ್ಕೆಮಾಡಿವೆ ಎನ್ನುವ ಮಾತಿಗೆ, ವೇದಾಭಿಮಾನಿನಿಯಾದ ಲಕ್ಷ್ಮಿಯು ವಿಮರ್ಶಪೂರ್ವಕವಾಗಿ ಮಾಡಿದ ನಾರಾಯಣನ ಆಯ್ಕೆಯೇ ಜ್ವಲಂತ ನಿದರ್ಶನ. ಲಕ್ಷ್ಮಿಯು ಮಾಡಿದ ವಿಮರ್ಶಾಪೂರ್ವಕವಾದ ಶ್ರೀಹರಿಯ ಆಯ್ಕೆಯು ಭಾಗವತದ (೮-೭-೧೮,೨೨) ಭಾಗದಲ್ಲಿ ಉಲ್ಲಿಖಿತವಾಗಿದೆ.
-ಶ್ರೀ ಶ್ರೀ ವಿದ್ಯೇಶತೀರ್ಥರು.


ಭಾಗವತದ 'ಬ್ರಹ್ಮಾತ್ಮೈಕತ್ವ' ಸಂದೇಶದ ಮೇಲೆ
ಬೆಳಕುಚೆಲ್ಲುವ
ಭಾಗವತವು ಬೆಳಗಿದ ವೇದಾಂತದೀಪಾವಳಿ
'ಸರ್ವವೇದಾಂತಸಾರಂ ಯದ್ ಬ್ರಹ್ಮಾತ್ಮೈಕತ್ವಲಕ್ಷಣಮ್ |
        ಎಂಬುದಾಗಿ ಭಾಗವತದಲ್ಲಿ ಸರ್ವವೇದಾಂತಗಳ ಸಾರವಾಗಿ ಹೇಳಲಾದ 'ಬ್ರಹ್ಮಾತ್ಮೈಕತ್ವ' ಸಂದೇಶಕ್ಕೆ, ಮೇಲ್ನೋಟಕ್ಕೆ ಕಾಣಿಸುವ 'ಜೀವಬ್ರಹ್ಮೈಕ್ಯ' ಅರ್ಥ ಯಾಕೆ ಅಲ್ಲ? ಎಂಬುದನ್ನು ಸಮರ್ಥಿಸಿ, ಅದರ ನಿಜವಾದ ಅರ್ಥದ ಬಗ್ಗೆ ಬೆಳಕುಚೆಲ್ಲಹೊರಟ ಕೃತಿ ಇದು. 'ಬ್ರಹ್ಮಾತ್ಮೈಕ್ಯ' ಸಂದೇಶಕ್ಕೆ ವೇದಾಂತ ಎಂದು ಪ್ರಸಿದ್ಧ
ಗಳಾಗಿರುವ ಬ್ರಹ್ಮಸೂತ್ರ ಹಾಗೂ ಉಪನಿಷತ್ತುಗಳಿಗೆ ಮತ್ತು ಭಾಗವತದ ಪೂರ್ವಾಪರವಿಚಾರಗಳಿಗೆ ಹೊಂದಿಕೆಯಾಗುವಂತೆ ೨೦ ಅರ್ಥಗಳನ್ನು ಇಲ್ಲಿ ತೋರಿಸಲಾಗಿದೆ.
        'ವಾಸುದೇವನ ಸರ್ವೋತ್ಕರ್ಷವೇ ಸರ್ವವೇದಾಂತಗಳ ಸಾರ' , 'ಸ್ವತಂತ್ರ ಪರಿ ಪೂರ್ಣಾದ್ವೈತವೇ ಸಕಲವೇದಾಂತಗಳ ತಿರುಳು' - ಹೀಗೆ ಸರ್ವವೇದಾಂತಸಾರ ಎನಿಸಿದ 'ಬ್ರಹ್ಮಾತ್ಮೈಕತ್ವ' ಸಂದೇಶದ ಮೇಲೆ ದೀಪಾವಳಿ - ದೀಪಗಳ ಸಾಲೇ ಹಚ್ಚಲ್ಪಟ್ಟಿದೆ.
        ಹಾಗೆ ಹಚ್ಚಲ್ಪಟ್ಟ ದೀಪಾವಳಿಯ ಒಂದು ದೀಪ:

ಅಂತರ್ಯಾಮಿ ಭಗವದ್ರೂಪಗಳ ಏಕರೂಪತೆ
        'ಬ್ರಹ್ಮಾಣಿ ಜೀವಾಃ ಸರ್ವೇಪಿ.....' ಎಂದು ಪ್ರಮಾಣವಚನವು ವಿವರಿಸಿದಂತೆ ಜೀವರು ತಮ್ಮ ತಮ್ಮ ಯೋಗ್ಯತಾನುಸಾರಿಯಾದ ಪೂರ್ಣತೆಯನ್ನು ಪಡೆಯುವುದರಿಂದ 'ಬ್ರಹ್ಮ' ರೆನಿಸಿರುವರು. ಇವರು ಒಳಗಿದ್ದು ನಿಯಾಮಕಗಳಾದ ಭಗವಂತನ ಅಂತರ್ಯಾಮಿ ರೂಪಗಳೇ 'ಆತ್ಮಾ' ಎಂದು ಪ್ರಸಿದ್ಧವಾಗಿದೆ. ಭಗವಂತನ ಈ ರೂಪಗಳಲ್ಲಿ ಭೇದವಿಲ್ಲ, ತಾರತಮ್ಯವಿಲ್ಲ. ಉತ್ತಮ ಬ್ರಾಹ್ಮಣ, ಗೋವು ಮುಂತಾದವರಲ್ಲಿರುವ ಭಗವದ್ರೂಪಗಳಿಗೂ, ನೀಚರಾದ ಚಾಂಡಾಲ, ನಾಯಿ ಮುಂತಾದವರಲ್ಲಿರುವ ಭಗವದ್ರೂಪಗಳಿಗೂ ಅನ್ಯೋನ್ಯವಾಗಿ ಭೇದವನ್ನಾಗಲೀ ವೈಷಮ್ಯವನ್ನಾಗಲೀ ಜ್ಞಾನಿಗಳು ಕಾಣುವುದಿಲ್ಲ ಎಂದು ಭಗವದ್ಗೀತೆ ಸಾರಿದೆ. ಆದುದರಿಂದ ಅಂತಹ ಜ್ಞಾನಿಗಳು ಭಗವದ್ರೂಪಗಳಲ್ಲಿ ಕಾಣುವ ಏಕತ್ವ ಅರ್ಥಾತ್ ಏಕರೂಪತೆಯೇ - ಬ್ರಹ್ಮಾತ್ಮೈಕತ್ವ ಎಂದು ಅರ್ಥೈಸಿಕೊಳ್ಳಬಹುದು. 'ನ ಸ್ಥಾನತೋಪಿ ಪರಸ್ಯ ಉಭಯಲಿಂಗಂ ಸರ್ವತ್ರಹಿ' ಎಂಬ ವೇದಾಂತಸೂತ್ರದಲ್ಲಿ ಈ ಬಗೆಯ ಬ್ರಹ್ಮಾತ್ಮೈಕತ್ವವನ್ನೇ ಸಿದ್ಧಾಂತಿಸಲಾಗಿದೆ.
ಸರ್ವ ಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ |
ಅವಿಭಕ್ತಂ ವಿಭಕ್ತೇಷು ತದ್ ಜ್ಞಾನಂ ವಿದ್ಧಿ ಸಾತ್ವಿಕಮ್ ||
        ಎಂದು ಭಗವದ್ಗೀತೆಯಲ್ಲಿ ಈ ಬಗೆಯ ಬ್ರಹ್ಮಾತ್ಮೈಕತ್ವದ ಜ್ಞಾನವನ್ನೇ ಸಾತ್ವಿಕಜ್ಞಾನವನ್ನಾಗಿ ಪರಿಗಣಿಸಲಾಗಿದೆ.
ಏಕಮೇವ ಪರೋ ಹ್ಯಾತ್ಮಾ ಭೂತೇಷ್ವಾತ್ಮನ್ಯವಸ್ಥಿತಃ |
ಸರ್ವಭೂತೇಷು ಯಃ ಪಶ್ಯೇತ್ ಭಗವದ್ಭಾವಮಾತ್ಮನಃ ||
        ;ಭೂತಾನಿ ಭಗ್ವತ್ಯಾತ್ಮನ್ಯೇಷ ಭಾಗವತೋತ್ತಮಃ' ಎಂಬ ಭಾಗವತದ ಮಾತಿನ ಈ ಬಗೆಯ ಬ್ರಹ್ಮಾತ್ಮೈಕ್ಯದ ತಿಳಿವಳಿಕೆಯುಳ್ಳವನನ್ನೇ ಭಾಗವತೋತ್ತಮನನ್ನಾಗಿ ಗುರುತಿಸಲಾಗಿದೆ.
        'ಯಾಸಾವಸೌ ಪುರುಷಃ ಸೋಹಮದ್ಮಿ....', 'ಅಹಂ ಮನುರಭವಂ ಸೂರ್ಯಶ್ಚ' ಮುಂತಾದ ಶಸ್ತ್ರದ ಮಾತುಗಳೂ ಜೀವರ ಒಳಗೆ ನಿಯಾಮಕಗಳಾದ ಅಂತರ್ಯಾಮಿ ಭಗವದ್ರೂಪಗಳ ಏಕರೂಪತೆಯನ್ನು ಪ್ರತಿಪಾದಿಸುತ್ತ 'ಬ್ರಹ್ಮಾತ್ಮೈಕತ್ವ' ವನ್ನೇ ಸಾರುತ್ತಿವೆ. ಆದುದರಿಂದ ಸಾಧಕನು ಈ ತೆರನಾದ 'ಬ್ರಹ್ಮಾತ್ಮೈಕತ್ವ' ವನ್ನು ಉಪಾಸನೆ ಮಾಡಬೇಕೆಂಬುದು ವೇದಾಂತದ ಆಂತರ್ಯ.

ಗಾಯತ್ರೀಪ್ರತಿಪಾದ್ಯ ಸರ್ವಶ್ರೇಷ್ಠ
ಎಲ್ಲ ವೇದಗಳ ಸಾರ ಶ್ರೀಗಾಯತ್ರೀಮಂತ್ರ. ಅದೇ ಸರ್ವಶ್ರೇಷ್ಠವಾದ ಮಂತ್ರ. ಆದುದರಿಂದ ಆ ಮಂತ್ರದಿಂದ ಪ್ರತಿಪಾದ್ಯನಾದ ದೇವತೆಯೇ ಸರ್ವೋತ್ತಮದೇವತೆ. ಗಾಯತ್ರೀಮಂತ್ರಕ್ಕೆ ಅಭಿಮಾನಿನಿ ಎನಿಸಿಕೊಂಡ ಭಾರತೀ ದೇವಿಯ ಅವತಾರಭೂತರಾದ ದ್ರೌಪದೀದೇವಿಯರು ಆ ಮಂತ್ರದಿಂದ ಪ್ರತಿಪಾದ್ಯನು ಸೂರ್ಯಮಂಡಲ ಮಧ್ಯವರ್ತಿಯಾದ ನಾರಾಯಣನೇ ಎಂದು ಎತ್ತಿ ತೋರಿಸಿದ್ದಾರೆ. ಅವರು ಕೀಚಕನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೂರ್ಯಮಂಡಲ ಮಧ್ಯವರ್ತಿಯಾದ ಶ್ರೀನಾರಾಯಣನನ್ನೇ ರಕ್ಷಕನೆಂದು ನಂಬಿ ಮೊರೆಯಿಟ್ಟು ಆತನ ಅನ್ಗ್ರಹದಿಂದ ಸುರಕ್ಷಿತರಾದರು. ಇದರಿಂದ ಶ್ರೀಮನ್ನಾರಾಯಣನೇ ರಕ್ಷಕನಾದುದರಿಂದ ಗಾಯತ್ರೀಮಂತ್ರದಲ್ಲಿ ಪ್ರತಿಪಾದ್ಯನದ 'ಭರ್ಗನು' (ಸಕಲ ವ್ಯಾಪಾರಗಳನ್ನು, ಜಗದ್ರಕ್ಷಣೆಯನ್ನು ಮಾಡುವವನೇ 'ಭರ್ಗ' ಎಂದು ಕರೆಯಲ್ಪಡುವನು.) ಎಂದು ಸಾಬೀತುಪಡಿಸಿ ಆತನೇ ಸರ್ವೋತ್ತಮದೇವತೆ ಎಂದು ಸೂಚಿಸಿದರು. ಧರ್ಮರಾಜನೂ ವನವಾಸದ ಕಾಲದಲ್ಲಿ ಸೂರ್ಯನಲ್ಲಿ ಸನ್ನಿಹಿತನಾದ ನಾರಾಯಣನ ಅನುಗ್ರಹದಿಂದಲೆ ಅಕ್ಷಯ ಪಾತ್ರೆಯನ್ನು ಪಡೆದು ತನ್ನ ಸಂಗಡಿಗರಾದ ಸಹಸ್ರಾರು ಮುನಿಗಳಿಗೆ ಅನ್ನವನ್ನಿತ್ತು ಸಂರಕ್ಷಣೆ ಮಾಡಿದನು. ಇದರಿಂದ ಸೂರ್ಯನಲ್ಲಿರುವ ಶ್ರೀಮನ್ನಾರಾಯಣನೇ ಅನ್ನವನ್ನಿತ್ತು ಸಲಹುವ ಭರ್ಗನು ಎಂದು ದೃಢವಾಗುತ್ತದೆ.
-ಶ್ರೀ ಶ್ರೀ ವಿದ್ಯೇಶತೀರ್ಥರು.
       
        

ಶ್ರೀವೇದವ್ಯಾಸರ ಉದ್ಘೋಶಹಣೆಯನ್ನು
ಸಮರ್ಥಿಸುವ
ಹರಿತತ್ವಚೂಡಾಮಣಿ
        'ನಾಸ್ತಿ ನಾರಾಯಣ ಸಮಂ....' ಸರ್ವಶಸ್ತ್ರಗಳಲ್ಲಿ ಚೂಡಾಮಣಿಯಂತಿರುವ ಮಹಾಭಾರತದ ಈ ಶ್ಲೋಕವು ಹರಿತತ್ತ್ವದ ಉತ್ಕರ್ಷವನ್ನು ಹೇಗೆ ಸಾರುತ್ತಿದೆ ಎಂಬುದನ್ನು ಈ ಶ್ಲೋಕದಲ್ಲಿಯ 'ಸತ್ಯವಾಕ್ಯ' ಪದಕ್ಕೆ ಒತ್ತುಕೊಟ್ಟು ಈ ಕೃತಿಯಲ್ಲಿ ಸಾಧಿಸಲಗಿದೆ.
        'ಸತ್ಯ' ಎಂಬುದಕ್ಕೆ ಚತುರ್ಮುಖ ಎಂಬ ಅರ್ಥವನ್ನು ತೋರಿಸಿಕೊಟ್ಟು ಚತುರ್ಮುಖನ ಭಾಗವತಾದಿಗಳಲ್ಲಿ ಉಲ್ಲೇಖಗೊಂಡ ಮಾತುಗಳ ಆಧಾರದಲ್ಲಿ 'ನಾಸ್ತಿ ನಾರಾಯಣ ಸಮಂ' ಎನ್ನುವುದನ್ನು ಉಪಪಾದಿಸಲಾಗಿದೆ. ಎಂಟು ಯುಕ್ತಿಗಳಿಂದಲೂ ನಾರಾಯಣನ ಸರ್ವೋತ್ತಮತ್ತ್ವವನ್ನು ಸಮರ್ಥಿಸಲಾಗಿದೆ.
        ಸತ್ಯವಾಕ್ಯ ಎಂಬುದಕ್ಕೆ ನಿತ್ಯವಾಕ್ಯ, ಪ್ರಧಾನವಾಕ್ಯ - ಈ ಅರ್ಥವನ್ನಿಟ್ಟುಕೊಂಡು ಆ ಪದ್ಯದ ಅರ್ಥವನ್ನು ವಿವರಿಸಲಾಗಿದೆ.
        ಸತ್ಯ ಶಬ್ದಕ್ಕೆ ರುದ್ರ - ಎಂಬ ಅರ್ಥವಿಟ್ಟುಕೊಂಡು ಪಾಶುಪತಮತಪ್ರವರ್ತಕರಾದ ರುದ್ರದೇವರ ಮುಖದಿಂದಲೇ ಹರಿಸರ್ವೋತ್ಕರ್ಷದ ಮಾತು ಹೊರಟಿದೆ ಎಂದು ತೋರಿಸಲಾಗಿದೆ.
        ಯುಕ್ತಿಗಳಿಂದಲೂ ಹರಿನಿಗಿಂತ ಹರಿಯ ಉತ್ತಮತ್ವವನ್ನು ಸಮರ್ಥಿಸಲಾಗಿದೆ.
        ಸತ್ಯಶಬ್ದಕ್ಕೆ ಭಾರತೀದೇವಿ ಎಂಬ ಅರ್ಥವನ್ನಿಟ್ಟುಕೊಂಡೂ ಈ ಶ್ಲೋಕದ ಅರ್ಥವನ್ನು ಪ್ರತಿಪಾದಿಸಲಾಗಿದೆ.
        ರುದ್ರನಂತೆ ಸೂರ್ಯ, ಸ್ಕಂದ, ಗಣಪತಿ, ಪಶುಪತಿ ಮುಂತಾದವರು ಸರ್ವೋತ್ತಮರೆಂದು ಸಾರುವ ಮತಗಳ ವಿಚಾರಗಳನ್ನೂ ಸ್ಥೂಲವಾಗಿ ನಿರಾಕರಿಸಲಾಗಿದೆ.
        ಕೊನೆಯಲ್ಲಿ ನಾರಾಯಣನಾಮದು ಅರ್ಥವನ್ನು ವಿವರಿಸುವ, ಐತರೇಯಭಾಷ್ಯದಲ್ಲಿ ಉದಾಹರಿಸಲಾದ 'ಬ್ರಹ್ಮಸಾರ' ದ ಮಾತನ್ನು ಉಲ್ಲೇಖಿಸಿ, ಅದರಲ್ಲಿ ಸೂಚಿಸಲಾದ ಮೊಕ್ಷದಾತೃತ್ವವೇ ಮುಂತಾದ ಮೂರು ನಾಲ್ಕು ಯುಕ್ತಿಗಳಿಂದಲೂ ಹರಿಯ ಪಾರಮ್ಯದ ಸಮರ್ಥನೆಯನ್ನು ಸೂಚಿಸುವುದಕ್ಕಾಗಿಯೇ 'ನಾಸ್ತಿ ನಾರಾಯಣ ಸಮಂ...' ಎಂಬಲ್ಲಿ ನಾರಾಯಣಪದವನ್ನೇ ಬಳಸಲಾಗಿದೆ ಎಂದು ತಿಳಿಸಲಾಗಿದೆ.
        ಹೀಗೆ 'ಹರಿತತ್ವಚೂಡಾಮಣಿ' ಶಾಸ್ತ್ರಗಳಲ್ಲಿಯ ಚೂಡಾಮಣಿ ಎನಿಸಿದ ಮಹಾಭಾರತದ 'ನಾಸ್ತಿ ನಾರಾಯಣ ಸಮಂ....' ಎನ್ನುವ ಮಾತೆಂಬ ಚೂಡಾಮಣಿಯಲ್ಲಿ ವಿರಾಜಿಸುತ್ತಿರುವ ನಾರಾಯಣ ಸರ್ವೋತ್ತಮತ್ವ ಎಂಬ ತತ್ತ್ವಚೂಡಾಮಣಿಯನ್ನು ಜಿಜ್ಞಾಸುಗಳ ಹೃದಯಮಂದಿರದಲ್ಲಿ ಧರಿಸುವಂತೆ ಮಾಡುತ್ತ 'ಹರಿತತ್ತ್ವಚೂಡಾಮಣಿ' ಎಂಬುದಾಗಿ ಅನ್ವರ್ಥ ಶೀರ್ಷಿಕೆಯನ್ನು ಹೊಂದಿರುವುದು.
        ಇದರಲ್ಲಿ ಪ್ರಸ್ತುತವಾದ ಪ್ರಮೇಯ:

ರಾಜಸೂಯಯಾಗದ ಸಭೆಯ ನಿರ್ಣಯ
        'ನಾಸ್ತಿ ನಾರಾಯಣ ಸಮಂ....' ಎಂಬ ವಾಕ್ಯವನ್ನು ಸತ್ಯವಾಕ್ಯ ಎಂದು ಕರೆಯಲಾಗಿದೆ. 'ಸತ್ಯಂ ಬ್ರಹ್ಮಾ ಸಮುದ್ದಿಷ್ಟಃ....' ಎಂಬ ಪ್ರಮಾಣವಚನದಿಂದ ಬ್ರಹ್ಮದೇವರಿಗೆ 'ಸತ್ಯ' ಎಂಬ ನಾಮವಿದೆ ಎಂದು ತಿಳಿದುಬರುವುದು.
        ಪಾಂಡವರ ರಾಜಸೂಯಯಾಅದಲ್ಲಿ ವೇದವ್ಯಾಸ ಹಾಗೂ ಪರಶುರಾಮದೇವರ ದಿವ್ಯ ಸನ್ನಿಧಾನದಲ್ಲಿ ತತ್ವನಿರ್ಣಯದ ಸಲುವಾಗಿ ವೇದಾದಿ ಶಸ್ತ್ರಗಳ ಭಾರೀ ಚರ್ಚೆನಡೆಯಿತು. ಈ ಚರ್ಚೆಯಲ್ಲಿ ಜ್ಞಾನಿವರೇಣ್ಯರಾದ ಬ್ರಹ್ಮಾದಿ ದೇವತೆಗಳು ಭಾಗವಹಿಸಿದ್ದರು.
        ಚರ್ಚೆಯ ಫಲಿತಾಂಶವಾಗಿ ಹರಿಯೇ ಸಕಲದೋಷದೂರನೂ ಗುಣಪೂರ್ಣನೂ ಆದುದರಿಂದ ಸರ್ವೋತ್ತಮನೆಂದು ಬ್ರಹ್ಮಾದಿದೇವತೆಗಳು ತೀರ್ಮಾನ ಮಾಡಿದರು. ಈ ತೀರ್ಪಿಗೆ ವೇದವ್ಯಾಸರ ಅಂಗೀಕಾರ ಮುದ್ರೆಯೂ ಬಿತ್ತು. ಸಾಧಕ ಜೀವರ ಪೈಕಿ ನಿರ್ಣಾಯಕರಲ್ಲಿ ಜಗದ್ಗುರುಗಳಾದ ಶ್ರೀಬ್ರಹ್ಮದೇವರೇ ಹಿರಿಯರು. ಆದುದರಿಂದ ಅವರಿಗೆ ಪ್ರಾಧಾನ್ಯವನ್ನು ನೀಡಿ, ಇಲ್ಲಿ 'ನಾಸ್ತಿ ನಾರಾಯಣ ಸಮಂ....' ಎನ್ನುವ ನಿರ್ಣಾಯಕವಾಕ್ಯವು ಅವರ ವಾಕ್ಯವೆಂದು ಹೇಳುವುದು ಸಮಂಜಸವೇ ಆಗಿದೆ.
        ಈ ವಿಚಾರವನ್ನೇ ಶ್ರೀಮದಾನಂದತೀರ್ಥರು-
'ನಾಸ್ತಿ ನಾರಾಯಣ ಸಮಮಿತಿ ವಾದೇನ ನಿರ್ಣಯೇ |
ಕೃತೇ ಬ್ರಹ್ಮಾದಿರಪಿ....'
        ಎನ್ನುವ ತಾತ್ಪರ್ಯನಿರ್ಣಯದ ಮಾತಿನಲ್ಲಿ ಸ್ಪಷ್ಟಪಡಿಸಿರುವರು.
        ಹಿರಿಯ ಜ್ಞಾನಿಗಳೂ ಜಗದ್ಗುರುಗಳೂ ಆದ ಬ್ರಹ್ಮದೇವರ 'ಹರಿಯೇ ಸರ್ವದಾ ಸರ್ವೋಚ್ಚದೇವತೆ' ಎಂಬ ನಿರ್ಣಯವು ವೇದವ್ಯಾಸರಿಂದಲೂ ಅನುಮೋದಿತವಾದುದ ರಿಂದ ಬೇರೆ ಮತಗಳಲ್ಲಿ ಹೇಳಿದ ಸ್ಕಂದ ಮೊದಲಾದ ದೇವತೆಗಳ ಸರ್ವೋತ್ಕರ್ಷವನ್ನು ಮಾನ್ಯಮಾಡಬಾರದೆಂದು ಸಿದ್ಧವಾಗುವುದು.

ಗಾಯತ್ರಿಯ ಆಂತರ್ಯಕ್ಕೆ ಹಚ್ಚಿದ ತಿಲಕ
ಗಾಯತ್ರೀ ಭಾವತಿಲಕಮ್
        ಸಂಸ್ಕೃತ ಭಾಷೆಯಲ್ಲಿರುವ ಈ ಕೃತಿ ಗಯಾದಲ್ಲಿ ಶ್ರೀಪಾದರು ಕೈಗೊಂಡಿದ್ದ (೧೯೯೪ ರಲ್ಲಿ) ಚಾತುರ್ಮಾಸ್ಯವ್ರತದ ಸವಿನೆನಪಿಗಾಗಿ ರೂಪಿತವಾಗಿದ್ದು, ಗಯೆಯ ಗದಾಧರನ ಪಾದಾರವಿಂದಕ್ಕೆ ತಿಲಕವಾಗಿ ಸಮರ್ಪಿತವಾಗಿದೆ.
        ಗಾಯತ್ರೀಮಂತ್ರದ ಜಪದ ಆವಶ್ಯಕತೆಯನ್ನು ಪರಿಶೀಲಿಸಿ, ಗಾಯತ್ರೀಮಂತ್ರಪ್ರತಿಪಾದ್ಯ ಸವಿತಾ ಯಾರು? ಗಾಯತ್ರಿಯಲ್ಲಿಯ ಭರ್ಗ ರುದ್ರ ಆಗಲಾರ; ಶ್ರೀಹರಿಯೇ ಭರ್ಗ....' ಇತ್ಯಾದಿಯಾಗಿ ವಿಷಯಗಳ ಸಮರ್ಥನೆ ನಡೆದಿದೆ. ಗಾಯತ್ರಿಯಲ್ಲಿ ದಶಾವತಾರಗಳನ್ನು ಹೇಗೆ ಅನುಸಂಧಾನ ಮಾಡಬಹುದು? ಪ್ರಾಣದೇವನ ಆಂಜನೇಯಾದಿ ರೂಪತ್ರಯದಿಂದ ಉಪಾಸ್ಯ ಭಗವದ್ರೂಪಗಳ ಪರವಾಗಿ ಹೇಗೆ ಅನುಸಂಧಾನ ಮಾಡಬಹುದು? ಉವುಗಳನ್ನು ಪ್ರತಿಪಾದಿಸಲಾಗಿದೆ. ಪರಿಶಿಷ್ಟದಲ್ಲಿ ಭಗವಂತನ ಧ್ಯಾನಯಾಕೆ ಮಾಡಬೇಕೆಂಬುದನ್ನು ಗಾಯತ್ರಿಯ ಮೂಲಕ ಸಮಾಧಾನಿಸಲಾಗಿದೆ. ಗಾಯತ್ರಿಯಲ್ಲಿ ಭಗವಂತನನ್ನು ಸವಿತೃನಾಮದಿಂದ ಉಲ್ಲೇಖಿಸುವ ಮೂಲಕ ಸೂರ್ಯನ ಸಾದೃಶ್ಯವನ್ನು ಯಾವ ಯಾವ ಅಂಶದಲ್ಲಿ ಸೂಚಿಸಲ್ಪಟ್ಟಿದೆ ಎಂಬುದನ್ನು ಶಾಸ್ತ್ರದಲ್ಲಿ ಅಲ್ಲಲ್ಲಿ ಬಂದಿರುವ ಸೂರ್ಯನ ಪ್ರಸ್ತಾವದ ಆಧಾರದಲ್ಲಿ ತೋರಿಸಿಕೊಡಲಾಗಿದೆ.
        ಅದರಲ್ಲಿ ಹಚ್ಚಿದ ಒಂದು ತಿಲಕ ಹೀಗಿದೆ-

ಗಾಯತ್ರಿಯಲ್ಲಿಯ ದೇವ-ವಾಮನ
        ಭಗವಂತನ ದಶಾವತಾರಗಳಲ್ಲಿ ದೇವಯೀನಿಯಲ್ಲಿ ಪ್ರಾದುರ್ಭವಿಸಿದವನು ವಾಮನ. ಕಶ್ಯಪರಿಂದ ದೇವಮಾತೆಯಾದ ಅದಿತಿಯಲ್ಲಿ ಇಂದ್ರನ ತಮ್ಮನಾಗಿ ಅವನ ಪ್ರಾದುರ್ಭಾವ. ಆದುದರಿಂದಲೇ ಗಾಯತ್ರೀ ಮಂತ್ರದ ಹತ್ತು ಪದಗಳನ್ನು ದಶಾವತಾರಗಳ ಬಗ್ಗೆ ಅನುಸಂಧಾನ ನಡೆಸುವಾಗ ದೇವ ಪದದಿಂದ ವಾಮನನು ಪ್ರಸ್ತಾವಿಸಲ್ಪಡುವನು.
        ಅಲ್ಲದೆ, ಗಮನಾರ್ಥಕವಾದ 'ದಿವ್' ಧಾತುವಿನಿಂದ ನಿಷ್ಪನ್ನವಾದ ದೇವ ಶಬ್ದವು ವಾಮನನ ವೇದಪ್ರಸಿದ್ಧವಾದ ವಿಶಿಷ್ಟ ಗಮನವನ್ನು ಸಾರುವುದು. ವಾಮನನೇ ತ್ರಿವಿಕ್ರಿಮನಾಗಿ ತನ್ನ ಮೂರು ಪಾದಗಳಿಂದ ಸಕಲವನ್ನೂ ಕಬಳಿಸಿರುವುದು 'ತ್ರೀಣಿ ಪದಾ ವಿಚಕ್ರಮೇ' ಮುಂತಾದ ಮಾತುಗಳಿಂದ ಸೂಚಿತವಾಗಿವೆ. ಹೀಗೆ ತ್ರಿವಿಕ್ರಮನಾಗಿ ನಡೆಸಿದ ಈ ಬಗೆಯ ವಿಶಿಷ್ಟ ಗಮನವನ್ನು ದೇವಶಬ್ದ ಸೂಚಿಸಿಕೊಡಬಲ್ಲದು. ಅಂತೆಯೇ ಭಗವಂತನು ವಾಮನನಾಗಿ ಅವತರಿಸಿದವನೇ ತನ್ನ ಆ ಅವತಾರದ ಪ್ರಧಾನ ಉದ್ದೇಶವನ್ನು ಈಡೇರಿಸುವುದಕ್ಕಾಗಿ ಬಲಿಯ ನೂರನೆಯ ಅಶ್ವಮೇಧಯಾಗ ನಡೆಯುತ್ತಿದ್ದ ಭೃಗುವತ್ಸ ಪ್ರದೇಶದೆಡೆಗೆ ಸಾಗುವಾಗ ವಿಶಿಷ್ಟವಾದ ಗಮನಶೈಲಿಯನ್ನು ಅಳವಡಿಸಿಕೊಂಡಿದ್ದನು.
        ಭಾಗವತದಲ್ಲಿ....
        'ಜಗಾಮ ತತ್ರಾಖಿಲಸಾರಸಂಭೃತೋ ಭಾರೇಣ ಗಾಂ ಸನ್ನಮಯಮ್ ಪದೇ ಪದೇ' - ಬ್ರಹ್ಮಾಂಡವನ್ನೇ ಹೊತ್ತು ತನ್ನ ಭಾರದಿಂದ ಭೂಮಿಯನ್ನು ಹೆಜ್ಜೆ ಹೆಜ್ಜೆಗೆ ಭಾಗಿಸುತ್ತ - ಭೃಗುವತ್ಸ ಪ್ರದೇಶಕ್ಕೆ ಸಾಗಿದನೆಂದು ವರ್ಣಿಸಲಾಗಿದೆ.
        ಆದುದರಿಂದ ವಾಮನನ ಈ ಗಮನವನ್ನೂ ಗಯತ್ರಿಯ ದೇವಶಬ್ದ ಸೂಚಿಸಿ ಕೊಡಬಲ್ಲದು.


ಗೀತೆಯಲ್ಲಿ ವಾಸುದೇವನ ಪಾರಮ್ಯವನ್ನು ಸಾರುವ
ವಾಸುದೇವನಲ್ಲಿ ಗೀತಾಕಟಾಕ್ಷ
        ಭಗವದ್ಗೀತೆಯಲ್ಲಿ ವಾಸುದೇವನ ಪಾರಮ್ಯವು ಹೇಗೆ ಹಾಸುಹೊಕ್ಕಾಗಿ ತುಂಬಿಕೊಂಡಿದೆ ಎಂಬುದನ್ನು ತೋರಿಸಹೊರಟ 'ವಾಸುದೇವನಲ್ಲಿ ಗೀತಾಕಟಾಕ್ಷ' ದ ಪ್ರಾರಂಭದಲ್ಲಿ ಗೀತೆಗೆ ಹರಿಸರ್ವೋತ್ಕರ್ಷದಲ್ಲಿ ಹೇಗೆ ಅಭಿಪ್ರಾಯವಿದೆ? ವಾಯು ಜೀವೋತ್ತಮನೆಂದು ಸಮರ್ಥಿಸುವಲ್ಲೂ ಹೇಗೆ ತಾತ್ಪರ್ಯ ಇದೆ? ಎಂಬುದನ್ನು ಸಮರ್ಥಿಸಿ ಬಳಕ 'ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ' - ಎಂಬ ವಚನದಲ್ಲಿ ಹರಿ ಸರ್ವೋತ್ತನತ್ವ, ವಯುಜೀವೋತ್ತಮತ್ವಗಳ ಪ್ರತಿಪಾದನೆ ಹೇಗೆ ನಡೆದಿದೆ ಎಂಬುದನ್ನು ತೋರಿಸಿಕೊಡಲಾಗಿದೆ.
        ಹರಿಸರ್ವೋತ್ತಮತ್ವಕ್ಕೆ ವಿರುದ್ಧಗಳೆನಿಸಿರುವ ಸ್ಕಾಂದ, ಗಾಣಪತ್ಯ, ಪಾಶುಪತ, ಶಕ್ತ, ಹೈರಣ್ಯಗರ್ಭ ಹಾಗೂ ಸೌರಮತಗಳ ದೂಷಣೆ ಗೀತೆಯಲ್ಲೂ ಭಾಗವತಾದಿಗಳಲ್ಲೂ ಹೇಗೆ ನಡೆದಿದೆ ಎಂಬುದನ್ನು ತೋರಿಸಿಕೊಡಲಾಗಿದೆ.
        'ವಾಸುದೇವಃ ಸರ್ವಮಿತಿ....' ಎಂಬ ಮಾತಿನಲ್ಲಿರುವ 'ವಾಸುದೇವ' ಹಾಗೂ 'ಸರ್ವ' ಶಬ್ದಗಳಿಂದ ವಾಸುದೇವನ ಪಾರಮ್ಯಕ್ಕೆ ಪ್ರಯೋಜಕಗಳಾದ ಯುಕ್ತಿಗಳು ಹೇಗೆ ಸೂಚಿತಗಳಾಗಿವೆ ಎಂಬ ಪ್ರತಿಪಾದನೆಯೂ ಇದರಲ್ಲಿ ನಡೆದಿದೆ.
        ಆ ಕೃತಿಯಲ್ಲಿ ಪ್ರಸ್ತುತವಾದ ಪ್ರಮೇಯ....

ವಾಸುದೇವಃ ಭಗವತಾಂ....
        ವಾಸುದೇವನೇ ವೀರ್ಯ, ಯಶಸ್ಸು, ಐಶ್ವರ್ಯ, ಶ್ರೀ, ಜ್ಞಾನ ಹಾಗೂ ವೈರಾಗ್ಯ ಎನ್ನುವ ಆರು ಗುಣವುಳ್ಳ ಭಗವಂತರ (ದೇವತೆಗಳ) ಸಮುದಾಯದಲ್ಲಿ ಅಗ್ರಗಣ್ಯ ನಾಗಿದ್ದಾನೆಂದು ಶ್ರೀ ಕೃಷ್ಣನೇ ಉದ್ಧವಗೀತೆಯಲ್ಲಿ ಸಾರಿದ್ದಾನೆ-
        'ವಾಸುದೇವಃ ಭಗವತಾಂ....'
-ಭಾಗ ೧೧-೧೬-೨೯
        ಆದುದರಿಂದ ಮಿತಿಯಿಲ್ಲದ ಷಡ್ಗುಣಗಳಿಂದ ತುಂಬಿದ ಶ್ರೀವಾಸುದೇವನಿಗೆ ಸರ್ವ ಎನ್ನುವ ಅಭಿಧಾನವು ಅನ್ವರ್ಥಕವಾಗಿದೆ ಎಂದು ಭಾಗವತವು ಸಮರ್ಥಿಸುವುದು.
        'ತದಿದಂ ಗುಣಪೂರ್ತ್ಯೈವ ಸರ್ವಮಿತ್ಯೇವ ಶಬ್ದಿತಂ....' ಎನ್ನುವ ಪ್ರಮಾಣ ಸಾರುತ್ತಿರುವಂತೆ ವಾಸುದೇವನು ಗುಣಪೂರ್ಣನಾಗಿರುವುದರಿಂದಲೇ 'ಸರ್ವಂ' ಎನಿಸುವುದು ತಾನೇ?
        ಯಾರು ಗುಣಾಧಿಕರೋ ಅವರೇ ಉತ್ತಮರೆಂದು ಲೋಕನ್ಯಾಯದಿಂದಲೂ ಸಿದ್ಧವಾಗುವುದು. ಆದುದರಿಂದ ಗುಣಿಗಳಾದ ದೇವತೆಗಳ ವರ್ಗದಲ್ಲೇ ಹರಿಯು ಗುಣಾಧಿಕನಾದುದರಿಂದ ಆತನೇ ಸರ್ವೋತ್ತಮನೆಂದು 'ವಾಸುದೇವಃ ಭಗವತಾಂ....' ಎಂದು ಉಪದೇಶಿಸಿದ ಶ್ರೀಕೃಷ್ಣನ ಆಶಯ.


ಗಾಯತ್ರಿಯಲ್ಲಿ ರಾಮನ ಗುಣಧರ್ಮಗಳ
ಪ್ರತಿಫಲನವನ್ನು ಬೆಳಗಿಸುವ
ಗಾಯತ್ರಿ ಕಂಡ ರಾಮಾಯಣ
        ಸವಿತೃನಾರಾಯಣನ ಗುಣಧರ್ಮಗಳನ್ನು ಪ್ರತಿಪಾದಿಸುತ್ತಿರುವ ಗಾಯತ್ರೀಮಂತ್ರ ಅಂತಹ ಸವಿತೃನಾರಾಯಣನಿಗಿಂತ ಅತ್ಯಂತಾಭಿನ್ನಗಳಾದ ಭಗವಂತನ ಮೂಲರೂಪಹಾಗೂ ಇತರ ರೂಪಗಳ ಗುಣಧರ್ಮಗಳ ಮೇಲೂ ಬೆಳಕುಚೆಲ್ಲಬಲ್ಲದು.
        ಈ ನಿಲುವಿನ ಹಿನ್ನೆಲೆಯಲ್ಲಿ ಗಾಯತ್ರಿಮಂತ್ರದಲ್ಲಿ ಶ್ರೀರಾಮಚಂದ್ರನ ಗುಣಧರ್ಮಗಳ ಪ್ರತಿಪಾದನೆ ಹೇಗೆ ನಡೆದಿದೆ ಎಂದು 'ಗಾಯತ್ರೀ ಕಂಡ ರಾಮಾಯಣ' ತೋರಿಸುತ್ತಿದೆ. ಇಪ್ಪತ್ನಾಲ್ಕುಸಾವಿರ ಶ್ಲೋಕಗಳನ್ನೂಳಗೊಂಡು ಶ್ರೀರಾಮಾಯಣವು ಇಪ್ಪತ್ನಾಲ್ಕು ಅಕ್ಷರಗಳಿಂದ ಅಲಂಕೃತವಾದ ಗಾಯತ್ರೀಮಂತ್ರದ ವ್ಯಾಖ್ಯಾನರೂಪವಾಗಿದೆ.
        'ಇದಂ ರಾಮಾಯಣಂ ಕೃತ್ಸ್ನಂ ಗಾಯತ್ರೀಬೀಜಸಂಯುತಮ್' ಎಂಬ ಜ್ಞಾನಿಗಳ ಉಕ್ತಿಯು ಇದನ್ನು ಸ್ಪಷ್ಟಪಡಿಸಿದೆ - ಎಂದು ಪೀಠಿಕೆಯನ್ನು ರೂಪಿಸಿ, ಇದರಲ್ಲಿ ಗಾಯತ್ರಿಯ 'ಧಿಯೋ ಯೋ ನಃ ಪ್ರಚೋದಯಾತ್ ' ಎಂಬ ಭಾಗದಿಂದ ತತ್, ಸವಿತುಃ, ವರೇಣ್ಯಂ, ಭರ್ಗಃ, ದೇವಸ್ಯ, ಧೀಮಹಿ - ಶಬ್ದಗಳಿಂದ, 'ಸವಿತುಃ ವರೇಣ್ಯ' ಇತ್ಯಾದಿಯಾಗಿ ಎರಡೆರಡು ಶಬ್ದಗಳನ್ನು ಸಂಯೋಜಿಸಿಕೊಂಡಗ ಶ್ರೀರಾಚಂದ್ರನ ಯಾವ ಯಾವ ಗುಣಮಹಿಮೆಯನ್ನು ಅನುಸಂಧಾನ ನಡೆಸಬಹುದೆಂಬುದಾಗಿ ವಿಮರ್ಶಿಸಲಾಗಿದೆ. ಗಾಯತ್ರೀಮಂತ್ರದ ಪತಿಯೊಂದು ಶಬ್ದವೂ ರಾಮನ ದಿವ್ಯಸ್ವರೂಪದ ಮಹಿಮೆಯನ್ನು ಸಾರುತ್ತಿದೆ. ರಾಮಾಯಣದ ಪ್ರಮುಖ ಘಟನೆಗಳನ್ನೆಲ್ಲ ನಮ್ಮ ಮುಂದೆ ಬಿಚ್ಚಿ ತೋರಿಸುತ್ತಿದೆ ಎಂದು ಪ್ರತಿಪಾದಿಸಲಾಗಿದೆ.
        ಐದನೆಯ ವ್ಯಾಸಜಯಂತಿ ಮಹೋತ್ಸವದಲ್ಲಿ ಶ್ರೀ ವೇದವ್ಯಾಸರಿಗೆ ಜ್ಞಾನಪುಷ್ಪವಾಗಿ ಸಮರ್ಪಿತವಾದ ಈ ಕೃತಿಕುಸಮ ಶ್ರೀ ವೇದವ್ಯಾಸರ ನೈವೇದ್ಯವೆಂಬ ಹೆಗ್ಗಳಿಕೆಗೆ ಪಾತ್ರವಾದುದು.
        ಈ ಕೃತಿಯ ಉಪಕ್ರಮದಲ್ಲಿ ಪ್ರಸ್ತುತವಾದ ಒಂದು ಪ್ರಮೇಯ -
        ಸನ್ಮಾರ್ಗದಲ್ಲಿ ನಡೆಯಲು ಪ್ರೇರಿಸುವ ಮೂಲಕ
'ಧೀಯೋ ಯೋ ನಃ ಪ್ರಚೋದಯಾತ್'
        ಭಗವಾನ್ ಶ್ರೀರಾಮಚಂದ್ರನು ಮಾನವೀಯ ಮೌಲ್ಯಗಳ ಬಗೆಗೆ ಮನುಕುಲಕ್ಕೆ ಶಿಕ್ಷಣ ನೀಡುವಸಲುವಾಗಿಯೂ ಧರೆಗೆ ಇಳಿದುಬಂದಿರುವನು -
ಮರ್ತ್ಯಾವತಾರಸ್ತ್ವಿಹ ಮರ್ತ್ಯಶಿಕ್ಷಣವತ್ |
- ಭಾಗವತ
        ಮರ್ಯಾದಾಪುರುಷೋತ್ತಮನಾದ ಆತನ ನಡೆ - ನುಡಿ -ಗುಣ - ಶೀಲಗಳೆಲ್ಲವೂ ಮಾನವಸಮಾಜಕ್ಕೆ ಆದರ್ಶಗಳೆನಿಸಿವೆ.
        ಸತ್ಯನಿಷ್ಠೆ, ಪಿತೃ - ಮಾತೃ ಭಕ್ತಿ, ಭ್ರಾತೃಸೌಹಾರ್ದ, ಶತ್ರುಪರವಾದ ವಾತ್ಸಲ್ಯ, ಪ್ರಜಾ ವಾತ್ಸಲ್ಯ, ತ್ಯಾಗ, ಔದಾರ್ಯ, ಏಕಪತ್ನೀವ್ರತ, ಅಪವಾದಭೀರುತ್ವ, ಸಾರ್ಥಕಕ್ರೋಧ, ಸಾರ್ಥಕ ಪ್ರಸಾದ, ಸೂನೃತವಾಕ್ ಸಂಪತ್ತು ಮುಂತಾದ ಗುಣಗಳು ಯಾರಿಗೆ ಸಂಪಾದ ನೀಯಗಳಲ್ಲ?
        ಶ್ರೀರಾಮಚಂದ್ರನು ತನ್ನ ಜೀವನದಲ್ಲಿ ಇವುಗಳನ್ನು ತೋರಿಸುವ ಮೂಲಕ ಪ್ರತಿಯೊಬ್ಬನಿಗೂ 'ದಾರಿದೀಪ' ಎನಿಸಿದ್ದಾನೆ. ಪ್ರತಿಯೊಬ್ಬನನ್ನೂ ಸನ್ಮಾರ್ಗದಲ್ಲಿ ನಡೆಸಲು ಪ್ರೇರಿಸುತ್ತಾನೆ. ಈ ಅಂಶವನ್ನು ಗಾಯತ್ರಿಯ ಮಂತ್ರದ 'ಧಿಯೋ ಯೋ ನಃ ಪ್ರಚೋದಯಾತ್' ಎಂಬ ಭಾಗವು ಎತ್ತಿ ತೋರಿಸುತ್ತಿದೆ.
        ಯಃ - ಯಾವ ರಾಮಚಂದ್ರನು, ನಃ - ನಮ್ಮ ಧಿಯಃ - ಸನ್ಮಾರ್ಗದಲ್ಲಿ ಸಾಗಲು ಉಪಯುಕ್ತಗಳಾದ ಬುದ್ಧಿಗಳನ್ನು, ಪ್ರಚೋದಯಾತ್ - ಚೆನ್ನಾಗಿ ಪ್ರೇರಿಸುವನು ಎಂಬುದಾಗಿ.

'ಶ್ರೀಕೃಷ್ಣನ ಸತ್ಯಸಂಕಲ್ಪತ್ವ'
        ಸತ್ಯಸಂಕಲ್ಪತ್ವ ಭಗವಂತನ ಅಸಾಧಾರಣ ಮಹಿಮೆ. ಅದನ್ನು ಶ್ರೀಕೃಷ್ಣ ತನ್ನಲ್ಲಿ ಇರುವುದೆಂದು ಸ್ಪಷ್ಟಪಡಿಸಿದ್ದಾನೆ. ಸುಭದ್ರೆಯನ್ನು ದುರ್ಯೋಧನನಿಗೆ ನೀಡುತ್ತೇನೆಂದು ವಚನ ಕೊಟ್ಟಿದ್ದರೂ ಜೀವನಾದ ಬಲಭದ್ರನು ಆಕೆಯನ್ನು ದುರ್ಯೋಧನನಿಗೆ ನೀಡಲು ಸಮರ್ಥನಾಗಲಿಲ್ಲ. ಶ್ರೀಕೃಷ್ಣನ ಸಂಕಲ್ಪದಂತೆ, ಅರ್ಜುನನೇ ಆಕೆಯನ್ನು ಪಡೆದ. ಈ ನಿದರ್ಶನದಿಂದ ಜೀವರು ಸತ್ಯಸಂಕಲ್ಪರಲ್ಲ, ಶ್ರೀಕೃಷ್ಣನೇ ಉಪನಿಷತ್ತಿನಲ್ಲಿ ವರ್ಣಿಸಲ್ಪಟ್ಟ ''ಸತ್ಯಸಂಕಲ್ಪ'' ನೆಂದು ಸ್ಫುಟವಾಯಿತು.
- ಶ್ರೀ ಶ್ರೀ ವಿದ್ಯೇಶತೀರ್ಥರು


ಶಿವರಾತ್ರಿಯ ಬಗ್ಗೆ ಬೆಳಕು ಚಲ್ಲುವ
ಶಿವರಾತ್ರಿ ರಹಸ್ಯ
        ಈಶಾನಸಂಹಿತೆಯ ಮಾತೊಂದನ್ನು ಉಲ್ಲೇಖಿಸಿ, ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿತಿಥಿಯ ಮಹಾರಾತ್ರಿಯಲ್ಲಿ ಶಿವನು ಲಿಂಗರೂಪದಿಂದ ಪ್ರಾದುರ್ಭವಿಸಿದ ಪ್ರಯುಕ್ತ ಆ ತಿಥಿಯ ರಾತ್ರಿಯು ಶಿವನಿಗೆ ಪ್ರಿಯವೆನಿಸಿ, ಅವನ ಉಪಾಸನೆಗೆ ಪ್ರಶಸ್ತ ಕಾಲವಾಗಿದೆ - ಎಂದು 'ಶಿವರಾತ್ರಿ' ಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿ, 'ಶಿವರಾತ್ರಿ' ಗೆ ಸಂಬಂದಿಸಿದಂತೆ ಒಬತ್ತು ಅಂಶಗಳ ಬೆಳಕು ಚೆಲ್ಲಲಾಗಿದೆ. 'ವೈಷ್ಣವನೂ ಆಚರಿಸಬೇಕಾದ ವ್ರತ' ,'ಶಿವರಾತ್ರಿಯ ಅಂತರಾರ್ಥ', 'ಬಿಲ್ವಪ್ರಿಯ ಹರಿಹರರು', 'ಶಿವತತ್ತ್ವದ ಹಿರಿಮೆ', ಮೃತ್ಯುಂಜಯಜ್ಞಾನ;, ಅಷ್ಟಮೂರ್ತಿಶಿವ', 'ಹರಿಪ್ರಿಯಹರ - ಹರಪ್ರಿಯಹರಿ', ಶಿವಪ್ರಜ್ಞೆ' - ಈ ಒಂಬತ್ತು ಅಂಶಗಳು ಶಿವರಾತ್ರಿಯ ಕೆಲವು ವಿಚಾರಗಳ ಜೊತೆಗೆ ಶಿವನ ವ್ಯಕ್ತಿತ್ವದ ಕೆಲವು ಮುಖಗಳನ್ನೂ ಪರಿಚಯಿಸಿಕೊಡುತ್ತಿವೆ.
        'ಶಿವರಾತ್ರಿರಹಸ್ಯ' ದ ಒಂದು ಪ್ರಮೇಯ:

ಹೃದಯರಂಗಭೂಮಿ ಶಿವನ ತಾಂಡವನೃತ್ಯಕ್ಕೆ ತಾಣವಾಗಲಿ!
        ಹಿಂದೆ ದೂಷಣನಾಮಕ ದೈತ್ಯನು ವೇದಧರ್ಮಸಂರಕ್ಷಕರಾದ ಪೂಜ್ಯರ ಮೇಲೆ ದಾಳಿ, ದಬ್ಬಾಳಿಕೆ ನಡೆಸಿದರೆ, 'ಮೂಢ' ಎನ್ನುವ ಅಸುರನು ಋಷಿಕೆ ಎನ್ನುವ ಮಹಿಳೆಯ ಬಗ್ಗೆ ಮೋಹಿತನಾಗಿ ಅತ್ಯಾಚಾರವನ್ನು ಎಸಗಲು ಹವಣಿಸಿದನು. ಈ ವಿಷಮ ಪರಿಸ್ಠಿತಿಯಲ್ಲಿ ಪೂಜ್ಯರು ಹಾಗೂ ಋಷಿಕೆಯಲ್ಲಿ ಶಿವಪ್ರಜ್ಞೆ ಜಾಗೃತವಾಗಿತ್ತು. ಆದುದರಿಂದಲೇ ಇವರಿಂದ ಪ್ರಸನ್ನನಾದ ಶಿವನು ಪ್ರಾದುರ್ಭವಿಸಿ, ಧರ್ಮಕಂಟಕನಾದ ದೂಷಣನನ್ನು ದಮನಮಾಡಿ, ಲೋಕದಲ್ಲಿ ಪಿನಃ ಧರ್ಮ ನೆಲೆಸುವಂತೆ ಮಾಡಿದ. ಹಾಗೆಯೇ ಮಹಿಳಾಮಾನಕಂಟಕನಾದ ಮೂಢನನ್ನು ಸಂಹರಿಸಿ ಋಷಿಕೆಯ ಪಾವಿತ್ರ್ಯವನ್ನು ಕಾಪಾಡಿದ.
        ಈ ಕಥೆಯನ್ನು ಶೈವಪುರಾಣದಲ್ಲಿ ಕಾಣುವೆವು.
        ಅಂದು ದೂಷಣ ಮತ್ತು ಮೂಢ ದೈತ್ಯರು ಹೊರಗಿದ್ದು ಧರ್ಮ ಮತ್ತು ಮಹಿಳಾಮಾನದ ಭಂಜಕರಾಗಿದ್ದರೆ, ಇಂದು ಅವರು ಮಾನವನ ಹೃದಯದಲ್ಲಿ ಕಾಮ, ಅಹಂಕಾರ, ನಾಸ್ತಿಕ್ಯ ಮುಂತಾದ ವಿವಿಧ ರೂಪಗಳಿಂದ ಪ್ರಾದುರ್ಭವಿಸಿ, ತಮ್ಮ ಹಿಂದಿನ ಕಾರ್ಯವನ್ನು ಮುಂದುವರಿಸುತ್ತಿರುವರು. ಈ ಧರ್ಮ ಹಾಗೂ ಮಹಿಳಾಮಾನದ ಭಂಜಕಗಳಾದ ಅಸುರೀ ಶಕ್ತಿಗಳು ಅಳಿದು ಸಮಾಜದಲ್ಲಿ ಧರ್ಮ, ನೀತಿ, ಸಂಸ್ಕೃತಿಗಳ ಪುನರುತ್ಠಾನವಾಗಲು ನಮ್ಮೆಲ್ಲರ ಅಂಧಕಾರಮಯ ಹೃದಯದಲ್ಲಿ ಶಿವರಾತ್ರಿಯಾಗಬೇಕು. ಶಿವನು ಪ್ರಾದುರ್ಭವಿಸಬೇಕು, ಶಿವಪ್ರಜ್ಞೆ ಜಾಗೃತವಾಗಬೇಕು. ಯಾವುದೇ ಕಾನೂನು ಕಾಯಿದೆಗಳಿಂದ ತಡೆಗಟ್ಟಲು ಅಸಾಧ್ಯಗಳಾದ ಅನ್ಯಾಯ, ಅತ್ಯಾಚಾರಗಳನ್ನು, ಮನಸ್ಸನ್ನು ಪರಿವರ್ತಿಸಬಲ್ಲ ಶಿವತತ್ತ್ವದ ಪ್ರಜ್ಞೆ, ಕೃಪಾಕಟಾಕ್ಷಗಳು ತಡೆಯಬಲ್ಲವು. ಆದುದರಿಂದ ನಮ್ಮ ಹೃದಯರಂಗಭೂಮಿಯು ಕೈಲಾಸದಲ್ಲಿ ಕೆಲವು ತಾಸುಗಳಲ್ಲಷ್ಟೇ ತಾಂಡವ ನೃತ್ಯವನ್ನು ನಡೆಸುವ ಶಿವನಿಗೆ ಸರ್ವದಾ ತಾಂಡವನೃತ್ಯದ ತಣವಾಗಬೇಕು. ಹಾಗಾದರೆ ಮಾತ್ರ ನಾವು ಆಚರಿಸುವ ಶಿವರಾತ್ರಿಯು ಮೌಲಿಕವಾಗಬಲ್ಲದು.


'ಆಧ್ಯಾತ್ಮದೀಪ' ಎನಿಸಿದ ಶ್ರೀಕೃಷ್ಣನ
ಗುಣಮಹಿಮೆಗಳನ್ನು ಗಾಯತ್ರಿಯಲ್ಲಿ ತೋರಿಸುವ
ಗಾಯತ್ರಿಯಲ್ಲಿ ಆಧ್ಯಾತ್ಮದೀಪ
        ಶ್ರೀ ವಿದ್ಯೇಶತೀರ್ಥರ ಪೀಠಾರೋಹಣ ರಜತಮಹೋತ್ಸವದ ಸವಿನೆನಪಿಗಾಗಿ ಮರುಮುದ್ರಣ ಕಂಡಿರುವ 'ಗಾಯತ್ರಿಯಲ್ಲಿ ಆಧ್ಯಾತ್ಮದೀಪ' ಕೃತಿಯು ' ಸ ತ್ವಂ ಸಾಕ್ಷಾತ್ ವಿಷ್ಣುರಧ್ಯಾತ್ಮದೀಪಃ' - ಎನ್ನುವ ದೇವಕಿಯ ಮಾತಿನಲ್ಲಿ 'ಆಧ್ಯಾತ್ಮದೀಪ' - ಎಂದು ಉಲ್ಲೇಖಿಸಲ್ಪಟ್ಟಿರುವ ಶ್ರೀಕೃಷ್ಣನ ಗುಣಮಹಿಮೆಗಳು ಗಾಯತ್ರಿಮಂತ್ರದಲ್ಲಿ ಹೇಗೆ ಪ್ರತಿಬಿಂಬಿತಗಳಾಗೆವೆ ಎಂಬುದನ್ನು ಪ್ರತಿಪಾದಿಸುತ್ತಿದೆ.
        ಪ್ರಾರಂಭದಲ್ಲಿ ಶ್ರೀಕೃಷ್ಣ ತನ್ನ ದಿವ್ಯಚರಿತ್ರೆಯ ಮೂಲಕ ಹತ್ತುಹಲವು ಆಧ್ಯಾತ್ಮ ಮುಖಗಳನ್ನು ಪಂಡಿತಪಾಮರರಿಗೂ ಜ್ಞಾತವಾಗುವಂತೆ ತೋರಿದ್ದಾನೆಂಬುದನ್ನು ನಿರೂಪಿಸಿ, ಬಳಿಕ ಗಾಯತ್ರಿಯ ಪ್ರತಿಯೊಂದು ಪದವೋ ಕೃಷ್ಣನ ಅದ್ಭುತ ಲೀಲೆ ಮಹಿಮೆಗಳನ್ನು ಹೇಗೆ ಸಾರುತ್ತಿದೆ ಎಂದು ತೋರಿಸಿಕೊಡಲಾಗಿದೆ. 'ಸವಿತುಃ ವರೇಣ್ಯಂ' ಇತ್ಯಾದಿಯಾಗಿ
ಎರಡೆರಡು ಪದಗಳನ್ನು ಸಂಯೋಜಿಸಿಯೂ ಅರ್ಥವಿಶೆಷವನ್ನು ಹೊರಡಿಸಲಾಗಿದೆ. ಕೊನೆಯಲ್ಲಿ ಶ್ರೀಕೃಷ್ಣನು ತನ್ನ ವರಿತೆಯಿಂದ ತೋರಿದ ಲೋಕನೀತಿಗಳನ್ನು ಪರಿಚಯಿಸಿಕೊಡಲಾಗಿದೆ.
ಗಾಯತ್ರಿಯಲ್ಲಿ ಆಧ್ಯಾತ್ಮದೀಪದ ಒಂದು ಕಿರಣ
ಧೀಯೋ ಯೋ ನಃ ಪ್ರಚೋದಯಾತ್
        'ಧೀಯೋ ಯೋ ನಃ ಪ್ರಚೋದಯಾತ್' ಎಂಬ ಗಾಯತ್ರಿಯ ಭಾಗವು ಶ್ರೀಕೃಷ್ಣನು ಎಲ್ಲ ಜೀವರ ಬುದ್ಧಿಪ್ರೇರಕನೆಂದು ಬೋಧಿಸುತ್ತದೆ.
        'ಬುದ್ಧಿರ್ಜ್ಞಾನಮಸಂಮೋಹಃ......ಭವಂತಿ ಭಾವಾಃ ಭೂತಾನಾಂ ಮತ್ತ ಏವ ಪೃಥಗ್ ವಿಧಾಃ' - ಎಂಬ ಗೀತಾವಚನದಲ್ಲಿ ಶ್ರೀಕೃಷ್ಣನು ತನ್ನ ಅನುಗ್ರಹದಿಂದಲೇ ಜೀವನಿಗೆ ಕರ್ತವ್ಯಾಕರ್ತವ್ಯ ನಿರ್ಣಯರೂಪದ ಬುದ್ಧಿ ಉಂಟಾಗುವುದೆಂದು ತಿಳಿಸಿರುವನು. ಶ್ರೀಕೃಷ್ಣನು, ಪರಸೇನೆಯಲ್ಲಿ ಗುರು ಬಂಧುಜನರನ್ನು ನೋಡಿ ಮೋಹಪರವಶತೆಯಿಂದ ಕಿಂಕರ್ತಾವ್ಯತಾ ಮೂಢನಾದ ಅರ್ಜುನನಿಗೆ ಕರ್ತವ್ಯಾಕರ್ತವ್ಯಗಳ ನಿರ್ಣಯರೂಪ ಬುದ್ಧಿಯನ್ನು ಗೀತೋಪದೇಶದ ಮೂಲಕ ಪ್ರದಾನಮಾಡಿ ಆತನನ್ನು ಯುದ್ಧಕಾರ್ಯದಲ್ಲಿ ತೊಡಗಿಸಿದ. ಈ ಮೂಲಕ ಅವನು ಬುದ್ಧಿಪ್ರೇರಕನಾದ ಗಾಯತ್ರೀ ಪ್ರತಿಪಾದ್ಯ ಪರತತ್ವ ತಾನೇ ಎಂದು ಸ್ಪಷ್ಟಪಡಿಸಿದ.



ಉಡುಪಿ ಅನಂತಾಸನನ ಸನ್ನಿಧಿಯಲ್ಲಿ ನೀಡಿದ ಸಂದೇಶ
ಸತ್ಯತೀರ್ಥನಾಮದ ಅನ್ವರ್ಥತೆ
        ಭಂಡರಕೇರಿಮಠದ ಮೂಲಯತಿಗಳಿಗೆ 'ಸತ್ಯತೀರ್ಥ' ಎಂಬ ನಾಮವು ತುಂಬ ಅನ್ವರ್ಥವಾದುದು. 'ನಿರ್ಣೀಯತೇ ಯತಃ ಸಮ್ಯಗಿದಂ ಸತ್ಯಮಿತಿ ಸ್ಫುಟಮ್' ಎಂದು ಶಬ್ದನಿರ್ಣಯ (ಕಾ.ಉ.ಭಾ) ನಿರ್ಣಯಿಸುವಂತೆ ಸತ್ಯ ಎಂದರೆ ಮೀಮಾಂಸಾಶಾಸ್ತ್ರ. ಆದ್ದರಿಂದ 'ಸತ್ಯಂ ತೀರ್ಥಂ ಶಾಸ್ತ್ರಂ ಯಸ್ಮಾತ್' ಎಂಬ ನಿರ್ವಚನ ಪ್ರಕಾರ, ಸತ್ಯ ಎನಿಸುವ ಬ್ರಹ್ಮಸೂತ್ರರೂಪವಾದ ಮೀಮಾಂಸಾಶಾಸ್ತ್ರಕ್ಕೆ ಸಂಬಂಧಿಸಿದ ಮಾಧ್ವಭಾಷ್ಯ ವನ್ನು ಬರೆದ ಪ್ರಯುಕ್ತ ಅವರು ನಿಜವಾಗಿ ಸತ್ಯತೀರ್ಥರು ತಾನೇ?
ಗೋಪುಚ್ಛಗ್ರಹಣದ ಸಂಕೇತ
        ಸಾಮಾನ್ಯವಾಗಿ ಮಕ್ಕಳು, ನಾಯಿ, ಬೆಕ್ಕು ಮುಂತಾದ ಪಶುಗಳ ಬಾಲವನ್ನು ಹಿಡಿದುಕೊಳ್ಳುವುದಾದರೆ, ಶ್ರೀಮದಾಚಾರ್ಯರು ವಾಸುದೇವ ನಾಗಿದ್ದಾಗ ಹಸುವಿನ ಬಾಲವನ್ನು ದೃಢವಾಗಿ ಹಿಡಿದುಕೊಂಡು ಅರಣ್ಯವಿಡೀ ಸಂಚರಿಸಿ ಬಂದಿದ್ದರು. ಆ ಮೂಲಕ ಅವರು ನೀಡಿದ ಸಾಂಕೇತಿಕ ಸಂದೇಶ ವೆಂದರೆ, ಹಸು ಗೋ ಎನಿಸುತ್ತಿದ್ದು ವೈದಿಕಸಾಹಿತ್ಯವನ್ನು ಸಂಕೇತಿಸುತ್ತದೆ. ಮುಂದೆ ತಾವು ಅಂತಹ ಗೋವಿನ ಬಾಲ ಹಿಡಿದುಕೊಂಡೇ ಅಂದರೆ ವೈದಿಕಸಾಹಿತ್ಯದ ಆಧಾರದಲ್ಲೇ ಸಂಚರಿಸುವೆವು ಹೊರತು ಅದನ್ನು ಎಂದೂ ಉಲ್ಲಂಘಿಸುವುದಿಲ್ಲ. ಆದ್ದರಿಂದಲೇ ತಾವು ಏನೂ ಅಪಾಯವಿಲ್ಲದೆ ತಮ್ಮ ಗುರಿಯನ್ನು ಸಾಧಿಸಬಹುದಾಗಿದೆ ಕೂಡಾ - ಎಂಬುದಾಗಿ
- ಶ್ರೀ ಶ್ರೀ ವಿದ್ಯೇಶತೀರ್ಥರು
'ಅಹಂ ಬ್ರಹ್ಮಾಸ್ಮಿ' ಸಂದೇಶವನ್ನು ಬೆಳಗಿಸುವ
'ಅಹಂ ಬ್ರಹ್ಮಾಸ್ಮಿ'
        ಬೃಹದಾರಣ್ಯಕೋಪನಿಷತ್ತಿನ 'ಅಹಂ ಬ್ರಹ್ಮಾಸ್ಮಿ' ಸಂದೇಶವನ್ನು ಶಾಸ್ತ್ರೀಯವಾಗಿ ವಿಮರ್ಶಿಸುವ 'ಅಹಂ ಬ್ರಹ್ಮಾಸ್ಮಿ' ಎಂಬ ಶ್ರೀಪಾದರ ಕೃತಿಯೂ ಗುರುಗಳಾದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರ ಪೀಠಾರೋಹಣ ಅಮೃತೋತ್ಸವದ ಸಂದರ್ಭದಲ್ಲಿ ಎರಡನೇ ಆವೃತ್ತಿಯಾಗಿ ಬೆಳಕುಕಂಡಿರುವಂತಹದ್ದು. 'ವ್ಯಾಸನಕೆರೆ ಐತರೇಯ ಪ್ರಕಾಶನ' ದ ಮೂಲಕ ಬೆಳಕುಕಂಡಿರುವ ಈ ಪುಟ್ಟ ಕೃತಿಯಲ್ಲಿ 'ಅಹಂ ಬ್ರಹ್ಮಾಸ್ಮಿ' ಎಂಬ ಉಪನಿಷತ್ ಸಂದೇಶ ವನ್ನು ಕೇಂದ್ರವಾಗಿಟ್ಟುಕೊಂಡು ಜೀವಬ್ರಹ್ಮೈಕ್ಯದಲ್ಲಿ ಶಾಸ್ತ್ರಕ್ಕೆ ತಾತ್ಪರ್ಯವಿಲ್ಲ ಎಂದು ಸಮರ್ಥಿಸಲಾಗಿದೆ.
        ಪ್ರಾರಂಭದಲ್ಲಿ ಅಹಂಕಾರದಲ್ಲಿ ನಾಲ್ಕು ಮುಖಗಳನ್ನು ಗುರುತಿಸಿ, ಅವುಗಳಲ್ಲಿಯ ನಾಲ್ಕನೇ ಮುಖ ತಾಮಸ ಹಾಗೂ ಆತ್ಮನ ಅಂತಸ್ತನ್ನು ಇಳಿಸುವ, ಹೆಮ್ಮೆ ಬರಿಸದ 'ಶೂನ್ಯ' ಎನ್ನುವ ಅಹಂಕಾರ ಎಂದು ಪರಿಚಯಿಸಿಕೊಟ್ಟು ಅದರ ಪರಿಣಾಮವಾಗಿಯೇ 'ನಾನು ನಿರ್ಗುಣ ನಿರಾಕಾರನಾದ ಉದಾತ್ತ ಚೇತನ', 'ಬ್ರಹ್ಮಚೈತನ್ಯ್' ಇತ್ಯಾದಿಯಾಗಿ ಅದ್ವೈತ ಭಾವನೆಯನ್ನು ಪ್ರಸ್ತಾವಿಸಿ, ಅದರ ಹಿನ್ನೆಲೆಯಲ್ಲೇ 'ಅಹಂ ಬ್ರಹ್ಮಾಸ್ಮಿ' ಉಪನಿಷತ್ತಿನ ಸಂದೇಶದ ಆಂತರ್ಯವನ್ನು ವಿಮರ್ಶಿಸಲಾಗಿದೆ.
        'ದ್ವಿತೀಯಾದ್ವೈ ಭಯಂ ಭವತಿ' - ಎಂಬ ಉಪನಿಷತ್ತಿನ ನೈಜ ಆಶಯವನ್ನು ಸ್ಪಷ್ಟಪಡಿಸಿ, ಆ ಸಂದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಅದರ ಹಿನ್ನೆಲೆಯಲ್ಲಿ 'ಅಹಂ ಬ್ರಹ್ಮಾಸ್ಮಿ' ಎಂಬ ಸಂದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದೆಂದು ಸ್ಪಷ್ಟಪಡಿಸಲಾಗಿದೆ. ಶ್ರೀ ಮಧ್ವರು ಪ್ರತಿಪಾದಿಸಿದಂತೆ ಉಪನಿಷತ್ತಿನ ಪೂರ್ವಾಪರ ಮಾತುಗಳಿಗೆ ಹೊಂದಿಕೆ ಯಾಗುವಂತೆ 'ಅಹಂ ಬ್ರಹ್ಮಾಸ್ಮಿ' ಸಂದೇಶದ ನೈಜ ಅರ್ಥವನ್ನು ಪ್ರ್ತಿಪಾದಿಸಲಾಗಿದೆ. ಪರಮಾತ್ಮನು ಅಳವಡಿಸಿಕೊಂಡ 'ಅಹಂ ಬ್ರಹ್ಮಾಸ್ಮಿ' ಎಂಬ ಅನುಸಂಧಾನವನ್ನು ಜೀವರು ಅಳವಡಿಸಿಕೊಂಡಲ್ಲಿ 'ಕಲಾ' ಎಂಬ ಪತಿವ್ರತೆಯ ಅನುಸಂಧಾನವನ್ನು ವಿಹ್ವಲಾ ಎಂಬ ವೇಶ್ಯಾಸ್ತ್ರೀ ಅಳವಡಿಸಿಕೊಳ್ಳಲು ತೊಡಗಿದಂತೆ ಹಾಸ್ಯಾಸ್ಪದವಾಗುವುದೆಂದು ಕಥೆಯ ಮೂಲಕ ವಿವರಿಸಲಾಗಿದೆ.
        'ಅಹಂ ಮನುರಭವಂ ಸೂರ್ಯಶ್ಚ' ಎಂಬ ವಾಮದೇವಋಷಿಗಳ ಅನುಸಂಧಾನದ ಆಂತರ್ಯವನ್ನು ವಿವೇಚಿಸಲಾಗಿದೆ. 'ಸುಸ್ವನ' ಎಂಬ ಗಿಳಿ ಅವಾಸ್ತವವಾದ ಗಂಡಬೇರುಂಡ ಪಕ್ಷಿಯಂತೆ ತಾನು ಆಗಬೇಕೆಂಬುದು ಸರ್ವಸ್ವವನ್ನೂ ಕಳಕೊಂಡಂತೆ ಅವರು ಪ್ರತಿಪಾದಿಸುವಂತೆ 'ಅಹಂ ಬ್ರಹ್ಮಾಸ್ಮಿ' ಎಂಬ ಅನುಸಂಧಾನದಿಂದ ನಿರ್ಗುಣ, ನಿರಾಕಾರ ಬ್ರಹ್ಮನ ಭಾವವನ್ನು ಹೊಂದಿ ಎಲ್ಲವನ್ನೂ ಕಳಕೊಳ್ಳಬೇಕಾದೀತೆಂದು ಕಥೆಯ ಮೂಲಕ ಮನವರಿಕೆ ಮಾಡಲಾಗಿದೆ. ಭಗವಂತನ ನಿರ್ಗುಣ ನಿರಾಕಾರ ಎಂದು ಹೇಳುವ ಶಾಸ್ತ್ರಗಳ ಮಾತುಗಳನ್ನು ಹೇಗೆ ಹೊಂದಿಸಬೇಕೆಂದು ತೋರಿಸಿಕೊಡಲಾಗಿದೆ. ಕೊನೆಯಲ್ಲಿ 'ಚರಮಭಾರತಿ' ಯಾಗಿ '.....ದಾಸೋಹಂ' ಎನ್ನುವ ಅನುಸಂಧಾನರೂಪ ರಾಜಮಾರ್ಗದಲ್ಲಿ ನಡೆಯುವುದು ನಮ್ಮೆಲ್ಲರ ಗುರಿಯಾಗಬೇಕು. 'ಅಹಂ ಬ್ರಹ್ಮಾಸ್ಮಿ' ಅನುಸಂಧಾನ ಮಾರ್ಗದಿಂದ ಯಾವ ಆಧ್ಯಾತ್ಮಿಕ ಸದ್ಗ್ರಂಥಗಳಲ್ಲೂ ನಿರ್ಗುಣ ನಿರಾಕಾರ ದೇವತ್ವವನ್ನು ಪಡೆದವರ ನಿದರ್ಶನವಿಲ್ಲದಿರುವುದರಿಂದ ಸಂದಿಗ್ಧವಾದ 'ಅಹಂ ಬ್ರಹ್ಮಾಸ್ಮಿ' ನಾನೇ ನಿರ್ಗುಣ ನಿರಾಕಾರ ದೇವರಾಗಿದ್ದೇನೆ ಎನ್ನುವ ತಾಮಸ ಅನುಸಂಧಾನಮಾರ್ಗ ನಮ್ಮದಾಗದಿರಲಿ ಎಂದು ಹಾರೈಸಲಾಗಿದೆ.
        ಬೃಹದಾರಣ್ಯಕದ 'ಅಹಂ ಬ್ರಹ್ಮಾಸ್ಮಿ' ಎಂಬ ಮಾತನ್ನು ಶಾಂಕರಭಾಷ್ಯದಲ್ಲೂ ಅರ್ಥಾಂತರಪರವಾಗಿ ವ್ಯಾಖ್ಯಾನಿಸಿದ್ದನ್ನು ಉದಾಹರಿಸಿ ಅದರಿಂದ ಅವರು ತೋರಿಸುವ ಅರ್ಥದಲ್ಲಿ 'ಅಹಂ ಬ್ರಹ್ಮಾಸ್ಮಿ' ಸಾವಕಾಶವೇ ಹೊರತು ನಿರಾಕಾಶವಲ್ಲ ಎಂದು ಉಪಸಂಹರಿಸಲಾಗಿದೆ.
        ಹೀಗೆ 'ಅಹಂ ಬ್ರಹ್ಮಾಸ್ಮಿ' ಕೃತಿ ಬೃಹದಾರಣ್ಯಕೋಪನಿಷತ್ತಿನ ಆ ಸಂದೇಶದ ನೈಜ ಆಂತರ್ಯವನ್ನು ಸ್ಪಷ್ಟಪಡಿಸುವ ಮೂಲಕ ಜೀವಬ್ರಹ್ಮೈಕ್ಯವನ್ನು ಸಮರ್ಥವಾಗಿ ನಿರಾಕರಿಸುವ ಕೃತಿ ಎನಿಸಿದೆ.
        ಈ ಕೃತಿಯ ಉಪಸಂಹಾರದ ಒಂದು ಪ್ರಮೇಯ

ಅವರ ದೃಷ್ಟಿಯಿಂದಲೂ 'ಅಹಂ ಬ್ರಹ್ಮಾಸ್ಮಿ' ಸಾವಕಾಶ
        ಹೆಚ್ಚೇಕೆ ಕೆಲವು ಜಗದ್ಗುರುಗಳು
ತ್ವಂ ಬ್ರಹ್ಮ ತ್ವಂ ಯಜ್ಞಃ ತ್ವಂ ಲೋಕ ಇತಿ
ಸುಪುತ್ರಃ ಪ್ರತ್ಯಾಹ ಅಹಂ ಬ್ರಹ್ಮ ಅಹಂ ಯಜ್ಞ ಅಹಂ ಲೋಕಃ ಇತಿ
- ಬೃಹದಾರಣ್ಯಕ
        ಎನ್ನುವಲ್ಲಿ ತ್ವಂ ಬ್ರಹ್ಮ - ನೀನು ಪರಬ್ರಹ್ಮ, ಅಹಂ ಬ್ರಹ್ಮ - ನಾನು ಪರಬ್ರಹ್ಮ - ಈ ರೀತಿಯಾಗಿ ಅರ್ಥೈಸದೆ ತ್ವಂ ಬ್ರಹ್ಮ - ನೀನು (ಪುತ್ರನು) ವೇದಾಧ್ಯಯನ ಮಾಡುವವನು ಆಗಬೇಕು. ಅಹಂ ಬ್ರಹ್ಮ - ನಾನು (ಪುತ್ರನು) ವೇದಾಧ್ಯಯನ ಮಾಡುವೆನು - ಈ ರೀತಿಯಾಗಿ ಅರ್ಥವನ್ನು ಹೇಳುವರು.*
        ಆದುದರಿಂದ ಅವರ ದೃಷ್ಟಿಯಿಂದಲೂ 'ಅಹಂ ಬ್ರಹ್ಮಾಸ್ಮಿ' ಎನ್ನುವ ವಾಕ್ಯವು ಸಾವಕಾಶ - ಬೇರೆ ಅರ್ಥದಲ್ಲಿ ಇರುವಂತಹದ್ದು ಎನ್ನುವುದು ಸ್ಪಷ್ಟವಾಗುವುದು.
        ಹೀಗಿರುವಾಗ 'ಅಹಂ ಬ್ರಹ್ಮಾಸ್ಮಿ' ಎನ್ನುವಲ್ಲೂ ನಾನು - ಜೀವ ಪರಮಾತ್ಮನಾಗಿದ್ದೇನೆ ಎನ್ನುವ ಅರ್ಥವನ್ನು ಕರಾರುವಾಕ್ಕಾಗಿ ಹೇಗೆ ಹೇಳಲು ಸಾಧ್ಯ?

                                *                                            *                                        *
        *    ಬೃಹದಾರಣ್ಯಕೋಪನಿಷತ್ತಿನ (೧-೫-೧೭) 'ಅಥಾತಃ ಸಂಪ್ರತ್ತಿರ್ಯಾದಾ ಪೈಷ್ಯನ್ ಮನ್ಯ - ತೇಥ ಪುತ್ರಮಾಹ ತ್ವಂ ಬ್ರಹ್ಮ ತ್ವಂ ಯಜ್ಞಸ್ತ್ವಂ ಲೋಕ ಇತಿ ಸ ಪುತ್ರಃ ಪ್ರತ್ಯಾಹಾಹಂ ಬ್ರಹ್ಮಾಹಂ ಯಜ್ಞೋಹಂ ಲೋಕ ಇತಿ' ಎಂಬ ಸಂದೇಶದಲ್ಲಿಯ 'ತ್ವಂ ಬ್ರಹ್ಮ' ಎಂಬ ಮಾತಿಗೆ ಶಾಂಕರಭಾಷ್ಯದಲ್ಲಿ 'ಯೋಧ್ಯಯನವ್ಯಾಪಾರೋ ಮಮ ಕರ್ತವ್ಯ ಆಸೀದೇತಾವಂತಂ ಕಾಲಂ ವೇದವಿಷಯಃ, ಸ ಇತ ಊರ್ಧ್ವಂ ತ್ವಂ ಬ್ರಹ್ಮ ತ್ವತ್ಕರ್ತೃಕೋಸ್ತ್ವಿತ್ಯರ್ಥಃ' ಎಂದು ವ್ಯಾಖ್ಯಾನಿಸಲಾಗಿದೆ.
ತಂದೆಯ ಆದೇಶಕ್ಕೆ ಪುತ್ರನು ಉತ್ತರಿಸುತ್ತ 'ಅಹಂ ಬ್ರಹ್ಮ' ಎಂದು ಹೇಳಿರುವ ಮಾತಿಗೂ ಅದೇ ಅಭಿಪ್ರಾಯ ಎಂಬಂತೆ ಶಾಂಕರಭಾಷ್ಯದಲ್ಲಿ ವ್ಯಾಖ್ಯಾನಿಸಲಾಗಿದೆ 'ಸ ಚ ಸರ್ವಂ ತಥೈವ ಪ್ರತಿಪನ್ನವಾನ್ ಪುತ್ರೋನುಷ್ಟತ್ವಾತ್'


   ಕಾಠಕೋಪನಿಷತ್ತಿನ ತತ್ತ್ವಗಳ ಸೌರಭವನ್ನು ಹರಡುವ
ಕಾಠಕತತ್ತ್ವಮಾಲಾ
        ಶ್ರೀ ವಿದ್ಯೇಶತೀರ್ಥರು ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರ ಪ್ರಥಮಾರಾಧನೆಯ ಪುಣ್ಯಕಾಲದಲ್ಲಿ ಅವರ ಅಂತರ್ಗತ ಮಧ್ವಾಂತರ್ಗತ ಶ್ರೀ ವೇದವ್ಯಾಸಭಿನ್ನ ಶ್ರೀರಾಮಚಂದ್ರನ ಪಾದಾರ ವಿಂದಗಳಲ್ಲಿ ಸಮರ್ಪಿಸಿರುವ 'ಕಾಠಕತತ್ತ್ವಮಾಲೆ' ಕಾಠಕೋಪನಿಷತ್ತಿನ ಹತ್ತು ತತ್ತ್ವಗಳನ್ನು ಪೋಣಿಸಿ ರಚಿಸಿರುವ ಕೃತಿಯಾಗಿದೆ.
        ಈ ಹತ್ತು ತತ್ತ್ವಗಳಲ್ಲಿ ವಿಷ್ಣುಸರ್ವೋತ್ತಮತ್ವ, ತಾರತಮ್ಯ, ಜೀವೇಶ್ವರಭೇದ, ಭಗವಂತನ ರೂಪ ಗುಣಾದಿಗಳಲ್ಲಿ ಅಭೇದ - ಮುಂತಾದ ಮಾಧ್ಯಪ್ರಮೇಯಗಳು ಉಪನಿಷತ್ತಿನ ಮಾತುಗಳಲ್ಲಿ ಹೇಗೆ ಸ್ಪಷ್ಟವಾಗಿ ಪ್ರತಿಪಾದಿತಗಳಾಗಿವೆ ಎಂದು ಸಮರ್ಥಿಸಲಾಗಿದೆ.
        ಏಳನೇ ತತ್ತ್ವವಾಗಿ 'ತ್ರಿಭಿರೇತ್ಯ ಸಂಧಿಂ ತ್ರಿಕರ್ಮಕೃತ್ ತರತಿ ಜನ್ಮಮೃತ್ಯೂ' ಎಂಬ ಉಪನಿಷತ್ತಿನ ಸಂದೇಶ ಏಳು ಅರ್ಥಗಳಲ್ಲಿ ಹೇಗೆ ತೆರೆದುಕೊಳ್ಳಬಲ್ಲವೆಂದು ತೋರಿಸಿ ಕೊಡಲಾಗಿದೆ.
        ಅದರಲ್ಲಿ ಉಲ್ಲೇಖಗೊಂಡ ಒಂದು ತತ್ತ್ವ:

ಅದ್ವೈತಬ್ರಹ್ಮಭಾವವು ಮುಕ್ತಿಯಲ್ಲ
        ಬ್ರಹ್ಮಜ್ಞಾನಿಯಾದನಚೀಕೇತನಿಗೆ ವೈಕುಂಠಸದನವು ತೆರೆದಿದೆ - 'ವಿವೃತಂ ಸದ್ಮ ನಚಿಕೇತಸಂ ಮನ್ಯೇ' ಎಂದು ಯಮದೇವನು ಉದ್ಗರಿಸಿರುವನು.
        ಇಲ್ಲಿ 'ವೈಕುಂಠಸದನ' ಎಂದು ಮುಕ್ತಿಯನ್ನು ಉಲ್ಲೇಖಿಸಿರುವುದರಿಂದ ಕೆಲವು ವಾದಿಗಳು ಅಭಿಪ್ರಾಯಪಡುವಂತೆ ಬ್ರಹ್ಮಜ್ಞಾನಿಗೆ ದೊರಕುವ ಮುಕ್ತಿ ಅದ್ವೈತಬ್ರಹ್ಮ ಭಾವರೂಪವಾಗಲೀ, ಯಾವುದೇ ಬಗೆಯ ದೇಹದ ಸಂಪರ್ಕವೇ ಇಲ್ಲದ ಸ್ಥಿತಿಯಾಗಲೀ ಅಲ್ಲ ಎಂದು ಸ್ಪಷ್ಟವಾಗುವುದು.
        ಜ್ಞಾನಾನಂದಾತ್ಮಕ ದೇಹಸಂಪನ್ನನಿಗಷ್ಟೇ ಸದನದ ಆವಶ್ಯಕತೆ ಇರುವುದರಿಂದ ಬ್ರಹ್ಮಜ್ಞಾನಿಯಾದ ನಚಿಕೇತನಿಗೆ ವೈಕುಂಠಸದನವನ್ನು ಫಲರೂಪವಾಗಿ ಉಲ್ಲೇಖಿಸಿರುವ ಉಪನಿಷತ್ತಿನ ಪ್ರಕಾರ ಮಾಧ್ವಸಿದ್ಧಾಂತದಲ್ಲಿ ಒಪ್ಪಲಾಗುವಂತೆ ಜ್ಞಾನಾನಂದ ಶರೀರವನ್ನು ಹೊಂದಿ ಅದರ ಮೂಲಕ ಸ್ವರೂಪಸುಖವನ್ನು ಅನುಭವಿಸುವುದೇ ಮುಕ್ತಿ ಹೊರತು ನಿರಾಕಾರನಾದ ಬ್ರಹ್ಮನ ತಾದಾತ್ಮ್ಯವನ್ನು ಹೊಂದುವುದಾಗಲೀ, ಯಾವುದೇ ದೇಹವನ್ನು ಹೊಂದಿರದ ಸ್ಥಿತಿಯಗಲೀ ಮುಕ್ತಿ ಅಲ್ಲ ಎಂದು ಒಪ್ಪಿಕೊಂಡಂತಾಗಿದೆ.


ಕಾಥಕೋಪನಿಷತ್ತಿನ ತತ್ತ್ವಗಳಿಗೆ ವೈಚಾರಿಕ ಮೆರಗು ನೀಡುವ
ಶ್ರೀಕಠತತ್ತ್ವಕೌಸ್ತುಭ
        'ಶ್ರೀಕಾಠಕತತ್ತ್ವಮಾಲಾ' ಎಂಬ ಕೃತಿ ಕಾಠಕೋಪನಿಷತ್ತಿನ ಕೆಲವು ತತ್ತ್ವಗಳ ಮೇಲೆ ಬೆಳಕು ಚೆಲ್ಲುತ್ತಿದ್ದರೆ, ಕಾಠಕೋಪನಿಷತ್ತಿನ ಮತ್ತೆ ಕೆಲವು ತತ್ತ್ವಗಳಿಗೆ ಮೆರಗು ನೀಡಿ ಮೆರೆಸುವುದಕ್ಕಾಗಿ ಹೊರಟ ಕೃತಿ 'ಶ್ರೀಕಠತತ್ತ್ವಕೌಸ್ತುಭ'
        ಕಾಠಕೋಪನಿಷತ್ತಿನಲ್ಲಿ ಪ್ರಸ್ತುತಗಳಾದ ತಾರತಮ್ಯವೇ ಮುಂತಾದ ಕೆಲವು ವಿಚಾರಗಳ ಕುರಿತೂ, ಕಾಠಕೋಪನಿಷತ್ತಿನ ಕೆಲವು ಮಾತುಗಳ ಔಚಿತ್ಯದ ಕುರಿತೂ ಒಟ್ಟು ಹತ್ತೊಂಬತ್ತು ಅಂಶಗಳಲ್ಲಿ ಈ ಕೃತಿ ಚಿಂತನೆ ನಡೆಸುತ್ತಿದೆ.
        'ಶ್ರೀಕಾಠಕತತ್ತ್ವಮಾಲಾ' ದಲ್ಲಿ ವಿಮರ್ಶಿಸಲ್ಪಟ್ಟಿದ್ದ ತಾರತಮ್ಯ ಮುಂತಾದ ಕೆಲವು ವಿಚಾರಗಳು ಈ ಕೃತಿಯಲ್ಲೂ ವಿಮರ್ಶಿಸಲ್ಪಡುತ್ತಿದೆಯಾದರೂ ಕೆಲವು ಹೊಸ ಅಂಶಗಳ ಸಂಯೋಜನೆಯಿಂದಾಗಿ ಪುನರುಕ್ತಿದೋಷಕ್ಕೆ ಎಡೆ ಇರದು. 'ಉಪನಿಷತ್ತಿನ ಸಾರ' ಹಾಗೂ 'ಉಪನಿಷತ್ತಿನ ಪ್ರಮುಖ ಪ್ರಮೇಯಗಳು' - ಎಂದು ಪ್ರಾರಂಭದಲ್ಲಿ ನೀಡಿರುವ ವಿವರಣೆಯಿಂದಾಗಿ ಸಾಮಾನ್ಯ ಜಿಜ್ಞಾಸುವಿಗೂ ಕೃತಿಯಲ್ಲಿ ಪ್ರವೇಶಿಸಬಹುದಾಗಿದೆ.
        ಈ ಕೃತಿಯಲಿ ವಿಮರ್ಶಿಸಲಾದ ಒಂದು ಪ್ರಮೇಯ:

ಅದ್ವೈತಜ್ಞಾನಿಯ ಉಪದೇಶದಿಂದ ಸಾಕ್ಷಾತ್ಕಾರ ದೊರಕದು
        'ಅನನ್ಯಪ್ರೋಕ್ತೇ ಗತಿರತ್ರ ನಾಸ್ತಿ ಪ್ರೋಕ್ತಾನ್ಯೇನೈವ ಸುಜ್ಞಾನಾಯ ಪ್ರೇಷ್ಠ'
        ತನಗಿಂತ ಬೇರೆಯಾಗಿ ಭಗವಂತನಿರುವನೆಂದು ಒಪ್ಪದವನ ಉಪದೇಶದಿಂದ (ನ ವಿದ್ಯತೇ ಅನ್ಯಃ ಈಶ್ವರಃ ಯಸ್ಯ ಸಃ ಅನನ್ಯಃ, ತೇನ ಪ್ರೋಕ್ತೇ) ಭಗವಂತನ ಅಪರೋಕ್ಷಜ್ಞಾನವು ದೊರಕುವುದಿಲ್ಲ. (ಗತಿರತ್ರ ನಾಸ್ತಿ) ಎಂದು ಎಚ್ಚರಿಸುತ್ತಿರುವ ಉಪನಿಷತ್ತಿನ ಈ ಮಾತಿನಿಂದಲೇ ಅಂತಹವನ ಉಪದೇಶದಿಂದ ಯಾಕೆ ಅಪರೋಕ್ಷಜ್ಞಾನವಿಲ್ಲ ಎಂಬುದಕ್ಕೂ ಕಾರಣವನ್ನು ಸೂಚಿಸಿಕೊಡಲಾಗಿದೆ - 'ಅನನ್ಯಪ್ರೋಕ್ತೇ ಗತಿರತ್ರ ನಾಸ್ತಿ' , 'ಅನನ್ಯ ಇತಿ ಪ್ರಉಕ್ತಃ ಯೇನ ಸಃ ಅನನ್ಯಪ್ರೋಕ್ತಃ' - ಭಗವಂತನು ಜೀವನಿಗಿಂತ ಅಭಿನ್ನ ಎಂದು ಹೇಳುವ ವ್ಯಕ್ತಿ ಎಂದರ್ಥ. 'ಅನನ್ಯ ಪ್ರೋಕ್ತೇ...' ಎಂಬಲ್ಲಿಯ 'ಪ್ರ' ವರ್ಣಕ್ಕೆ ಪ್ರಕೃಷ್ಟನಾದ ಭಗವಂತ ಎಂಬ ಅರ್ಥ. 'ಅಕಯ ಪ್ರವಿಭೂ ಸಂಭೂಮಸಖಹಾ ವಿಷ್ಣುವಾಚಕಾಃ' ಎಂಬ ಏಕಾಕ್ಷರಕೋರಕೋಶ ಪ್ರ ಅಕ್ಷರ ಭಗವಂತನ ನಾಮ ಎಂದು ತಿಳಿಸಿದೆ. ಆದುದರಿಂದ ಪ್ರಎನಿಸುವ ಭಗವಂತನು 'ಅನನ್ಯ' ಎಂದು ಯಾರಿಂದ ಹೇಳಲ್ಪಡುವನೋ ಅವನು 'ಅನನ್ಯ ಪ್ರೋಕ್ತ' ಎನಿಸುವನು. ಅವನಲ್ಲಿ ಭಗವಂತನ ವಿಷಯದಲ್ಲಿ ಸಾಕ್ಷಾತ್ಕಾರ ರೂಪವಾದ ಜ್ಞಾನ ಇಲ್ಲ - 'ಗತಿರತ್ರ ನಾಸ್ತಿ'
        ಹೀಗೆ ಉಪದೇಶಕನಿಗೇ ಭಗವಂತನ ಅಪರೋಕ್ಷಜ್ಞಾನ ಬರದಿರುವುದರಿಂದ ಅಂತಹವನ ಉಪದೇಶದಿಂದ ಶಿಷ್ಯನಿಗೆ ಅಪರೋಕ್ಷಜ್ಞಾನ ಉಂಟಾಗುವುದಾದರೂ ಹೇಗೆ?
        ಅದ್ವೈತಜ್ಞಾನಿಗಳಿಗೆ ಬ್ರಹ್ಮನ ಅಪರೋಕ್ಷಜ್ಞಾನವಿಲ್ಲ ಎಂಬುದಕ್ಕೆ ಅಚ್ಯುತ ಪ್ರೇಕ್ಷಾಚಾರ್ಯರ ಗುರುಗಳ ಅನುಭವವೇ ಪ್ರಮಾಣ. ಮಧ್ವವಿಜಯದಲ್ಲಿ (೪-೧೧)ಉಲ್ಲೇಖಗೊಂಡಂತೆ ಅಚ್ಯುತ ಪ್ರೇಕ್ಷಾಚಾರ್ಯರ ಗುರುಗಳು ತಾವು ದೇಹವನ್ನು ತ್ಯಜಿಸುವ ಮೊದಲು ಶಿಷ್ಯನನ್ನು ಏಕಾಂತದಲ್ಲಿ ಕರೆದು -
ಯದೇತದಾತ್ಮೈಕ್ಯಮುಪಾಸ್ತಿಚೋದಿತಂ
ನ ಮೇ ಗುರುರಪ್ರಪರೋಕ್ಷತಾಂ ಗತಮ್ |
ಪುರಾತನಾನಾಮಪಿ ಸೌಮ್ಯ ಕುತ್ರಚಿತ್
ತತೋ ಮುಕುಂದಂ ಭಜ ಸಂವಿದೇ ಮುದಾ ||
        ''ಉಪಾಸನೆ ನಡೆಸಲು ಮಾಯಾವಾದ ವಿಧಿಸಿರುವ 'ಆತ್ಮೈಕ್ಯ' ನನಗಾಗಲೀ, ನನ್ನ ಗುರುಗಳಿಗಾಗಲೀ ಅಥವಾ ನಮ್ಮ ಪ್ರಾಚೀನರಲ್ಲಿ ಯಾರೊಬ್ಬರಿಗಾಗಲೀ ಎಂದೂ ಸಾಕ್ಷಾತ್ಕಾರವೇ ಆಗಿಲ್ಲ. ಆದುದರಿಂದ ನಿಜವಾದ ತತ್ತ್ವಜ್ಞಾನಕ್ಕಾಗಿ ಮುಕುಂದನನ್ನೇ ಭಜಿಸು'' ಹೀಗೆ ಅದ್ವೈತತತ್ತ್ವದ ಗುರುಗಳಿಗೇ ಅಪ್ರೋಕ್ಷಜ್ಞಾನವಿಲ್ಲವೆಂದ ಮೇಲೆ ಅಂತಹವರ ಉಪದೇಶದಿಂದ ಶಿಷ್ಯರಿಗೂ ಅಪರೋಕ್ಷಜ್ಞಾನ ಉಂಟಾಗದೆಂಬುದು ಕೈಮುತ್ಯನ್ಯಾಯದಿಂದ ಸಿದ್ಧವಾಗಬಲ್ಲದು.

ಗೀತೆಯ ಪ್ರಮುಖ ಪ್ರಮೇಯಗಳ ಬಗ್ಗೆ ಸೌರಭ ಬೀರುವ
ಗೀತಾಸಾರಸೌರಭ
        ಭಗವದ್ಗೀತೆಯ 'ಲೋಕಸಂಗ್ರಹ' , 'ಕ್ಷೇತ್ರಜ್ಞ' (ಮೊದಲಿನ 'ಎರಡುಮಾತು'ಗಳಲ್ಲಿ) 'ಪುರುಷೋತ್ತಮ' ಕರ್ಮಯೋಗದ ರಹಸ್ಯ, 'ವಾಸುದೇವಃ ಸರ್ವಂ...' ಮಮೈವಾಂಶೋ ಜೀವಲೋಕೇ' ಶರಣಾಗತಿಸಂದೇಶ, ಅಭಿಮಾನತ್ಯಾಗವೇ ಜೀವನಕೌಶಲ, ಜೀವಾತ್ಮನ ಅಮರತ್ವ, ಭೀಷ್ಮಾದಿಗಳ ಹನನವು ಧರ್ಮ, 'ಸ್ವಧರ್ಮೇ ನಿಧನಂ ಶ್ರೇಯಃ', 'ವಿಭೂತಿ ಯೋಗದ ಸಂದೇಶ' (ಕೊನೆಯ ಐದು ವಿಚಾರಗಳು ಪರಿಶಿಷ್ಟದಲ್ಲಿ) - ಹೀಗೆ ಪ್ರಮುಖ ಪ್ರಮೇಯಗಳ ಸೌರಭವನ್ನು ಪಸರಿಸಲು ಹೊರಟ 'ಗೀತಾಸಾರಸೌರಭ' ದಿಂದ ಗೀತೆಯ ಪ್ರಮುಖ ಪ್ರಮೇಯಗಳ ವಿಮರ್ಶೆ ಯಿಂದಾಗಿ ಸಮಗ್ರಗೀತೆಯ ಮೇಲೆಯೇ ಬೆಳಕುಚೆಲ್ಲಲ್ಪಟ್ಟಂತಾಗಿದೆ.ಗೀತೆಯ ಸಾರ್ವಕಾಲಿಕತೆ ಹಾಗೂ ಕ್ಷೀರದ ಹೋಲಿಕೆಯ ಔಚಿತ್ಯ - ಈ ಎರಡು ವಿಚಾರಗಳನ್ನು ಮೊದಲು ಪ್ರಸ್ತುತಪಡಿಸಿರುವುದರಿಂದ ಗೀತೆಯ ವೈಶಿಷ್ಟ್ಯವನ್ನು ಪ್ರತಿಪಾದಿಸಿದಂತಾಗಿದೆ.
        'ಗೀತಾಸಾರಸೌರಭ' ದ ಒಂದು ಸೌರಭಃ

ದುಷ್ಕಾಮಕರ್ಮದ ತ್ಯಾಗಕ್ಕೆ ಕರೆ
        ಶ್ರೀಕೃಷ್ಣನು ಗೀತೆಯಲ್ಲಿ ಎಲ್ಲೂ ನಿಷ್ಕಾಮಕರ್ಮವನ್ನು ಆಚರಿಸಲು ತಿಳಿಸಲಿಲ್ಲ. ದುಷ್ಕಾಮಕರ್ಮವನ್ನು ಮಾತ್ರ ಮಾಡಬಾರದೆಂದು ತಿಳಿಸಿರುವನು.
        'ಯೋಗಸ್ಠಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ....' ಎನ್ನುವ ಮಾತಿಗೆ ಮನೆ, ಮಡದಿ, ಧನ, ಕನಕಾದಿ ಕ್ಷುದ್ರಫಲಗಳ ಆಸೆಯನ್ನು ತೊರೆದು ಕರ್ಮವನ್ನು ಮಾಡು ಎಂಬ ಅರ್ಥವೇ ಹೊರತು ಜ್ಞಾನ, ಭಕ್ತಿ, ಮುಕ್ತಿ ಮೊದಲಾದ ಮಹಾಫಲಾಕಾಂಕ್ಷೆಯನ್ನೂ ತೊರೆದು ಕರ್ಮ ಮಾಡಬೇಕೆಂದರ್ಥವಲ್ಲ.
        ಕರ್ಮ ಮಾಡುವಾಗ ಕಾಮನಾತ್ಯಾಗ ಮಾಡಬೇಕೆನ್ನುವ ಮಾತಿಗೆ ಭಗವತ್ ಪ್ರೀತಿ, ಭಕ್ತಿ ಮೊದಲಾದ ಉದಾತ್ತ ಫಲಗಳ ಆಕಾಂಕ್ಷೆಯನ್ನೂ ತೊರೆಯಬೇಕೆಂದು ಅರ್ಥವಿಸುವುದು 'ಕುಡಿಯಬೇಡ' ಎನ್ನುವ ಮಾತಿಗೆ ಅಪೇಯವಾದ ಮದ್ಯ ಮೊದಲಾದವುಗಳನ್ನು ಕುಡಿಯಬೇಡವೆಂದು ಅರ್ಥೈಸದೆ ಪೇಯಗಳಾದ ಹಾಲು, ನೀರು, ತೀರ್ಥಾದಿಗಳನ್ನೂ ಕುಡಿಯಬೇಡ ಎಂದು ಅರ್ಥೈಸುವುದು ಹೇಗೆ ಅಪಹಾಸ್ಯಸ್ಪದವೋ ಹಾಗೆಯೇ ಹಾಸ್ಯಾಸ್ಪದವಾಗಬಲ್ಲದು.
        ಗಾಂಧಿ ತತ್ವಗಳನ್ನು ಸಂಕೇತಿಸುವ ಕಿವಿ, ಬಾಯಿ ಹಾಗೂ ನೇತ್ರಗಳನ್ನು ಮುಚ್ಚಿ ಕುಳಿತಿರುವ ಭಂಗಿಯಲ್ಲಿರುವ ಕಪಿಗಳ ಆಕೃತಿತ್ರಯವನ್ನು ಕಂಡು ಒಳ್ಳೆಯದನ್ನು ನುಡಿಯಬೇಡಿ, ನೋಡಬೇಡಿ ಎಂದು ಅರ್ಥೈಸಿಕೊಂಡರೆ ಗಾಂಧೀಜಿಯ ನಿಲುವಿಗೆ ಇದಕ್ಕಿಂತ ದೊಡ್ಡದಾದ ನಾವು ಎಸಗಬಲ್ಲ ಅಪಚಾರವೇನಿದೆ?
        ಶ್ರೀಕೃಷ್ಣನ 'ಸಂಗಂ ತ್ಯಕ್ತ್ವಾ...' ಎಂಬ ಮಾತಿಗೆ 'ಈಶ್ವರೋ ಮೇ ತುಷ್ಟತು' - ಈಶ್ವರನು ನನ್ನ ಬಗ್ಗೆ ಸಂತುಷ್ಟನಾಗಲಿ ಎನ್ನುವ ಫಲದಾಶೆಯನ್ನೂ ತೊರೆದು ಕರ್ಮಮಾಡಬೇಕೆಂದು ಶಂಕರರು ಅರ್ಥೈಸಿ ಕೃಷ್ಣನ ಕರ್ಮಯೋಗಸಂದೇಶಕ್ಕೆ ದೊಡ್ಡ ಅಪಚಾರವೆಸಗಿದ್ದಾರೆ !!


ಗೀತೆಯ ಅರ್ಥಬಾಹುಲ್ಯದ ವೈಭವವನ್ನು ಸಾರುತ್ತಿರುವ
'ಗೀತಾರ್ಥವೈಭವ'
        'ದಶಾವರಾರ್ಥಂ ಸರ್ವತ್ರ....' ಮಹಾಭಾರತದ ಪ್ರತಿಯೊಂದು ಮಾತೂ ಕನಿಷ್ಠ ಪಕ್ಷ ಹತ್ತು ಅರ್ಥಗಳಲ್ಲಿ ತೆರೆದುಕೊಳ್ಳಬಲ್ಲದೆಂದು ಸಾರಿರುವ ಶ್ರೀ ಮಧ್ವರ ಸಂದೇಶಕ್ಕನುಗುಣವಾಗಿ ಮಹಾಭಾರತಪಾರಿಜಾತದ ಮಕರಂದದಂತಿರುವ ಭಗವದ್ಗೀತೆಯ 'ನಾಸತೋ ವಿದ್ಯತೇ ಭಾವೋ...' ಎಂಬ ಶ್ಲೋಕ ಹೇಗೆ ಅನೇಕಾರ್ಥಗಳಲ್ಲಿ ತೆರೆದುಕೊಳ್ಳ ಬಲ್ಲದೆಂಬುದನ್ನು ತೋರಿಸಹೊರಟ ಕೃತಿ 'ಗೀತಾರ್ಥವೈಭವ'
        'ನ ತ್ವೇವಾಹಂ...' ಇತ್ಯಾದಿ ಶ್ಲೋಕದಲ್ಲಿ ಸೂಚಿತವಾದ ಜೀವಬ್ರಹ್ಮಭೇದವು ಕಾಲ್ಪನಿಕ; ಜೀವಬ್ರಹ್ಮರ ಅಭೇದ್ವಷ್ಟೇ ಉಳಿಯುವುದೆಂಬ ಕೆಲವು ವಾದಿಗಳ ಪೂರ್ವಪಕ್ಷವನ್ನು ಪ್ರಸ್ತಾವಿಸಿ, ಅದರ ನಿರಾಕರಣೆ 'ನಾಸತೋ ವಿದ್ಯತೇ ಭಾವೋ...' ಎಂಬ ಶ್ಲೋಕದಲ್ಲಿ ಹೇಗೆ ಮಾಡಲಾಗಿದೆ? ಈ ವಾದಕ್ಕೆ ಪೋಷಕಗಳಾಗಿರುವ ಬ್ರಹ್ಮನ ನಿರ್ಗುಣವಾದ, ಜಗನ್ಮಿಥ್ಯಾತ್ವ, ಬ್ರಹ್ಮನೇ ಅಜ್ಞಾನದಿಂದ ಜೀವಭಾವ ಹೊಂದುವುದು - ಎಂಬ ವಿಚಾರ ಮುಂತಾದ ವಿಚಾರಗಳ ನಿರಾಕರಣೆಯನ್ನು ಆ ಶ್ಲೋಕಾರೂಢವಾಗಿಯೇ ಮಾಡಲಾಗಿದೆ.
        ಜಗತ್ತು ಅಸತ್ಯ, ಅವಿದ್ಯಾಮಾನ ಇತ್ಯಾದಿ ಶಾಸ್ತ್ರದಲ್ಲಿ ಬರುವ ಮಾತುಗಳ ಆಂತರ್ಯವನ್ನೂ ಆ ಶ್ಲೋಕದಿಂದಲೇ ಸೂಚಿಸಲಾಗಿದೆ.
        ಗುರುಹಿರಿಯರ ವಿರುದ್ಧ ಹೇಗೆ ಯುದ್ಧ ನಡೆಸಲಿ? ಎಂಬ ಅರ್ಜುನನ ಸಮಸ್ಯೆಗೆ ಪರ್ಹಾರವನ್ನೂ, ಮಾಧ್ವಸಿದ್ಧಾಂತದ ಮೋಕ್ಷದಲ್ಲಿ ಸ್ವರೂಪಸುಖವಿದೆ, ಭಗವಂತನ ಗುಣಗಳು ಆತನ ಸ್ವರೂಪಾತ್ಮಕ ಇತ್ಯಾದಿ ವಿಚಾರಗಳನ್ನೂ ಈ ಶ್ಲೋಕಾರೂಢವಾಗಿ ಪ್ರತಿಪಾದಿಸಲಾಗಿದೆ.
        ಈ ಕೃತಿಯಲ್ಲಿ ಪ್ರಸ್ತುತವಾದ ಒಂದು ವಿಚಾರ:

ಭಗವಂತನ ನಿಂದನೆ
        ಅಜ್ಞರು ಭಗವಂತನ ಗುಣಧರ್ಮಗಳೂ, ದೇಹಾದಿಗಳೂ ಆತನಿಂದ ವ್ಯತಿರಿಕ್ತಗಳೆಂದು ಪ್ರಸಾರ ಮಾಡುವ ಮುಲಕ ಆತನ ನಿಂದನೆಯನ್ನು ಮಾಡುವರೆಂದು ಶ್ರೀಕೃಷ್ಣನೇ 'ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಂ' - ಎನ್ನುವ ಗೀತಾವಚನದಲ್ಲಿ ಸೂಚಿಸಿರುವರು.
ಧರ್ಮದೇಹಾವತಾರಾದೇರ್ಭೇದದೃಷ್ಟಿಶ್ಚ ಸಂಕರಃ |
ಅವತಾರೇಷ್ವಿತಿ ಜ್ಞೇಯಮವಜ್ಞಾನಂ ಜನಾರ್ದನೇ ||
        ಎನ್ನುವ ಭವಿಷ್ಯತ್ ಪರ್ವದ ವಚನದಿಂದ ಶ್ರೀ ಮಧ್ವರು ಭಗವಂತನ ವಿಷಯದಲ್ಲಿ ನಡೆಸುವ ಅವಜ್ಞಾನದ ವಿರುದ್ಧ ಎಚ್ಚರಿಸಿರುವರು.
        ಆದ್ದರಿಂದ ಈ ಪ್ರಮೇಯವನ್ನು ಭಗವದ್ಗೀತೆಯ ಆ ಶ್ಲೋಕದಲ್ಲಿ ಹೀಗೆ ಅನುಸಂಧಾನ ನಡೆಸಬಹುದು -
        ಸತಃ - ಜ್ಞಾನಿಯು (ಮತೇ-ಮತದಲ್ಲಿ), ನಾ - ಪರಮಪುರುಷನಾದ ನಾರಾಯಣನು, ಭಾವಃ - ಸುಖಸ್ವರೂಪನೂ ಜ್ಞಾನಸ್ವರೂಪನೂ, ವಿದ್ಯತೇ - ಆಗಿರುವನು, ಅಸತಃ -ಅಜ್ಞಾನಿಯ (ಮತೇ - -ಮತದಲ್ಲಿ), ನಾ - ಪರಮಪುಷನು, ಅಭಾವಃ - ಜ್ಞಾನಭಿನ್ನನೂ ಸುಖಭಿನ್ನನೂ, ವಿದ್ಯತೇ - ಆಗಿರುವನು.
        ಈ ಜ್ಞಾನಿ-ಅಜ್ಞಾನಿಗಳ ಮತಗಳ ಬಗ್ಗೆ ಜ್ಞಾನವೃದ್ಧರ ಸಂಪ್ರದಾಯವನ್ನು ಜ್ಞಾನಿಗಳು ಅರಿತಿರುವರೆಂಉ - 'ಉಭಯೋರಪಿ ದೃಷ್ಟೋಂತಸ್ತ್ವನಯೋಸ್ತತ್ತ್ವದರ್ಶಿಭಿಃ' - ಎಂಬ ಮಾತಿನಲ್ಲಿ ಸ್ಪಷ್ಟಪಡಿಸಲಾಗಿದೆ.

ವೇದ - ವೇದಾರ್ಥಗಳನ್ನು ಜೊತೆಗೂಡಸಿದವರು
        ರಾಮವತಾರದ ಸಂದರ್ಭದಲ್ಲಿ ವೇದಾಭಿಮಾನಿನಿಯಾದ ಸೀತೆಯನ್ನು ಪತಿಯಿಂದ ಬೇರ್ಪಡಿಸಲು ಯತ್ನಿಸಿದಾಗ, ಕೃಷ್ಣ್ಆವತಾರದ ಸಂದರ್ಭದಲ್ಲಿ ವೇದಕ್ಕೆ ಅವಾಂತರಾಭಿಮಾನಿನಿಯಾದ ದ್ರೌಪದಿದೇವಿಯನ್ನು ಪತಿಗಳಿಂದ ಬೇರ್ಪಡಿಸಲು ಯತ್ನಿಸಿದಾಗ - ಅದನ್ನು ಹನುಮಂತನಾಗಿ, ಭೀಮನಾಗಿ ಪ್ರತಿಭಟಿಸಿದ ಶ್ರೀಮುಖ್ಯಪ್ರಾಣನೇ ಶ್ರೀ ಮಧ್ವರೂಪವನ್ನು ತಾಳಿ ವೇದಾರ್ಥವನ್ನು ವೇದದಿಂದ ಬೇರ್ಪಡಿಸಲು ಯತ್ನಿಸುತ್ತಿದ್ದ ಅಸುರೀಶಕ್ತಿಯನ್ನು ಸದೆಬಡಿದು ವೇದಾರ್ಥವು ವೇದದ ಜೊತೆಗೆ ಮೆರೆಯುತ್ತಿರುವಂತೆ ಮಾಡಿರುವನು.
- ಶ್ರೀಶ್ರೀ ವಿದ್ಯೇಶತೀರ್ಥರು


ಪ್ರಾಣತತ್ತ್ವದ ಹಿರಿಮೆಯನ್ನು ಸಾರುವ
ಗೀತೆಯಲ್ಲಿ ಪ್ರಾಣತತ್ತ್ವದ ಹಿರಿಮೆ
        ಷಟ್ ಪ್ರಶ್ನ, ಛಾಂದೋಗ್ಯ, ಐತರೇಯ, ಬೃಹದಾರಣ್ಯಕ ಮುಂತಾದ ಉಪನಿಷತ್ತುಗಳಲ್ಲಿ ಸಾರಲ್ಪಟ್ಟಿರುವ ಪ್ರಾಣತತ್ತ್ವದ ಹಿರಿಮೆ ಸರ್ವ ಉಪನಿಷತ್ತುಗಳ ಸಾರವೆಂದು ಪ್ರಸಿದ್ಧವಾಗಿರುವ ಗೀತೆಯಲ್ಲಿ ಪ್ರತಿಪಾದಿತವಾಗಿರಲೇ ಬೇಕುತಾನೇ? ಎಂಬ ಪ್ರಸ್ತಾವನೆಯೊಂದಿಗೆ ಗೀತೆಯ ೧೫ ನೇ ಅಧ್ಯಾಯದ 'ದ್ವಾವಿಮೌ...' ಇತ್ಯಾದಿ ಶ್ಲೋಕಗಳಲ್ಲಿ 'ಬಹೂನಾಂ ಜನ್ಮನಾಮಂತೇ...' ಶ್ಲೋಕದಲ್ಲಿ 'ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ' ಎಂಬ ಶ್ಲೋಕದಲ್ಲಿ, 'ಈಶ್ವರಃ ಸರ್ವಭೂತಾನಾಂ...' ಇತ್ಯಾದಿ ಶ್ಲೋಕಗಳಲ್ಲಿ, 'ಸರ್ವಜ್ಞಾನವಿಮೂಢಾನ್...' ಎಂಬ ಮಾತಿನಲ್ಲಿ, 'ಯೋ ಮಾಮಜಮನಾದಿಂ ಚ ...' ಎಂಬ ಮಾತಿನಲ್ಲಿ, 'ಪವನಃ ಪವತಾಮಸ್ಮಿ' ಎಂಬ ಮಾತಿನಲ್ಲಿ 'ಯೋ ಲೋಕತ್ರಯ ಮಾವಿಶ್ಯ...' ಎಂಬಮಾತಿನಲ್ಲಿ, 'ಯತ್ರ ಯೋಗೇಶ್ವರಃ ಕೃಷ್ಣೋ...' ಎಂಬ ಮಾತಿನಲ್ಲಿ, 'ಸರ್ವಧರ್ಮಾನ್...' ಎಂಬ ಶ್ಲೋಕದಲ್ಲಿ - ಹೀಗೆ ಅನೇಕ ಶ್ಲೋಕಗಳಲ್ಲಿ, ಮಾತುಗಳಲ್ಲಿ ಪ್ರಸ್ತುತವಾದ ಪ್ರಾಣತತ್ತ್ವದ ಹಿರಿಮೆಗಳ ಬಗ್ಗೆ ಈ ಕೃತಿಯಲ್ಲಿ ಬೆಳಕುಚೆಲ್ಲಲಾಗಿದೆ. ಕೆಲವು ಶ್ಲೋಕಗಳಲ್ಲ್, ಮಾತುಗಳಲ್ಲಿ ಪ್ರಾಣದೇವನ ಹಿರಿಮೆಯನ್ನು ಬಲಾತ್ಕಾರವಾಗಿ ಅರ್ಥೈಸಿರುವಂತೆ ಕಂಡುಬರುವುದಾದರೂ 'ಯೋ ಮಾಮಜಮನಾದಿಂ ಚ...' ಇತ್ಯಾದಿ ಮಾತುಗಳಲ್ಲಿ ಪ್ರಾಣತತ್ತ್ವದ ಹಿರಿಮೆಯ ಬಗ್ಗೆ ಸಹಜವಾಗಿಯೇ ಅರ್ಥೈಸಿರಿವಂತೆ ಕಾಣುವುದು.
        ಈ ಕೃತಿಯಲ್ಲಿ ಪ್ರಸ್ತುತವಾದ ಒಂದು ಪ್ರಮೇಯ:

ಮುಖ್ಯಪ್ರಾಣನಿಗೂ ಕಾರಣ
        'ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್' (೧೦-೩) ಎಂಬ ಶ್ಲೋಕದಲ್ಲಿರುವ ಅನಾದಿ ಶಬ್ದವನ್ನು ವ್ಯಾಖ್ಯಾನಿಸುತ್ತ ಶ್ರೀ ಮಧ್ವರು ಮುಖ್ಯಪ್ರಾಣನ ಮಹತ್ತ್ವವನ್ನು ಸೂಚಿಸಿರುವರು.
        ಅವರು 'ಅನಸ್ಯಾಪಿ ಆದಿಃ ಅನಾದಿಃ' ಎಂದು ವ್ಯಾಖ್ಯಾನಿಸಿ, ಜಗತ್ ಸರ್ಜನ, ಸರ್ವಪ್ರಾಣಿಗಳ ಶರೀರಧಾರಣೆ ಮುಂತಾದ ಮಹಾಮಹಿಮೋಪೇತನಾದ ಮುಖ್ಯಪ್ರಾಣನಿಗೂ ಭಗವಂತನು ಕಾರಣನು ಎಂಬ ಆಶಯವನ್ನು 'ಅಪಿ' ಶಬ್ದದಿಂದ ವ್ಯಕ್ತಪಡಿಸಿದ್ದಾರೆ.
            ಹೀಗೆ ಗೀತೆಯ 'ಅನಾದಿ' ಶಬ್ದದಿಂದ ಮುಖ್ಯಪ್ರಾಣನ ಜೀವೋತ್ತಮತ್ವಕ್ಕೆ ದ್ಯೋತಕವಾದ ಸಕಲ ಪ್ರಾಣಿಗಳ ಶರೀರಧಾರಣೆ ಮೊದಲಾದ ಮಹಾಮಹಿಮೆಗಳು ಸೂಚಿತವಾಗಿವೆ.